- ಲವ್‌ ಜಿಹಾದ್‌ ತಡೆ, ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ

- ರೈತರಿಗೆ ವಾರ್ಷಿಕ ₹11,000 । 31 ಭರವಸೆಗಳ ಸಂಕಲ್ಪ ಪತ್ರ

- ಆಶ್ವಾಸನೆ

==

ಅಸ್ಸಾಂ ಬಿಜೆಪಿ ಪ್ರಣಾಳಿಕೆಯಲ್ಲೇನಿದೆ?


- ಮಹಿಳೆಯರ ಆರ್ಥಿಕ ನೆರವು 1,500 ರು.ನಿಂದ 3000 ರು.ಗೆ ಏರಿಕೆ- ಅಸ್ಸಾಂನ ರೈತರಿಗೆ ವಾರ್ಷಿಕ 11,000 ರು. ಆರ್ಥಿಕ ನೆರವು

- ಅಸ್ಸಾಂನಲ್ಲಿ ಲವ್‌ ಜಿಹಾದ್‌ ತಡೆ, ಏಕರೂಪ ನಾಗರಿಕ ಸಂಹಿತೆ ಜಾರಿ

- ಮಿಯಾಗಳು (ಬಾಂಗ್ಲಾ ಮುಸ್ಲಿಮರು) ವಶಪಡಿಸಿಕೊಂಡ ಭೂಮಿ ವಾಪಸ್‌

- ಅಕ್ರಮ ಬಾಂಗ್ಲಾ ವಲಸಿಗರ ಹೊರ ಹಾಕಲು 1950ರ ಕಾಯ್ದೆ ಜಾರಿ

- ರಾಜ್ಯದಲ್ಲಿ 2 ಲಕ್ಷ ಉದ್ಯೋಗ ಸೃಷ್ಟಿ, ಜಿಲ್ಲೆಗೊಂದು ವಿವಿ ಸ್ಥಾಪನೆ

- ರಾಜ್ಯವನ್ನು ಪ್ರವಾಹ ಮುಕ್ತಗೊಳಿಸಲು ₹18,000 ಕೋಟಿ ಹೂಡಿಕೆ

- ದೇವಾಲಯ, ಇತರ ಪೂಜಾ ಸ್ಥಳಗಳ ಭೂಮಿ ಅತಿಕ್ರಮಣಗೊಂಡಿದ್ದರೆ ವಾಪಸ್‌

- ಕ್ಯಾನ್ಸರ್‌ ಚಿಕಿತ್ಸಾ ಸುಧಾರಣೆಗೆ 50,000 ಕೋಟಿ ರು.

- ಮೂಲ ಸೌಕರ್ಯಗಳಿಗೆ 5 ಲಕ್ಷ ಕೋಟಿ ರು. ಹೂಡಿಕೆ

==========

ಗುವಾಹಟಿ: ಏ.9ಕ್ಕೆ ಚುನಾವಣೆ ಎದುರಿಸಲಿರುವ ಅಸ್ಸಾಂನಲ್ಲಿ ಬಿಜೆಪಿ ಮಂಗಳವಾರ ಸಂಕಲ್ಪ ಪತ್ರ ಹೆಸರಿನಲ್ಲಿ 31 ಅಂಶಗಳನ್ನೊಳಗೊಂಡ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಇದರಲ್ಲಿ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ, ಯುವಕರಿಗೆ 2 ಲಕ್ಷ ಉದ್ಯೋಗ ಸೃಷ್ಟಿ, ಮಹಿಳೆಯರಿಗೆ ಮಾಸಿಕ 3000 ರು. ಹಾಗೂ ರೈತರಿಗೆ ವಾರ್ಷಿಕ 11,000 ರು. ಸೇರಿದಂತೆ ಭರಪೂರ ಭರವಸೆ ನೀಡಿದ್ದಾರೆ.

ಅಸ್ಸಾಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ‘ಸಂಕಲ್ಪ ಪತ್ರ’ ಬಿಡುಗಡೆಗೊಳಿಸಿದರು. ಇದರಲ್ಲಿ ಮಹಿಳೆಯರಿಗೆ ಒರುನುಡೈ ಯೋಜನೆಯಡಿ ನೀಡಲಾಗುತ್ತಿದ್ದ ಮಾಸಿಕ1500 ರು. ಹಣವನ್ನು 3000 ರು.ಗೆ ಏರಿಸಲಾಗಿದೆ. ಜತೆಗೆ ಅಸ್ಸಾಂ ಘನತೆ ರಕ್ಷಣೆಗಾಗಿ ಮೂಲಸೌಕರ್ಯಗಳಿಗೆ 5 ಲಕ್ಷ ಕೋಟಿ ರು. ಹೂಡಿಕೆ, ಬಾಂಗ್ಲಾದ ಮಿಯಾಸಿ ಅತಿಕ್ರಮಣ ಪಡಿಸಿಕೊಂಡ ಭೂಮಿ ವಾಪಸ್‌ ಪಡೆಯುವುದು, ಏಕರೂಪ ನಾಗರಿಕ ಸಂಹಿತೆ ಜಾರಿ, 2 ಲಕ್ಷ ಹೊಸ ಉದ್ಯೋಗ ಸೃಷ್ಟಿ, ಲವ್‌ ಜಿಹಾದ್‌ ತಡೆಗೆ ಕಠಿಣ ಕ್ರಮ ಸೇರಿದಂತೆ ಹಲವು ಅಂಶ ಒಳಗೊಂಡಿದೆ.