ದಿಲ್ಲಿ: ಭಾರಿ ಮಳೆಗೆ 9 ಬಲಿ

| Published : Aug 02 2024, 12:45 AM IST

ಸಾರಾಂಶ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬುಧವಾರ ರಾತ್ರಿ ಇಡೀ ಸುರಿದ ಭಾರೀ ಮಳೆಗೆ 9 ಮಂದಿ ಅಸುನೀಗಿದ್ದಾರೆ. ಹಲವು ಭಾಗಗಳು ಜಲಾವೃತವಾಗಿವೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ.

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬುಧವಾರ ರಾತ್ರಿ ಇಡೀ ಸುರಿದ ಭಾರೀ ಮಳೆಗೆ 9 ಮಂದಿ ಅಸುನೀಗಿದ್ದಾರೆ. ಹಲವು ಭಾಗಗಳು ಜಲಾವೃತವಾಗಿವೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ.

ವಿಶೇಷವೆಂದರೆ ಸಂಸತ್‌ ಭವನದ ಆವರಣದಲ್ಲೂ ನೀರು ನುಗ್ಗಿದ್ದು, ಹೊಸ ಸಂಸತ್‌ ಭವನದ ಒಂದು ಭಾಗದಲ್ಲಿ ಸೋರಿಕೆ ಕಂಡುಬಂದಿದೆ.

ಆ.5ರ ವರೆಗೆ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿ ರೆಡ್‌ ಅಲರ್ಟ್‌ ಘೋಷಿಸಿದೆ. ಇದರ ಬೆನ್ನಲ್ಲೇ ಶಾಲಾ-ಕಾಲೇಜುಗಳನ್ನು ಬಂದ್‌ ಮಾಡಲಾಗಿದೆ. ಭಾರಿ ಮಳೆಯಿಂದಾಗಿ ಕೆಲವು ವಿಮಾನ ಸಂಚಾರ ರದ್ದುಗೊಳಿಸಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಜೈಪುರ ಕಡೆ 8 ವಿಮಾನ ಹಾಗೂ ಲಖನೌ ಕಡೆ 2 ವಿಮಾನವನ್ನು ಕನಿಷ್ಠ 10 ವಿಮಾನಗಳ ಮಾರ್ಗವನ್ನು ಬದಲಾಯಿಸಲಾಗಿದೆ.

ರಸ್ತೆಗಳು ಜಲಾವೃತವಾಗಿದ್ದು, ಸವಾರರು ಪರದಾಡುವಂತಾಗಿದೆ. ಭಾರಿ ಮಳೆಯಿಂದಾಗಿ ಮೆಹ್ರೌಲಿ-ಛತ್ತರ್‌ಪುರ ರಸ್ತೆಯಲ್ಲಿ ಒಂದೂವರೆ ಗಂಟೆ ಕಾಲ ಸವಾರರು ಟ್ರಾಫಿಕ್‌ನಲ್ಲೇ ಸಿಲುಕಿಕೊಂಡಿದ್ದರು. ಇನ್ನು ಗುರುಗ್ರಾಮ್, ನೋಯ್ಡಾ, ಗಾಜಿಯಾಬಾದ್ ಮತ್ತು ಫರಿದಾಬಾದ್‌ ಕಡೆ ಹೋಗುವ ರಸ್ತೆಗಳಲ್ಲಿ ನೀರು ನಿಂತಿದ್ದು, ಹಲವಾರು ರೆಸ್ಟೋರೆಂಟ್‌ಗಳು ಹಾಗೂ ಶೋರೂಂಗಳಿಗೆ ನೀರು ನುಗ್ಗಿವೆ.

