ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌ ಅವರು ಪ್ರತಿವಾರಿ ಕೊನೆಯ ಚುನಾವಣೆ ಎಂಬ ಭಾವನಾತ್ಮಕ ಮನವಿಯೊಂದಿಗೆ ಸ್ಪರ್ಧಿಸುತ್ತಿರುವುದಾಗಿ ಅಜಿತ್‌ ಪವಾರ್‌ ಟೀಕೆ ಮಾಡಿದ್ದಾರೆ.

ಮುಂಬೈ: ‘ಕೆಲವರು ಯಾವಾಗ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಲ್ಲಿಸುತ್ತಾರೋ ಗೊತ್ತಿಲ್ಲ. ಪ್ರತಿ ಬಾರಿ ‘ಇದು ನನ್ನ ಕೊನೆಯ ಚುನಾವಣೆ’ ಎಂಬ ಭಾವನಾತ್ಮಕ ಸಂದೇಶದೊಂದಿಗೆ ಜನರ ಮುಂದೆ ಬರುತ್ತಾರೆ.

ಆದರೆ ಅವರ ಕೊನೆ ಚುನಾವಣೆ ಯಾವಾಗಲೋ ಗೊತ್ತಿಲ್ಲ’ ಎಂದು ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌ ಅವರು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್‌ ಅವರ ಹೆಸರೆತ್ತದೇ ಪರೋಕ್ಷವಾಗಿ ಟೀಕಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಶರದ್‌ ‘ಡಿಸಿಎಂ ಅಜಿತ್ ಪವಾರ್ ಅವರು ನನ್ನ ಸಾವಿಗೆ ಪ್ರಾರ್ಥಿಸುತ್ತಿದ್ದಾರೆ. ಅವರ ಹೇಳಿಕೆ ಅಸಭ್ಯ ಮತ್ತು ಅಮಾನವೀಯ. ಅಜಿತ್ ಎಂತಹ ವ್ಯಕ್ತಿ ಎಂದು ಮಹಾರಾಷ್ಟ್ರಕ್ಕೆ ಈಗ ತಿಳಿದಿದೆ’ ಎಂದು ಚಾಟಿ ಬೀಸಿದ್ದಾರೆ.

ಕಳೆದ ವರ್ಷ ಜುಲೈನಲ್ಲಿ ಅಜಿತ್‌, ಎನ್‌ಸಿಪಿಯ8 ಶಾಸಕರೊಂದಿಗೆ ರಾಜ್ಯ ಬಿಜೆಪಿ- ಶಿವಸೇನೆ (ಸಿಎಂ ಏಕ್‌ನಾಥ್‌ ಶಿಂಧೆ) ಬಣದ ಮೈತ್ರಿ ಸರ್ಕಾರ ಸೇರಿಕೊಂಡಿದ್ದರು.