ಸಾರಾಂಶ
ಗಾಂಧಿನಗರ: ಮಾ.8ರಂದು ಅಂತಾರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ಗುಜರಾತ್ನ ನವಸಾರಿ ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಲಿರುವ ಕಾರ್ಯಕ್ರಮದಲ್ಲಿ ಸಂಪೂರ್ಣ ಭದ್ರತಾ ವ್ಯವಸ್ಥೆಯನ್ನು ಮಹಿಳಾ ಪೊಲೀಸ್ ಸಿಬ್ಬಂದಿಗಳೇ ನಿರ್ವಹಿಸಲಿದ್ದಾರೆ ಎಂದು ಗುಜರಾತ್ ಗೃಹ ಸಚಿವ ಹರ್ಷ ಸಂಘವಿ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ‘ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ, ನವಸಾರಿಯ ವನ್ಸಿ ಬೋರ್ಸಿ ಗ್ರಾಮದಲ್ಲಿರುವ ಹೆಲಿಪ್ಯಾಡ್ಗೆ ಪ್ರಧಾನಿ ಆಗಮಿಸುವುದರಿಂದ ಹಿಡಿದು, ಕಾರ್ಯಕ್ರಮದ ಮುಕ್ತಾಯದವರೆಗೆ ಸಂಪೂರ್ಣ ಭದ್ರತಾ ವ್ಯವಸ್ಥೆಯನ್ನು ಮಹಿಳಾ ಪೊಲೀಸರು ಮಾತ್ರ ನಿರ್ವಹಿಸಲಿದ್ದಾರೆ’ ಎಂದು ಹೇಳಿದ್ದಾರೆ.
ಗಡೀಪಾರಿಗೆ ತಡೆ ಕೋರಿದ್ದ ರಾಣಾ ಅರ್ಜಿ ತಿರಸ್ಕೃತ, ಮತ್ತೆ ಸುಪ್ರೀಂಗೆ ಮೇಲ್ಮನವಿ
ನವದೆಹಲಿ: ತನ್ನನ್ನು ಭಾರತಕ್ಕೆ ಗಡೀಪಾರು ಮಾಡುವ ಆದೇಶಕ್ಕೆ ತಡೆ ಕೋರಿ 2008ರ ಮುಂಬೈ ಸರಣಿ ಸ್ಫೋಟ ಪ್ರಕರಣದ ಸಂಚುಕೋರ ತಹಾವ್ವುರ್ ರಾಣಾ ಸಲ್ಲಿಸಿದ್ದ ತುರ್ತು ಅರ್ಜಿಯನ್ನು ಅಮೆರಿಕದ ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
ಆದರ ಬೆನ್ನಲ್ಲೇ ಆತ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಇದೇ ರೀತಿಯ ಮನವಿ ಮಾಡಿ ಮತ್ತೊಂದು ಅರ್ಜಿ ಸಲ್ಲಿಸಿದ್ದಾನೆ.ಈ ಮೊದಲು ರಾಣಾ ಸಲ್ಲಿಸಿದ್ದ ಅರ್ಜಿಯಲ್ಲಿ, ‘ಒಂದು ವೇಳೆ ನನ್ನನ್ನು ಭಾರತಕ್ಕೆ ಗಡೀಪಾರು ಮಾಡಿದರೆ, ನಾನು ಪಾಕಿಸ್ತಾನದ ಮೂಲದ ಮುಸ್ಲಿಂ ಎಂದು ನನಗೆ ಜೈಲಲ್ಲಿ ಹಿಂಸಾತ್ಮಕ ಕಿರುಕುಳ ನೀಡುವ ಸಾಧ್ಯತೆ ಇದೆ. ಇದರಿಂದ ನನ್ನ ಸಾವು ಸಂಭವಿಸಬಹುದು. ಹೀಗಾಗಿ ನನ್ನನ್ನು ಭಾರತಕ್ಕೆ ಗಡೀಪಾರು ಮಾಡಬೇಡಿ’ ಎಂದು ಕೋರಿದ್ದ.
ಅದನ್ನು ಮಾ.6ರಂದು ನ್ಯಾ. ಎಲೆನಾ ಕಗನ್ ತಿರಸ್ಕರಿಸಿದ್ದಾರೆ. ಅದರ ಬೆನ್ನಲ್ಲೇ ರಾಣಾ, ಮತ್ತೊಂದು ತುರ್ತು ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಾಬರ್ಟ್ಸ್ ಅವರಿಗೆ ಸಲ್ಲಿಸಿದ್ದಾನೆ. ಅದಿನ್ನೂ ವಿಚಾರಣೆಗೆ ಬರಬೇಕಿದೆ.