==

ಹಿಮಾಚಲ ಮೇಘಸ್ಫೋಟಕ್ಕೆ 3 ಬಲಿ, 30 ಮಂದಿ ಕಾಣೆ

ಶಿಮ್ಲಾ: ಕೇರಳದ ವಯನಾಡಿನಲ್ಲಿ ಭೂಕುಸಿತದ ಭೀಕರತೆಗೆ ಜನ ನಲುಗಿ ಹೋಗಿರುವ ನಡುವೆಯೇ ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ ಸಂಭವಿಸಿದೆ. ಇಲ್ಲಿನ ಮೂರು ಜಿಲ್ಲೆಗಳಲ್ಲಿ ಸಂಭವಿಸಿದ ಮೇಘಸ್ಫೋಟಕ್ಕೆ ನಾಲ್ವರು ಬಲಿಯಾಗಿದ್ದು, 50ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.ಹಿಮಾಚಲ ಪ್ರದೇಶದ ಪ್ರಮುಖ ಪ್ರವಾಸಿ ಆಕರ್ಷಣೆಯ ಜಿಲ್ಲೆಗಳಾಗಿರುವ ಶಿಮ್ಲಾ, ಕುಲು, ಮಂಡಿ ಭಾಗದಲ್ಲಿ ಗುರುವಾರ ಮುಂಜಾನೆ ಈ ದುರಂತ ನಡೆದಿದೆ. ಕುಲುವಿನ ನಿರ್ಮಂದ್‌, ಸೈಂಜ್, ಮಲಾನಾ, ಮಂಡಿಯ ಪಾಧಾರ್‌, ಶಿಮ್ಲಾದ ರಾಂಪುರದಲ್ಲಿ ಮೇಘಸ್ಫೋಟ ಸಂಭವಿಸಿದೆ.ಆಗ ಸಂಭವಿಸಿದ ದಿಢೀರ್‌ ಪ್ರವಾಹದ ದುರಂತಕ್ಕೆ ಹಲೆವೆಡೆ ಆಸ್ತಿ ಪಾಸ್ತಿಗಳು ನಷ್ಟವಾಗಿದ್ದು, ಮನೆಗಳು, ಶಾಲೆ, ಆಸ್ಪತ್ರೆಗಳು ಹಾನಿಗೀಡಾಗಿವೆ. ರಸ್ತೆಗಳು ಕೊಚ್ಚಿ ಹೋಗಿದ್ದು, ಮನಾಲಿ ಸೇರಿದಂತೆ ಹಲವು ಕಡೆಗಳಲ್ಲಿ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ಬಿಯಾಸ್‌ ನದಿಯ ಅಬ್ಬರ ಮತ್ತು ಭೂಕುಸಿತ ಪರಿಣಾಮ ಮನಾಲಿ-ಚಂಡೀಗಢ ರಾಷ್ಟ್ರೀಯ ಹೆದ್ದಾರಿಯೂ ಹಾನಿಗೊಳಗಾಗಿದೆ. ಇನ್ನು ಜಲವಿದ್ಯುತ್ ಕಾಮಗಾರಿ ಪ್ರದೇಶದ ಸಮೀಪದಲ್ಲಿರುವ ಕೆಲವು ನಾಗರಿಕರು ಮೇಘಸ್ಪೋಟದ ಬಳಿಕ ನಾಪತ್ತೆಯಾಗಿದ್ದಾರೆ.

50 ಮಂದಿ ಕಾಣೆ:ದುರಂತದಲ್ಲಿ ರಾಜ್ಯದ ವಿವಿಧ ಕಡೆ 50ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ಇಂಡೋ-ಟಿಬೆಟಿಯನ್ ಗಡಿ ಪೊಲೀಸರು, ಸ್ಥಳೀಯ ಪೊಲೀಸರು, ಗೃಹ ರಕ್ಷಕದಳ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಎರಡು ದಿನಗಳ ಕಾಲ ಈ ಮೂರು ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದೆ.

ದುರಂತದ ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ಸುಖ್ವೀಂದರ್ ಸಿಂಗ್ ಪ್ರತಿಕ್ರಿಯಿಸಿದ್ದು,‘ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೆ ರಸ್ತೆ ಸೇರಿದಂತೆ ಕೆಲ ಮೂಲ ಸೌಕರ್ಯಗಳು ಹಾನಿಗೊಳಗಾಗಿವೆ’ ಎಂದಿದ್ದಾರೆ.

==