ಅಮೇಠಿ: ಇರಾನಿ, ಗಾಂಧಿ ಕುಟುಂಬದ ಮಹಾಯುದ್ಧ

| Published : May 19 2024, 01:49 AM IST / Updated: May 19 2024, 05:10 AM IST

ಅಮೇಠಿ: ಇರಾನಿ, ಗಾಂಧಿ ಕುಟುಂಬದ ಮಹಾಯುದ್ಧ
Share this Article
  • FB
  • TW
  • Linkdin
  • Email

ಸಾರಾಂಶ

ಅಮೇಠಿ ಲೋಕಸಭಾ ಕ್ಷೇತ್ರ, ನೆಹರು-ಗಾಂಧಿ ಕುಟುಂಬದ ಮತ್ತೊಂದು ರಾಜಕೀಯ ಕರ್ಮಭೂಮಿ.

ಅಮೇಠಿ ಲೋಕಸಭಾ ಕ್ಷೇತ್ರ, ನೆಹರು-ಗಾಂಧಿ ಕುಟುಂಬದ ಮತ್ತೊಂದು ರಾಜಕೀಯ ಕರ್ಮಭೂಮಿ. ಕಳೆದ ಚುನಾವಣೆಯಲ್ಲಿ ಸ್ಮೃತಿ ಇರಾನಿ ವಿರುದ್ಧ ಸೋತು ರಾಹುಲ್ ಗಾಂಧಿ ರಾಷ್ಟ್ರಮಟ್ಟದಲ್ಲಿ ಮುಖಭಂಗಕ್ಕೀಡು ಮಾಡಿದ್ದ ಕ್ಷೇತ್ರ ಅಮೇಠಿ. ಈ ಬಾರಿ ಅಮೇಠಿಯಿಂದ ರಾಹುಲ್ ಗಾಂಧೀನಾ? ಪ್ರಿಯಾಂಕಾ ಗಾಂಧೀನಾ? ಎನ್ನುವ ಗೊಂದಲವಿತ್ತು. ಆದರೆ ನಾಮಪತ್ರ ಸಲ್ಲಿಕೆಯ ಕೊನೇ ದಿನ ರಾಹುಲ್ ಗಾಂಧಿ ರಾಯ್‌ಬರೇಲಿ ಆಯ್ಕೆ ಮಾಡಿಕೊಂಡಿದ್ದರು. ಪ್ರಿಯಾಂಕಾ ಗಾಂಧಿ ಚುನಾವಣಾ ಹೋರಾಟಕ್ಕಿಳಿಯದೇ ಪ್ರಚಾರದ ಜವಾಬ್ದಾರಿ ಹೊತ್ತಿದ್ದಾರೆ. ಕಾಂಗ್ರೆಸ್ ಈ ಬಾರಿ ಅಮೇಠಿಯವರೇ ಆದ ಕಿಶೋರಿ ಲಾಲ್ ಶರ್ಮಾ ಎಂಬ ಗಾಂಧಿ ಕುಟುಂಬದ ನಿಷ್ಠ ವ್ಯಕ್ತಿಗೆ ಟಿಕೆಟ್ ನೀಡಿದೆ. ಬಿಜೆಪಿ ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಮತ್ತೆ ಟಿಕೆಟ್ ಕೊಟ್ಟಿದೆ. ಕಾಂಗ್ರೆಸ್‌ನಿಂದ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಆಗಿದ್ದರೂ ಇದು, ಸ್ಮೃತಿ ಇರಾನಿ ಮತ್ತು ಗಾಂಧಿ ಕುಟುಂಬದ ಮಧ್ಯದ ಮಹಾಯುದ್ಧ.

