ಸಾರಾಂಶ
-ಕೇಂದ್ರ, ರಾಜ್ಯ ಸರ್ಕಾರದ ವಿಐಪಿಗಳಿಗೆ ಆಮಂತ್ರಣವಿಲ್ಲ
ನವದೆಹಲಿ: ಅಯೋಧ್ಯೆಯ ಐತಿಹಾಸಿಕ ರಾಮಂದಿರದ ಮೊದಲನೆ ಮಹಡಿಯಲ್ಲಿ ನಿರ್ಮಾಣವಾಗಿರುವ ‘ರಾಮ ದರ್ಬಾರ್’ ಪ್ರಾಣಪ್ರತಿಷ್ಠೆಯನ್ನು ಜೂ.5ರಂದು ನೆರವೇರಿಸಲಾಗುವುದು ಎಂದು ಶ್ರೀರಾಮ ಜನ್ಮಭೂಮಿ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ. ಆದರೆ ಇದಕ್ಕೆ ಯಾವುದೇ ರಾಜಕಾರಣಿಗಳಿಗೆ ಆಮಂತ್ರಣ ಇರುವುದಿಲ್ಲ.
ರಾಮ ದರ್ಬಾರ್ಅನ್ನು ಪ್ರಭು ಶ್ರೀರಾಮ, ಸೀತೆ, ಲಕ್ಷ್ಮಣ, ಹನುಮಂತ - ರಾಜ ದರ್ಬಾರಿನಲ್ಲಿ ಇರುವ ಮಾದರಿಯಲ್ಲಿ ನಿರ್ಮಿಸಲಾಗಿದ್ದು, ಇದು ಪ್ರಾಣಪ್ರತಿಷ್ಠೆಯ 1 ವಾರದ ಬಳಿಕ ಸಾರ್ವಜನಿಕರಿಗೆ ತೆರೆಯುವ ನಿರೀಕ್ಷೆಯಿದೆ.ಪಿಟಿಐ ಜತೆ ಮಾತನಾಡಿದ ಮಿಶ್ರಾ, ‘ಜೂ.5ರಂದು ಅದ್ಧೂರಿಯಾಗಿ ರಾಮ ದರ್ಬಾರಿನ ಪ್ರಾಣಪ್ರತಿಷ್ಠೆ ನಡೆಯಲಿದ್ದು, ಅದರ ಕಾರ್ಯಕ್ರಮಗಳು ಜೂ.3ರಂದು ಆರಂಭವಾಗುತ್ತವೆ. ಅಂದು ರಾಮಮಂದಿರದ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದ್ದು, ಸಂಕೀರ್ಣದ ಒಳಗಿರುವ 7 ದೇವಾಲಯಗಳ ಧಾರ್ಮಿಕ ಸಮಾರಂಭಗಳನ್ನೂ ನಡೆಸಲಾಗುವುದು’ ಎಂದರು.
_+___ಇದೇ ವೇಳೆ, ಆಹ್ವಾನಿತರ ಬಗ್ಗೆ ಮಾತನಾಡಿದ ಮಿಶ್ರಾ, ‘ಈ ಬಾರಿಯ ಅತಿಥಿಗಳ ಪಟ್ಟಿ ಕೊಂಚ ಭಿನ್ನವಾಗಿರಲಿದೆ. ಕೇಂದ್ರ ಅಥವಾ ಯಾವುದೇ ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ನಾಯಕರನ್ನು ಆಮಂತ್ರಿಸಲಾಗಿಲ್ಲ. ಆದರೆ, ವಿವಿಧ ನಂಬಿಕೆಗಳ ಧಾರ್ಮಿಕ ಗುರುಗಳಿಗೆ ಆಮಂತ್ರಣ ಹೋಗಿದೆ’ ಎಂದು ಹೇಳಿದ್ದಾರೆ.
ಅಯೋಧ್ಯೆಯಲ್ಲಿ 20 ಕಿ.ಮೀ ಉದ್ದದ ಭರತ ಪಥಅಯೋಧ್ಯೆ: ಉತ್ತರ ಪ್ರದೇಶ ಸರ್ಕಾರವು ಅಯೋಧ್ಯೆಯಲ್ಲಿ 20 ಕಿ.ಮೀ ಉದ್ದದ ಭರತ ಪಥ ಕಾರಿಡಾರ್ ನಿರ್ಮಾಣಕ್ಕೆ ಮುಂದಾಗಿದೆ. ಇದು ರಾಮನ ಸಹೋದರ ಭರತ ತಪಸ್ಸು ಮಾಡಿದ ಭರತಕುಂಡವನ್ನು ರಾಮಜನ್ಮಸ್ಥಳವಾದ ರಾಮ ಮಂದಿರಕ್ಕೆ ಸಂಪರ್ಕಿಸಲಿದೆ. ಈ ರಸ್ತೆಯನ್ನು 900 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಮಾಡಲು ಉತ್ತರಪ್ರದೇಶ ಸರ್ಕಾರ ಯೋಜನೆ ಹಾಕಿಕೊಂಡಿದೆ.