ಗ್ಯಾರಂಟಿ ಜಾರಿ ಬಳಿಕ ದಿವಾಳಿ : ಹಿಮಾಚಲ ಪ್ರದೇಶದಲ್ಲಿ ಟಾಯ್ಲೆಟ್‌ಗೆ ತೆರಿಗೆ ಜಾರಿ!

| Published : Oct 05 2024, 07:06 AM IST

Do You Know Why You Should Close The Toilet Lid Before You Flush

ಸಾರಾಂಶ

ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರ ಶೌಚಾಲಯದ ಸಂಖ್ಯೆ ಆಧರಿಸಿ ತೆರಿಗೆ ವಿಧಿಸುವ ಸಂಬಂಧ ಹೊರಡಿಸಿದ್ದ ಆದೇಶ ವೊಂದು ಭಾರೀ ವಿವಾದಕ್ಕೆ ಕಾರಣವಾಗಿದೆ.

ಶಿಮ್ಲಾ: ವಿಧಾನಸಭೆ ಚುನಾವಣೆ ವೇಳೆ ನೀಡಿದ್ದ ಉಚಿತ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ ಬಳಿಕ ಸಾಲದ ಹೊರೆಯಲ್ಲಿ ನರಳುತ್ತಿರುವ ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರ ಶೌಚಾಲಯದ ಸಂಖ್ಯೆ ಆಧರಿಸಿ ತೆರಿಗೆ ವಿಧಿಸುವ ಸಂಬಂಧ ಹೊರಡಿಸಿದ್ದ ಆದೇಶ ವೊಂದು ಭಾರೀ ವಿವಾದಕ್ಕೆ ಕಾರಣವಾಗಿದೆ. ಸರ್ಕಾರದ ಆದೇಶವನ್ನು ಬಿಜೆಪಿ ಮತ್ತು ಸಾಮಾಜಿಕ ಜಾಲತಾಣಗಳ ಬಹುವಾಗಿ ವ್ಯಂಗ್ಯವಾಡಿದ್ದಾರೆ.

ಅದರ ಬೆನ್ನಲ್ಲೇ ಸರ್ಕಾರ ಇಂಥ ದೊಂದು ಆದೇಶ ಹಿಂಪಡೆದಿದೆ. ಹಿಮಾಚಲ ಸರ್ಕಾರ ಹಾಲಿ 96000 ಕೋಟಿ ರು. ಸಾಲದಲ್ಲಿದೆ. ಹಣಕಾಸಿನ ಕೊರತೆಯ ಕಾರಣ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಇತ್ತೀಚೆಗೆ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿ ಪಾವತಿ ವಿಳಂಬವಾಗಿತ್ತು. ಸಚಿವರ ವೇತನ ಪಾವತಿಯನ್ನೂ ಎರಡು ತಿಂಗಳುಮುಂದೂಡಲಾಗಿತ್ತು. ಅದರಬೆನ್ನಲ್ಲೇ ಆರ್ಥಿಕ ಸಂಪನ್ಮೂಲ ಸಂಗ್ರಹಕ್ಕೆ ಹೊರಡಿಸಿದ ಆದೇಶ ರಾಜ್ಯ ಸರ್ಕಾರಕ್ಕೆ ಭಾರೀ ಮುಜುಗರ ಉಂಟು ಮಾಡಿದೆ.

ವಿವಾದಿತ ಆದೇಶ: 'ರಾಜ್ಯದಲ್ಲಿನ ಪ್ರತಿ ಮನೆ ಅಂಗಡಿ/ಕಂಪನಿಗಳು ಪ್ರತಿ ಟಾಯ್ಲೆಟ್ ಸೀಟ್‌ಗೆ 25 ರು. ಮಾಸಿಕ ಶುಲ್ಕ ಕಟ್ಟಬೇಕು. ಹೆಚ್ಚು ಟಾಯ್ಲೆಟ್ ಸೀಟ್ ಇದ್ದರೆ ಪ್ರತಿ ಸೀಟ್‌ಗೆ 25 ರು.ನಂತೆ ಎಲ್ಲ ಸೀಟ್ ಗೂ ಪ್ರತ್ಯೇಕ ಶುಲ್ಕ ತೆರಬೇಕು' ಎಂದು ಇತ್ತೀಚೆಗೆ ಸರ್ಕಾರ ಆದೇಶ ಹೊರಡಿಸಿತ್ತು. ಈ ಮುನ್ನ ರಾಜ್ಯದಲ್ಲಿ ಬಿಜೆಪಿ ಅವಧಿಯಲ್ಲಿ ನೀರು ಹಾಗೂ ಒಳಚರಂಡಿ ಶುಲ್ಕ ಇರಲಿಲ್ಲ. ಆದರೆ ಕಾಂಗ್ರೆಸ್ ನ ಸುಖವಿಂದರ್ ಸಿಂಗ್ ಸುಖು ಅಧಿಕಾರಕ್ಕೆ ಬಂದ ನಂತರ ಮೊದಲ ಬಾರಿ, ಅಕ್ಟೋಬರ್‌ನಿಂದ ಮಾಸಿಕ “ನೀರು ಹಾಗೂ ಒಳಚರಂಡಿ ಶುಲ್ಕ ವಿಧಿಸಲು ತೀರ್ಮಾನಿಸಿ ಹಾಗೂ ಸೆ.21ರಂದು ಅಧಿಸೂಚನೆ ಹೊರಡಿಸಿತ್ತು.