ಕರ್ಮಭೂಮಿ ಉಳಿಸಿಕೊಳ್ಳಲು ಹೋರಾಟ: 2019ರ ಲೋಕಸಭಾ ಚುನಾವಣೆಯಲ್ಲಿ ಅಮೇಠಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಅವರ ಸೋಲನ್ನು ಗಾಂಧಿ-ನೆಹರು ಕುಟುಂಬ ಇನ್ನೂ ಅರಗಿಸಿಕೊಂಡಿಲ್ಲ. ರಾಹುಲ್ ಅಥವಾ ಪ್ರಿಯಾಂಕಾ ಇಬ್ಬರಲ್ಲಿ ಯಾರೇ ಸ್ಪರ್ಧೆ ಮಾಡಿದರೂ ಬಿಜೆಪಿ ತನ್ನೆಲ್ಲ ಅಸ್ತ್ರಗಳನ್ನೂ ಅಮೇಠಿಯಲ್ಲಿ ಪ್ರಯೋಗಿಸುತ್ತೆ ಅಂತ ಗೊತ್ತು. ಅದೇ ಕಾರಣಕ್ಕೆ ನಿಷ್ಠಾವಂತನಿಗೆ ಟಿಕೆಟ್ ಕೊಟ್ಟು ರಕ್ಷಣಾತ್ಮಕ ಆಟವಾಡುತ್ತಿದೆ. ರಾಯ್‌ಬರೇಲಿಯಲ್ಲಿ ರಾಹುಲ್ ಗಾಂಧಿ ಗೆಲ್ಲಬೇಕು, ಅಮೇಠೀಯಲ್ಲಿ ರಾಹುಲ್ ಸೋಲಿಗೆ ಕಾರಣರಾದ ಸ್ಮೃತಿ ಇರಾನಿ ಸೋಲಬೇಕು. ಇದೇ ಕಾಂಗ್ರೆಸ್‌ನ ಒನ್ ಲೈನ್ ಅಜೆಂಡಾ.

ಒಂದು ವೇಳೆ ಈ ಬಾರಿಯೂ ಸ್ಮೃತಿ ಇರಾನಿ ಗೆದ್ದರೆ ಅಮೇಠೀ ಶಾಶ್ವತವಾಗಿ ನಮ್ಮ ಕೈತಪ್ಪುತ್ತೆ ಅನ್ನೋ ಆತಂಕ. ಆದ್ದರಿಂದಲೇ ರಾಜಸ್ಥಾನದ ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ಅಮೇಠಿ ಕ್ಷೇತ್ರದ ವೀಕ್ಷಕರಾಗಿ ಜವಾಬ್ದಾರಿ ಹೊತ್ತಿದ್ದಾರೆ. ಪ್ರಿಯಾಂಕಾ ಗಾಂಧಿ ಬಿಡುವಿಲ್ಲದಂತೆ ಅಮೇಠಿಯಲ್ಲೂ ಪ್ರಚಾರ ಮಾಡುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಪ್ರಚಾರ ಮಾಡುತ್ತಿರೋದು ಎರಡೇ ಕ್ಷೇತ್ರಗಳಲ್ಲಿ. ರಾಯ್‌ಬರೇಲಿಯಲ್ಲಿ ಉಳಿದುಕೊಂಡು ಪಕ್ಕದ ಕ್ಷೇತ್ರದಲ್ಲಿ ಪಕ್ಷದ ಬಾವುಟ ಮತ್ತೆ ಹಾರಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ.

