ಸಾರಾಂಶ
ಅಯೋಧ್ಯೆ: ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠಾಪನೆ ನಿಮಿತ್ತ ಗಣ್ಯರು ಖಾಸಗಿ ವಿಮಾನಗಳಲ್ಲಿ ಅಯೋಧ್ಯೆಗೆ ಆಗಮಿಸಿದ ಪರಿಣಾಮ ನಗರದ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರಿ ಸಂಚಾರ ಏರ್ಪಟ್ಟಿತ್ತು.
ಈ ಕುರಿತು ಮಾಹಿತಿ ನೀಡಿದ ವಿಮಾನ ನಿಲ್ದಾಣದ ಅಧಿಕಾರಿಗಳು, ‘ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಅಯೋಧ್ಯೆಗೆ ಬಂದ ಪರಿಣಾಮ ವಿಮಾನ ನಿಲ್ದಾಣದಲ್ಲಿ ಭಾರೀ ಸಂಖ್ಯೆಯಲ್ಲಿ ವಿಮಾನಗಳು ಬಂದಿದ್ದವು.
ಅವುಗಳನ್ನು ನಾವು ನಿಯಂತ್ರಿಸಲು ಖಾಸಗಿ ವಿಮಾನಗಳು ಗಣ್ಯರನ್ನು ಇಳಿಸಿದ ತಕ್ಷಣ ಹತ್ತಿರದ ವಿಮಾನ ನಿಲ್ದಾಣಗಳಿಗೆ ಕಳುಹಿಸಿದೆವು.
ಬಳಿಕ ಅವರು ಹೊರಡುವ ವೇಳೆಗೆ ವಿಮಾನಗಳನ್ನು ಮತ್ತೆ ಕರೆಸಿಕೊಂಡು ಹೋಗಲು ವ್ಯವಸ್ಥೆ ಮಾಡಲಾಗಿತ್ತು.
ಸೋಮವಾರ ಆಗಮನ ಮತ್ತು ನಿರ್ಗಮನ ಎರಡೂ ಸೇರಿದಂತೆ ನೂರಕ್ಕೂ ಹೆಚ್ಚು ವಿಮಾನಗಳು ಅಯೋಧ್ಯೆ ವಿಮಾನ ನಿಲ್ದಾಣದಿಂದ ಸಂಚರಿಸಿದವು’ ಎಂದು ತಿಳಿಸಿದರು.
ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಯೋಧ್ಯಾ ಧಾಮವನ್ನು ಕಳೆದ ಡಿ.30 ರಂದು ಉನ್ನತ ದರ್ಜೆಗೇರಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದ್ದರು.