20000 ಯೋಧರ ದಾಳಿಗೆ 1000 ನಕ್ಸಲರು ತತ್ತರ ! ಭಾರೀ ಕಾರ್ಯಾಚರಣೆ

| N/A | Published : Apr 25 2025, 11:55 PM IST / Updated: Apr 26 2025, 04:39 AM IST

ಸಾರಾಂಶ

ಛತ್ತೀಸ್‌ಗಢ ಮತ್ತು ತೆಲಂಗಾಣದ ಗಡಿಭಾಗದ ಬೆಟ್ಟವೊಂದರಲ್ಲಿ ಸೇರಿಕೊಂಡಿದ್ದಾರೆ ಎನ್ನಲಾದ ಸುಮಾರು 1000 ನಕ್ಸಲರ ವಶಕ್ಕೆ 20000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಭಾರೀ ಕಾರ್ಯಾಚರಣೆ ಆರಂಭಿಸಿದ ಬೆನ್ನಲ್ಲೇ ಬೆಚ್ಚಿಬಿದ್ದಿದ್ದಾರೆ.

ರಾಯ್ಪುರ: ಛತ್ತೀಸ್‌ಗಢ ಮತ್ತು ತೆಲಂಗಾಣದ ಗಡಿಭಾಗದ ಬೆಟ್ಟವೊಂದರಲ್ಲಿ ಸೇರಿಕೊಂಡಿದ್ದಾರೆ ಎನ್ನಲಾದ ಸುಮಾರು 1000 ನಕ್ಸಲರ ವಶಕ್ಕೆ 20000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಭಾರೀ ಕಾರ್ಯಾಚರಣೆ ಆರಂಭಿಸಿದ ಬೆನ್ನಲ್ಲೇ ಬೆಚ್ಚಿಬಿದ್ದಿದ್ದಾರೆ. ದೇಶದ ಇತಿಹಾಸದಲ್ಲೇ ಅತಿದೊಡ್ಡ ಕಾರ್ಯಾಚರಣೆ ಶುಕ್ರವಾರ 5ನೇ ದಿನಕ್ಕೆ ಕಾಲಿಟ್ಟ ಬೆನ್ನಲ್ಲೇ ನಕ್ಸಲರು ಶಾಂತಿ ಮಾತುಕತೆಯ ಪ್ರಸ್ತಾಪ ಮುಂದಿಟ್ಟಿದ್ದಾರೆ.

ಸಿಪಿಎಂನ ವಾಯುವ್ಯ ಉಪವಲಯದ ಉಸ್ತುವಾರಿ ರುಪೇಶ್‌ ಮಾತನಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ‘ನಾವು ಶಾಂತಿ ಮಾತುಕತೆಗೆ ಸಿದ್ಧವಿದ್ದೇವೆ. 

ಆದರೆ ಸರ್ಕಾರದ ಉದ್ದೇಶ ಬೇರೆಯೇ ಇದ್ದಂತಿದೆ. ಮಾತುಕತೆಯ ಮೂಲಕ ಸಮಸ್ಯೆ ಪರಿಹಾರ ಮತ್ತು ಶಾಂತಿ ಸ್ಥಾಪನೆ ಸಾಧ್ಯವಿದ್ದರೂ ಸರ್ಕಾರ ಮಾತ್ರ ಹಿಂಸಾತ್ಮಕ ರೀತಿಯನ್ನು ಅನುಸರಿಸುತ್ತಿದೆ. ಇದನ್ನು ಒಂದು ತಿಂಗಳ ಕಾಲವಾದರೂ ನಿಲ್ಲಿಸಬೇಕು’ ಎಂದು ಮನವಿ ಮಾಡಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿರುವ ಬಸ್ತಾರ್‌ನ ಐಜಿಪಿ ಸುಂದರ್‌ರಾಜ್‌, ‘ಭದ್ರತಾಪಡೆಗಳು ಎಲ್ಲರ ಸುರಕ್ಷತೆಗಾಗಿ ಕೆಲಸ ಮಾಡುತ್ತಿದ್ದಾರೆಯೇ ಹೊರತು, ಯಾರಿಗೂ ಹಾನಿ ಮಾಡಲು ಅಲ್ಲ. ಹಿಂಸೆಯನ್ನು ತ್ಯಜಿಸಿ ಮುಖ್ಯವಾಹಿನಿಗೆ ಬರಲು ನಕ್ಸಲರಿಗೆ ಈಗಲೂ ಅವಕಾಶವಿದೆ’ ಎಂದಿದ್ದಾರೆ.