ಸ್ಮೃತಿ ಇರಾನಿಯನ್ನು ಗೆಲ್ಲಿಸಲು ಬಿಜೆಪಿ ಸರ್ವ ಪ್ರಯತ್ನ:2014ರಲ್ಲಿ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಿ ಸೋತಿದ್ದ ಸ್ಮೃತಿ ಇರಾನಿ, ಅಮೇಠಿ ಜತೆ ನಿರಂತರ ಸಂಬಂಧ ಇಟ್ಟುಕೊಂಡಿದ್ದರು. ಸಚಿವೆಯಾಗಿ ತಿಂಗಳಿಗೆ ಒಮ್ಮೆ, ಕೆಲವೊಮ್ಮೆ ಎರಡು ಬಾರಿ ಬಂದು ಹೋಗುತ್ತಿದ್ದರು. 2017 ರಲ್ಲಿ ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರ ಬಂದದ್ದು ಮತ್ತು ಆಗಿದ್ದಾಗ್ಗೆ ಬಂದು ಹೋಗುತ್ತಿದ್ದ ಕಾರಣಕ್ಕೆ 2019ರಲ್ಲಿ ಗೆಲ್ಲುವುದು ಸಾಧ್ಯವಾಯ್ತು. ಇತ್ತೀಚೆಗೆ ಅಮೇಠಿಯಲ್ಲಿ ಸ್ಮೃತಿ ಇರಾನಿ ಪರ ಪ್ರಚಾರ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಗಾಂಧಿ ಕುಟುಂಬಕ್ಕೆ ಅಮೇಠಿಯ 10 ಹಳ್ಳಿಗಳ ಹೆಸರೇಳಲು ಬರುವುದಿಲ್ಲ. ಸ್ಮೃತಿ ಇರಾನಿ 100 ಹಳ್ಳಿಗಳ ಹೆಸರು ಹೇಳುತ್ತಾರೆ ಎಂದು ಪ್ರಚಾರ ಮಾಡಿದ್ದರು. 2019ರ  ಗೆಲುವು ಒನ್ ಟೈಂ ವಂಡರ್ ಅಲ್ಲ ಅಂತ ಸಾಧಿಸಲು ಬಿಜೆಪಿಯೂ ಪ್ರಯತ್ನ ನಡೆಸಿದೆ. 

ಅಭಿವೃದ್ಧಿ ಗೆಲ್ಲುತ್ತಾ..? ಅನುಕಂಪ ಗೆಲ್ಲುತ್ತಾ..?: ಅಮೇಠೀಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕು ಬಿಜೆಪಿ ತೆಕ್ಕೆಯಲ್ಲಿದ್ದರೆ, ಒಂದು ಸಮಾಜವಾದಿ ಪಕ್ಷ ಗೆದ್ದಿದೆ. ಶಾಸಕರ ಬಲ ಮತ್ತು ಸಂಘಟನೆ ವಿಷಯದಲ್ಲಿ ಬಿಜೆಪಿ ಪ್ರಬಲವಾಗಿದೆ. ತನ್ನ ಸಂಪ್ರದಾಯಿಕ ಮತಗಳ ಜತೆ ಸಮಾಜವಾದಿ ಪಕ್ಷದ ಮೈತ್ರಿ ಬಲ ಕಾಂಗ್ರೆಸ್ ಗಿದೆ. ಸ್ಮೃತಿ ಇರಾನಿ ಅಮೇಠಿಯಲ್ಲಿ ಸಂಸದೆಯಾದ ನಂತರ ಅಮೇಠಿಗೂ ಅಭಿವೃದ್ಧಿಯ ರುಚಿ ಅಂಟಿದೆ. ಅಭಿವೃದ್ಧಿ ಕಾರಣಕ್ಕೆ ಬಿಜೆಪಿಗೆ ಮತ ಹಾಕ್ತೀವಿ ಎನ್ನುವ ಬಹಳಷ್ಟು ಜನ ಅಮೇಠಿಯಲ್ಲಿ ಸಿಗುತ್ತಾರೆ. ಆದ್ರೆ ಕಳೆದ ಬಾರಿ ರಾಹುಲ್ ಸೋಲಿನ ಅನುಕಂಪ ಕಾಂಗ್ರೆಸ್ ಗೆ ಅನುಕೂಲವಾಗಬಹುದು. ಅಮೇಠಿಯಲ್ಲಿ ಸ್ವಾತಂತ್ರ್ಯ ಬಂದ ಇಷ್ಟು ವರ್ಷಗಳ ನಂತರ ಅಭಿವೃದ್ಧಿ ಕೆಲಸಗಳು ಆಗುತ್ತಿವೆ. ಮನೆಗಳಿಗೆ ಶೌಚಾಲಯ, ಗ್ಯಾಸ್ ಸಿಲಿಂಡರ್ ಸಿಕ್ಕಿದೆ. ರಸ್ತೆಗಳ ಸ್ಥಿತಿ ಸುಧಾರಿಸಿದೆ. ನೀರು-ವಿದ್ಯುತ್ ಸಮಸ್ಯೆ ಮೊದಲಿನಷ್ಟಿಲ್ಲ. ಅಭಿವೃದ್ಧಿಯಾಗುತ್ತಿದೆ ನಿಜ, ಆದ್ರೆ ಇನ್ನೂ ಆಗಬೇಕಾದ ಕೆಲಸ ಬಹಳಷ್ಟಿವೆ.===

