ಸಾರಾಂಶ
ಭಾರೀ ಮಳೆಯಿಂದ ದೇವಸ್ಥಾನದ ಗೋಡೆ ಕುಸಿದು ಏಳು ಭಕ್ತರು ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ಆಂಧ್ರಪ್ರದೇಶದ ಸಿಂಹಾಚಲಂನಲ್ಲಿ ನಡೆದಿದೆ.
ವಿಶಾಖಪಟ್ಟಣಂ: ಭಾರೀ ಮಳೆಯಿಂದ ನೆನೆದ ದೇವಸ್ಥಾನದ ಗೋಡೆ ಕುಸಿದು ಏಳು ಭಕ್ತರು ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ಆಂಧ್ರಪ್ರದೇಶದ ಸಿಂಹಾಚಲಂನಲ್ಲಿ ನಡೆದಿದೆ.
ಇಲ್ಲಿನ ವರಾಹ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಆಚರಣೆಯ ಕಾರ್ಯಕ್ರಮ ನಡೆಯುತ್ತಿತ್ತು. ಆದರೆ ಮುಂಜಾನೆ ಸಂಭವಿಸಿದ ಭಾರೀ ಮಳೆಯಿಂದ ಟಿಕೆಟ್ ಕ್ಯೂ ಬಳಿಯ ಗೋಡೆ ಕುಸಿದು ದುರಂತ ಸಂಭವಿಸಿದೆ.
ಘಟನೆಯಲ್ಲಿ ಏಳು ಮಂದಿ ಭಕ್ತರು ಸಾವನ್ನಪ್ಪಿದ್ದಾರೆ. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಮೂವರ ಸಮಿತಿ ರಚಿಸಿ ತನಿಖೆಗೆ ಆದೇಶಿಸಿದ್ದು, ಮೃತರ ಕುಟುಂಬಸ್ಥರಿಗೆ ರಾಜ್ಯ ಸರ್ಕಾರ 25 ಲಕ್ಷ ರು., ಗಾಯಾಳುಗಳಿಗೆ 3 ಲಕ್ಷ ರು. ಪರಿಹಾರ ಘೋಷಿಸಿದೆ. ಜೊತೆಗೆ ಕುಟುಂಬಸ್ಥರಿಗೆ ದತ್ತಿ ಇಲಾಖೆಯಡಿ ಉದ್ಯೋಗದ ಭರವಸೆ ನೀಡಿದೆ. ಇನ್ನು ಕೇಂದ್ರ ಕೂಡ ನೆರವು ನೀಡಿದ್ದು, ಮೃತರ ಕುಟುಂಬಸ್ಥರಿಗೆ 2 ಲಕ್ಷ ರು., ಗಾಯಾಳುಗಳಿಗೆ 50 ಸಾವಿರ ರು. ನೀಡುವುದಾಗಿ ಘೋಷಿಸಿದೆ.
ಘಟನೆಗೆ ಪ್ರಧಾನಿ ನರೇಂದ್ರ, ರಾಷ್ಟ್ರಪತಿ ದ್ರೌಪದಿ ಮುರ್ಮು, ಆಂದ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.