ಸಾರಾಂಶ
ನವದೆಹಲಿ : ದೆಹಲಿಯ ಮದ್ಯ ನೀತಿಯಲ್ಲಿ ಭ್ರಷ್ಟಾಚಾರ ಎಸಗಿದ ಆರೋಪದಡಿ ಜೈಲು ಸೇರಿದ್ದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದ್ದು, 3 ತಿಂಗಳ ಬಳಿಕ ಶುಕ್ರವಾರ ರಾತ್ರಿ ಅವರು ತಿಹಾರ್ ಜೈಲಿಂದ ಹೊರಬಂದಿದ್ದಾರೆ. ಇದೇ ವೇಳೆ, ‘ಸುದೀರ್ಘ ಅವಧಿಯವರೆಗೆ ಒಬ್ಬ ವ್ಯಕ್ತಿಯನ್ನು ಜೈಲಿನಲ್ಲಿ ಇರಿಸುವುದು ಸ್ವಾತಂತ್ರ್ಯವನ್ನು ಕಿತ್ತುಕೊಂಡಂತೆ’ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂಕೋರ್ಟ್, ‘ಕೇಜ್ರಿವಾಲ್ ಮುಖ್ಯಮಂತ್ರಿಗಳ ಕಚೇರಿಗೆ ಹೋಗುವಂತಿಲ್ಲ ಮತ್ತು ದಾಖಲೆಗಳಿಗೆ ಸಹಿ ಹಾಕುವಂತಿಲ್ಲ. ಅಬಕಾರಿ ಹಗರಣದ ಬಗ್ಗೆ ಮಾತನಾಡುವಂತಿಲ್ಲ’ ಎಂದು ಷರತ್ತು ವಿಧಿಸುವ ಮೂಲಕ ಸಿಹಿ-ಕಹಿ ಎರಡನ್ನೂ ನೀಡಿದೆ.
ಸಿಬಿಐ ದಾಖಲಿಸಿದ ಭ್ರಷ್ಟಾಚಾರದ ಪ್ರಕರಣದಲ್ಲಿ ಬಂಧಿತರಾಗಿ ಈ ವರ್ಷದ ಮಾರ್ಚ್ 21ರಿಂದ ಕೇಜ್ರಿವಾಲ್ ಜೈಲಿನಲ್ಲಿದ್ದರು. ಅಕ್ರಮ ಹಣ ವರ್ಗಾವಣೆ ಆರೋಪದಡಿ ಜಾರಿ ನಿರ್ದೇಶನಾಲಯ (ಇ.ಡಿ.) ಅವರನ್ನು ಬಂಧಿಸಿತ್ತು. ಬಳಿಕ ಅವರಿಗೆ ಇ.ಡಿ. ಪ್ರಕರಣದಲ್ಲಿ ಜಾಮೀನು ಸಿಕ್ಕರೂ, ಸಿಬಿಐ ಬಂಧಿಸಿತ್ತು. ಈಗ ಸಿಬಿಐ ಪ್ರಕರಣದಲ್ಲೂ ಜಾಮೀನು ಲಭಿಸಿದೆ.