ಸ್ಮೃತಿ ಇರಾನಿ ಆಡಳಿತದಲ್ಲಿ ಅಭಿವೃದ್ಧಿ ಕಾರ್ಯಗಳು

2019ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರಾಹುಲ್‌ ಗಾಂಧಿ ವಿರುದ್ಧ 50 ಸಾವಿರ ಮತಗಳ ಅಂತರದಿಂದ ಸ್ಮೃತಿ ಇರಾನಿ ಗೆಲುವು ಸಾಧಿಸಿದ್ದರು. ಗೆದ್ದ  ಬಳಿಕ ಅಮೇಠಿಯಲ್ಲೇ ಮನೆ ಮಾಡಿಕೊಂಡು ಕ್ಷೇತ್ರ ಅಭಿವೃದ್ಧಿಗೆ ಒತ್ತು ನೀಡಿದ್ದರು. ಇದರಿಂದ ಅಲ್ಲಿಯ ಜನತೆಗೆ ಮನೆಗಳಿಗೆ ಶೌಚಾಲಯ, ಗ್ಯಾಸ್ ಸಿಲಿಂಡರ್ ಸಿಕ್ಕಿದೆ. ರಸ್ತೆಗಳ ಸ್ಥಿತಿ ಸುಧಾರಿಸಿದೆ. ನೀರು-ವಿದ್ಯುತ್ ಸಮಸ್ಯೆ ಕೊನೆಗೊಂಡಿದೆ. ರೈತರಿಗೆ ಪ್ರಧಾನ ಮಂತ್ರಿ ಕಿಸಾನ್‌ ಯೋಜನೆ ಸೌಲಭ್ಯಗಳು ಲಭಿಸಿವೆ.

==

ಅಮೇಠಿ ಜಾತಿ ಲೆಕ್ಕಾಚಾರ

ಹಿಂದುಳಿದ ವರ್ಗ - 25%

ದಲಿತರು- 23%

ಬ್ರಾಹ್ಮಣ- 18%

ಮುಸ್ಲಿಂ- 17%

ಠಾಕೂರ್‌- 12%

ಇತರೆ- 5%

===

ಅಮೇಠಿಯಲ್ಲಿ ಅರಳಿದ ಕಮಲ

ಅಮೇಥಿಯಲ್ಲಿ ಬಿಜೆಪಿ ಮೊದಲ ಬಾರಿಗೆ ಗೆದ್ದಿದ್ದು 1998ರ ಚುನಾವಣೆಯಲ್ಲಿ. ಸಂಜಯ್ ಸಿನ್ಹಾ ಬಿಜೆಪಿಯಿಂದ ಗೆದ್ದು ಸಂಸದರಾಗಿದ್ದರು. ಸೋನಿಯಾ ಗಾಂಧಿ ರಾಜಕೀಯ ಪ್ರವೇಶದ ನಂತರ ಮಂಕಾಗಿದ್ದ ಬಿಜೆಪಿ 2019 ರಲ್ಲಿ ಸ್ಮೃತಿ ಇರಾನಿ ಮೂಲಕ ಎರಡನೇ ಬಾರಿ ಗೆಲುವು ಕಂಡಿತ್ತು.

==

ಅಮೇಠಿ: ನೆಹರು-ಗಾಂಧಿ ಕುಟುಂಬ

1980- ಸಂಜಯ್ ಗಾಂಧಿ

1981-1991- ರಾಜೀವ್ ಗಾಂಧಿ

1999-2004 : ಸೋನಿಯಾ ಗಾಂಧಿ

2004-2019: ರಾಹುಲ್ ಗಾಂಧಿ