ಇದರಲ್ಲಿ, 'ಸರ್ಕಾರದಿಂದ ನೀರು ಸಂಪರ್ಕ ಹಾಗೂ ಒಳಚರಂಡಿ ಸಂಪರ್ಕ ಪಡೆದಿದ್ದರೆ ಮಾಸಿಕ ನೀರಿನ ಶುಲ್ಕದ ಶೇ.30ರಷ್ಟು ಒಳಚರಂಡಿ ಶುಲ್ಕ ತೆರಬೇಕು ಎಂದು ಸೂಚಿಸಿತ್ತು. ಆದರೆ ತಮ್ಮದೇ ನೀರಿನ ಸಂಪರ್ಕ ಹೊಂದಿ ಕೇವಲ ಒಳಚರಂಡಿ ಸಂಪರ್ಕ ಮಾತ್ರ ಬೇಕು ಎಂದಿದ್ದರೆ ಪ್ರತಿ ಟಾಯ್ಲೆಟ್ ಸೀಟ್‌ಗೆ 25 ರು. ಶುಲ್ಕ ಕಟ್ಟಬೇಕು' ಎಂದು ಅಧಿಸೂಚನೆಯಲ್ಲಿ ಹೇಳಿತ್ತು. ಇದನ್ನು ಕೇಂದ್ರ ಸಚಿವೆನಿರ್ಮಲಾ ಸೀತಾರಾಮನ್ ಹಾಗೂ ಬಿಜೆಪಿ ನಾಯಕರು ಪ್ರಶ್ನಿಸಿದ್ದು, 'ನಂಬಲಸಾಧ್ಯ.. ನರೇಂದ್ರ ಮೋದಿ ಸ್ವಚ್ಛ ಭಾರತ ಅಭಿಯಾನದಲ್ಲಿ ಶೌಚಾಲಯ ನಿರ್ಮಿಸಿಕೊಟ್ಟಿದ್ದಾರೆ. ಆದರೆ ಹಿಮಾಚಲದ ಕಾಂಗ್ರೆಸ್ ಸರ್ಕಾರವು ಟಾಯ್ಲೆಟ್‌ ತೆರಿಗೆ ವಿಧಿಸುತ್ತಿದೆ' ಎಂದು ಟ್ವಿಟ್ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹಿಮಾಚಲ ಜಲಶಕ್ತಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಓಂಕಾರಚಂದ್ ಶರ್ಮಾ, 'ಅಧಿಸೂಚನೆ ಹೊರಡಿಸಿದ ಬಳಿಕ ಡಿಸಿಎಂ ಹತ್ತಿರ ಕಡತ ತೆಗೆದುಕೊಂಡು ಹೋಗಿದ್ದೆವು. ಆದರೆ ಪ್ರತಿ ಟಾಯ್ಲೆಟ್ ಸೀಟ್‌ಗೆ ಶುಲ್ಕ ಹೇರಿದ್ದು ಸರಿ ಅಲ್ಲ ಎಂದರು. ಹೀಗಾಗಿ ಅಧಿಸೂಚನೆ ರದ್ದು ಮಾಡಿ ಟಾಯ್ಲೆಟ್ ಸೀಟು ಶುಲ್ಕ ರದ್ದು ಮಾಡಿದ್ದೇವೆ' ಎಂದಿದ್ದಾರೆ. ಮುಖ್ಯಮಂತ್ರಿ ಸುಖ ಕೂಡ ಬಿಜೆಪಿ ಆರೋಪ ನಿರಾಕರಿಸಿ, 'ರಾಜ್ಯದಲ್ಲಿಟಾಯ್ಲೆಟ್ ಶುಲ್ಕ ಇಲ್ಲ. 100 ರು. ನೀರು ಶುಲ್ಕ ಮಾತ್ರ ಪಡೆಯುತ್ತೇವೆ. ಅದೂ ಕಡ್ಡಾಯವಲ್ಲ. ಐಚ್ಛಿಕ' ಎಂದಿದ್ದಾರೆ.