ಈ ಹಿಂದೆ ಅವರಿಗೆ ಮೇ 10ರಂದು ಲೋಕಸಭೆ ಚುನಾವಣೆಯ ಪ್ರಚಾರದ ಕಾರಣಕ್ಕೆ ಮಧ್ಯಂತರ ಜಾಮೀನು ನೀಡಲಾಗಿತ್ತು. ಜೂ.2ರಂದು ಪುನಃ ಜೈಲಿಗೆ ಹೋಗಿದ್ದರು. ಈಗ ಬಂಧಿತರಾಗಿ 3 ತಿಂಗಳು, 10 ದಿನ (ಸುಮಾರು 100 ದಿನ) ನಂತರ ಅವರಿಗೆ ಮತ್ತೆ ಜಾಮೀನು ಲಭಿಸಿದೆ. ನ್ಯಾ.ಸೂರ್ಯಕಾಂತ್ ಹಾಗೂ ಉಜ್ಜಲ್ ಭೂಯಾನ್ ಅವರ ಪೀಠ 10 ಲಕ್ಷ ರು. ಬಾಂಡ್ ಹಾಗೂ ಇಬ್ಬರ ಖಾತ್ರಿ ನೀಡಬೇಕು ಎಂಬ ಷರತ್ತು ವಿಧಿಸಿ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
ಇ.ಡಿ. ಕೇಸ್ನ ಷರತ್ತುಗಳೇ ಅನ್ವಯ:
‘ಕೇಜ್ರಿವಾಲ್ ಈ ಪ್ರಕರಣದ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡಬಾರದು. ಇ.ಡಿ. ಪ್ರಕರಣದಲ್ಲಿ ಅನ್ವಯಿಸುವ ಎಲ್ಲಾ ಷರತ್ತುಗಳು ಈಗಲೂ ಅನ್ವಯಿಸುತ್ತವೆ’ ಎಂದು ಸುಪ್ರೀಂಕೋರ್ಟ್ ಹೇಳಿದೆ. ಇ.ಡಿ. ಪ್ರಕರಣದಲ್ಲಿ ಜಾಮೀನು ನೀಡುವಾಗ ಸುಪ್ರೀಂಕೋರ್ಟ್, ‘ಕೇಜ್ರಿವಾಲ್ ತಮ್ಮ ಕಚೇರಿಗೆ ಅಥವಾ ದೆಹಲಿ ಸಚಿವಾಲಯಕ್ಕೆ ಭೇಟಿ ನೀಡುವಂತಿಲ್ಲ ಹಾಗೂ ಲೆಫ್ಟಿನೆಂಟ್ ಗವರ್ನರ್ ಅವರ ಅನುಮತಿ ಪಡೆಯುವುದು ತೀರಾ ಅನಿವಾರ್ಯವಿಲ್ಲದ ಹೊರತು ಯಾವುದೇ ಅಧಿಕೃತ ಕಡತಕ್ಕೆ ಸಹಿ ಹಾಕುವಂತಿಲ್ಲ’ ಎಂದು ಷರತ್ತು ವಿಧಿಸಿತ್ತು. ಆ ಷರತ್ತು ಇನ್ನುಮುಂದೆಯೂ ಅನ್ವಯಿಸಲಿದೆ.
ಈ ವೇಳೆ, ಜಾಮೀನು ನೀಡುವ ತನ್ನ ಆದೇಶಕ್ಕೆ ಸಮರ್ಥನೆ ನೀಡಿರುವ ನ್ಯಾಯಪೀಠ, ‘ಕೇಜ್ರಿವಾಲ್ ವಿರುದ್ಧದ ಆರೋಪಗಳ ವಿಚಾರಣೆ ಸದ್ಯಕ್ಕೆ ಮುಗಿಯುವ ಲಕ್ಷಣವಿಲ್ಲ. ಅವರು ದಾಖಲೆಗಳನ್ನು ತಿರುಚುತ್ತಾರೆ ಎಂಬ ಆರೋಪವನ್ನು ಒಪ್ಪಲಾಗದು’ ಎಂದು ಹೇಳಿದೆ.
ತರಾತುರಿಯಲ್ಲಿ ಸಿಬಿಐ ಬಂಧಿಸಿದ್ದಕ್ಕೆ ಆಕ್ಷೇಪ:
ಜಾಮೀನು ನೀಡುವಾಗ ಇಬ್ಬರೂ ಜಡ್ಜ್ಗಳು ಪ್ರತ್ಯೇಕ ಆದೇಶ ಬರೆದಿದ್ದಾರೆ. ಅದರಲ್ಲಿ ಜಾಮೀನು ನೀಡುವ ಬಗ್ಗೆ ಇಬ್ಬರೂ ಒಮ್ಮತ ವ್ಯಕ್ತಪಡಿಸಿದ್ದಾರೆ. ಆದರೆ, ನ್ಯಾ.ಭೂಯಾನ್ ಅವರು, ಇ.ಡಿ. ಪ್ರಕರಣದಲ್ಲಿ ಜಾಮೀನು ಸಿಕ್ಕ ತಕ್ಷಣ ಅವರನ್ನು ಸಿಬಿಐ ಬಂಧಿಸಿದ್ದರ ಔಚಿತ್ಯವನ್ನು ಪ್ರಶ್ನಿಸಿದ್ದಾರೆ.
