-ಹೊಸ ಸ್ವತಂತ್ರ ಚಳವಳಿ ಆರಂಭಿಸುವ ಇರಾದೆ
ನವದೆಹಲಿ: ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಪಕ್ಷ ತೊರೆಯುವ ನಿರ್ಧಾರ ಅಂತಿಮವಾಗಿದ್ದು, ಶುಕ್ರವಾರ ಅವರು ಚೆನ್ನೈನಲ್ಲಿ ಅಧಿಕೃತವಾಗಿ ರಾಜೀನಾಮೆ ಘೋಷಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಜೂ.2ರಂದು ದೆಹಲಿಗೆ ತೆರಳಿದ ಅಣ್ಣಾಮಲೈ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿಯಾಗಿ ತಮ್ಮ ರಾಜೀನಾಮೆ ಇಂಗಿತ ವ್ಯಕ್ತಪಡಿಸಿದ್ದರು. ನಿತಿನ್ಗೆ ಸುದೀರ್ಘ 5 ಪುಟಗಳ ಪತ್ರವನ್ನು ನೀಡಿ, ಪಕ್ಷ ತೊರೆಯುವ ನಿರ್ಧಾರವನ್ನು ತಿಳಿಸಿದ್ದರು. ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಆರ್ಎಸ್ಎಸ್ ಮಧ್ಯಸ್ಥಿಕೆ ವಹಿಸಿತ್ತು. ಆದರೆ ಪ್ರಯತ್ನ ಫಲಕೊಡದೆ, ಅವರು ಪಕ್ಷದಿಂದ ನಿರ್ಗಮಿಸುವುದು ನಿಶ್ಚಯವಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಜೀನಾಮೆಗೆ ಕಾರಣ?:ಬಿಜೆಪಿಯು ಅಣ್ಣಾಡಿಎಂಕೆ ಜತೆ ಮೈತ್ರಿ ಮಾಡಿಕೊಳ್ಳುವುದು ಅಣ್ಣಾಮಲೈಗೆ ಇಷ್ಟವಿರಲಿಲ್ಲ. ಕಳೆದ ಚುನಾವಣೆಯಲ್ಲಿ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸಬೇಕು ಎಂಬುದು ಅವರ ಇಚ್ಛೆಯಾಗಿತ್ತು. ಆದರೂ ಬಿಜೆಪಿ ಮೈತ್ರಿ ಮಾಡಿಕೊಂಡಿತು. ಅಲ್ಲಿಂದಲೇ ಬಿರುಕು ಆರಂಭವಾಯಿತು. ನಂತರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದರು. ಪಕ್ಷದಲ್ಲಿ ಅವರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಇತ್ತೀಚೆಗೆ ಕೇಂದ್ರದ ತ್ರಿಭಾಷಾ ಸೂತ್ರವನ್ನೂ ಅವರು ವಿರೋಧಿಸಿದ್ದರು.
ಮುಂದಿನ ನಡೆ?:
ಅಣ್ಣಾಮಲೈ ಸದ್ಯ ರಾಜಕೀಯೇತರ ಚಳವಳಿಯೊಂದನ್ನು ಆರಂಭಿಸಲಿದ್ದಾರೆ. ರಾಷ್ಟ್ರೀಯತೆ ಮತ್ತು ತಮಿಳು ತತ್ವಶಾಸ್ತ್ರದ ಸಿದ್ಧಾಂತದ ಮೇಲೆ ಅದು ಕೆಲಸ ಮಾಡಲಿದೆ. ಮುಂದೆ ಅದನ್ನೇ ರಾಜಕೀಯ ಪಕ್ಷವಾಗಿ ಪರಿವರ್ತಿಸಲಿದ್ದಾರೆ ಎನ್ನಲಾಗಿದೆ.