ಸಾರಾಂಶ
2008ರ ಮುಂಬೈ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲೇಬೇಕು ಎಂದು ನನಗೆ ಬಲವಾಗಿ ಅನ್ನಿಸಿತ್ತು. ಈ ಬಗ್ಗೆ ಪ್ರಧಾನಿ ಹಾಗೂ ಸಂಬಂಧಿಸಿದವರ ಬಳಿ ಚರ್ಚಿಸಿದ್ದೆ. ಆದರೆ ಸರ್ಕಾರದ ಹಿರಿಯರು ಒಪ್ಪಿರಲಿಲ್ಲ’ ಎಂದು ಪಿ.ಚಿದಂಬರಂ ಸ್ಫೋಟಕ ಹೇಳಿಕೆ ನೀಡಿaದ್ದಾರೆ.
ನವದೆಹಲಿ: ‘160ಕ್ಕೂ ಹೆಚ್ಚು ಜನರನ್ನು ಬಲಿಪಡೆದ 2008ರ ಮುಂಬೈ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲೇಬೇಕು ಎಂದು ನನಗೆ ಬಲವಾಗಿ ಅನ್ನಿಸಿತ್ತು. ಈ ಬಗ್ಗೆ ಪ್ರಧಾನಿ ಹಾಗೂ ಸಂಬಂಧಿಸಿದವರ ಬಳಿ ಚರ್ಚಿಸಿದ್ದೆ. ಆದರೆ ಸರ್ಕಾರದ ಹಿರಿಯರು ಆ ಪ್ರಸ್ತಾಪಪ ಒಪ್ಪಿರಲಿಲ್ಲ’ ಎಂದು ದಾಳಿ ನಡೆದ 3 ದಿನಗಳ ಬಳಿಕ ಗೃಹ ಸಚಿವರಾಗಿದ್ದ ಪಿ.ಚಿದಂಬರಂ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ ಅವರು, ‘ಹಣಕಾಸು ಸಚಿವನಾಗಿದ್ದ ನನ್ನನ್ನು ಗೃಹ ಸಚಿವನನ್ನಾಗಿ ಮಾಡಲಾಯಿತು. ಆ ವೇಳೆ, ಪಾಕಿಸ್ತಾನದ ಮೇಲೆ ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ನನಗೆ ವೈಯಕ್ತಿಕವಾಗಿ ಅನ್ನಿಸಿತ್ತು. ಹಾಗೆಂದು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ವಿದೇಶಾಂಗ ಸಚಿವರಾಗಿದ್ದ ಪ್ರಣವ್ ಮುಖರ್ಜಿಯವರಲ್ಲೂ ಹೇಳಿದ್ದೆ. ಆದರೆ ಅವರು ರಾಜತಾಂತ್ರಿಕ ಮಾರ್ಗದಲ್ಲಿ ವ್ಯವಹರಿಸಲು ನಿರ್ಧರಿಸಿದರು.’ ಎಂದರು.
ಅಂತೆಯೇ, ‘ಆ ಉಗ್ರದಾಳಿಗೆ ಪ್ರತಿಯಾಗಿ ಯುದ್ಧ ಶುರು ಮಾಡಬೇಡಿ ಎಂದು ವಿಶ್ವವೇ ನಮಗೆ ಹೇಳುತ್ತಿತ್ತು. ಅಮೆರಿಕದ ವಿದೇಶಾಂಗ ಸಚಿವೆಯಾಗಿದ್ದ ಕಾಂಡೋಲೀಜಾ ರೈಸ್ ನನ್ನನ್ನು ಭೇಟಿಯಾಗಿ, ದಯವಿಟ್ಟು ಸಮರ ಸಾರುವ ಮೂಲಕ ಪ್ರತಿಕ್ರಿಯಿಸಬೇಡಿ ಎಂದು ಕೇಳಿಕೊಂಡಿದ್ದರು. ಕೊನೆಗೆ ನಾನು ನಿರ್ಧಾರವನ್ನು ಸರ್ಕಾರಕ್ಕೆ ಬಿಟ್ಟೆ’ ಎಂದರು. ಜತೆಗೆ, ‘ಹಾಗೆಂದಮಾತ್ರಕ್ಕೆ ಅಂದಿನ ಸರ್ಕಾರ ಉಗ್ರರ ಪ್ರತಿ ಮೃದು ಧೋರಣೆ ತೋರಿಸಿತು ಎಂದಲ್ಲ. 2025ರ ಆಪರೇಷನ್ ಸಿಂದೂರದ ಮೂಲಕ ಪ್ರತೀಕಾರ ಮತ್ತು 2008ಅನ್ನು ಹೋಲಿಸಿ ನೋಡಲಾಗದು. ಕಾರಣ, ಅಂದು ನಮ್ಮ ಸೇನೆಯ ಯುದ್ಧಸನ್ನದ್ಧತೆ, ಗುಪ್ತಚರ ಸೇವೆ ಭಿನ್ನವಾಗಿತ್ತು.’ ಎಂಬುದನ್ನೂ ಅವರು ಹೇಳಿದರು.