‘ಇ.ಡಿ. ಪ್ರಕರಣದಲ್ಲಿ ಇನ್ನೇನು ಬಿಡುಗಡೆಯಾಗುತ್ತಾರೆ ಎಂಬ ಹಂತದಲ್ಲಿ ಸಿಬಿಐ ಅವರನ್ನು ಬಂಧಿಸಿದ್ದರ ಹಿಂದಿನ ತರಾತುರಿ ನನಗೆ ಅರ್ಥವಾಗುತ್ತಿಲ್ಲ. ಇದು ನ್ಯಾಯಾಂಗದ ಅಣಕ. ಹಿಂದೆ 22 ತಿಂಗಳ ಕಾಲ ಅವರನ್ನು ಇದೇ ಸಿಬಿಐ ಹೊರಗಿರಲು ಬಿಟ್ಟಿತ್ತು. ಕೇಜ್ರಿವಾಲ್ ಹಾರಿಕೆಯ ಉತ್ತರ ನೀಡುತ್ತಿದ್ದಾರೆ ಎಂಬ ನೆಪ ಹೇಳಿ ಅವರನ್ನು ನಿರಂತರವಾಗಿ ಸಿಬಿಐ ಜೈಲಿನಲ್ಲಿರಿಸಲು ಸಾಧ್ಯವಿಲ್ಲ. ಇದೇ ಆಧಾರದಲ್ಲಿ ಅವರಿಗೆ ಇ.ಡಿ. ಪ್ರಕರಣದಲ್ಲಿ ಜಾಮೀನು ಲಭಿಸಿರುವಾಗ ಅವರನ್ನು ಇನ್ನಷ್ಟು ಕಾಲ ಜೈಲಿನಲ್ಲಿ ಇರಿಸುವುದು ನ್ಯಾಯವನ್ನು ನಿರಾಕರಿಸಿದಂತೆ’ ಎಂದು ಆದೇಶದಲ್ಲಿ ಬರೆದಿದ್ದಾರೆ.
ಷರತ್ತಿಗೆ ಒಬ್ಬ ಜಡ್ಜ್ ವಿರೋಧ:
ಇದೇ ವೇಳೆ, ನ್ಯಾ.ಭೂಯಾನ್ ಅವರು, ಇ.ಡಿ. ಪ್ರಕರಣದಲ್ಲಿ ಕೇಜ್ರಿವಾಲ್ ಮುಖ್ಯಮಂತ್ರಿಗಳ ಕಚೇರಿಗೆ ಹೋಗುವಂತಿಲ್ಲ ಮತ್ತು ಕಡತಗಳಿಗೆ ಸಹಿ ಹಾಕುವಂತಿಲ್ಲ ಎಂದು ಷರತ್ತು ವಿಧಿಸಿರುವುದಕ್ಕೂ ಭಿನ್ನಮತ ವ್ಯಕ್ತಪಡಿಸಿದ್ದಾರೆ. ‘ಆದರೆ, ನಾನು ನ್ಯಾಯಾಂಗದ ಶಿಸ್ತನ್ನು ಪಾಲಿಸಿ ಕೇಜ್ರಿವಾಲ್ಗೆ ವಿಧಿಸಿದ ಷರತ್ತುಗಳ ಬಗ್ಗೆ ಮಾತನಾಡುವುದಿಲ್ಲ’ ಎಂದು ಸೂಕ್ಷ್ಮವಾಗಿ ಹೇಳಿದ್ದಾರೆ.
ಮಾ.21ರಂದು ಇ.ಡಿ. ಕೇಜ್ರಿವಾಲ್ರನ್ನು ಬಂಧಿಸಿದ ಬಳಿಕ ಸಿಬಿಐ ಕೂಡ ಜೂ.26ರಂದು ಅವರನ್ನು ಬಂಧಿಸಿತ್ತು. ಆ.5ರಂದು ತಮ್ಮ ಬಂಧನವನ್ನು ಎತ್ತಿಹಿಡಿದ ದೆಹಲಿ ಹೈಕೋರ್ಟ್ನ ಆದೇಶವನ್ನು ಪ್ರಶ್ನಿಸಿ ಅವರು ಸುಪ್ರೀಂಕೋರ್ಟ್ಗೆ ಹೋಗಿದ್ದರು. ಜು.12ರಂದು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅವರಿಗೆ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು.