‘ಸುಂದರ ಸ್ತ್ರೀಯನ್ನು ಕಂಡಕೂಡಲೆ ಪುರುಷರು ವಿಚಲಿತರಾಗುತ್ತಾರೆ. ಇದರಿಂದಲೇ ಅತ್ಯಾಚಾರಗಳಾಗುತ್ತವೆ’ ಎಂದು ಮಧ್ಯಪ್ರದೇಶದ ಕಾಂಗ್ರೆಸ್‌ ಸಂಸದ ಫೋಲ್‌ ಸಿಂಗ್‌ ಬರೈಯಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಭೋಪಾಲ್‌: ‘ಸುಂದರ ಸ್ತ್ರೀಯನ್ನು ಕಂಡಕೂಡಲೆ ಪುರುಷರು ವಿಚಲಿತರಾಗುತ್ತಾರೆ. ಇದರಿಂದಲೇ ಅತ್ಯಾಚಾರಗಳಾಗುತ್ತವೆ’ ಎಂದು ಮಧ್ಯಪ್ರದೇಶದ ಕಾಂಗ್ರೆಸ್‌ ಸಂಸದ ಫೋಲ್‌ ಸಿಂಗ್‌ ಬರೈಯಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪಕ್ಷ ಇದರಿಂದ ಅಂತರ ಕಾಯ್ದುಕೊಂಡಿದ್ದು, ‘ಅತ್ಯಾಚಾರ ಸಮರ್ಥನೀಯವಲ್ಲ’ ಎಂದಿದೆ. ಬಿಜೆಪಿ ಪ್ರತಿಕ್ರಿಯಿಸಿ, ‘ಇದು ಆಘಾತಕಾರಿ ಮತ್ತು ನಾಚಿಕೆಗೇಡಿನ ಹೇಳಿಕೆ. ಇದರಿಂದ ಅವರ ಮನಃಸ್ಥಿತಿ ಬಯಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದೆ. ‘ಸುಂದರ ಸ್ತ್ರೀಯರನ್ನು ಕಂಡು ವಿಷಲಿತರಾದ ಪುರುಷರು ಅತ್ಯಾಚಾರವೆಸಗುವುದು ಸಹಜ. ಆದರೆ ಎಸ್‌ಸಿ, ಎಸ್‌ಟಿ, ಒಬಿಸಿ ವರ್ಗಕ್ಕೆ ಸೇರಿದವರು ಸುಂದರವಾಗಿರುವುದಿಲ್ಲ. ಆದರೆ ಕೆಲ ಜಾತಿಯ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದರೆ ಅದರಿಂದ ತೀರ್ಥಯಾತ್ರೆಗೆ ಸಿಗುವಂತಹ ಫಲ ಸಿಗುತ್ತದೆಂಬ ನಂಬಿಕೆಯಿದೆ. ಅದ್ದರಿಂದ ಅವರ ಮೇಲೆ ಅತ್ಯಾಚಾರವಾಗುತ್ತದೆ’ ಎಂದು ಬರೈಯಾ ಹೇಳಿದ್ದಾರೆ.

==

ಬಾಂಗ್ಲಾದಲ್ಲಿ ಕಾರು ಡಿಕ್ಕಿ ಹೊಡೆಸಿ ಹಿಂದೂ ಹತ್ಯೆ

ಇಂಧನ ಹಾಕಿಸಿದ ಹಣ ಕೇಳಿದ್ದಕ್ಕೆ ಕೊಲೆ

ನವದೆಹಲಿ/ ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರೆದಿದ್ದು, ಪೆಟ್ರೋಲ್‌ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಹಿಂದೂ ವ್ಯಕ್ತಿ ಮೇಲೆ ಕಾರು ಡಿಕ್ಕಿ ಹೊಡೆಸಿ ಹತ್ಯೆ ಮಾಡಲಾಗಿದೆ. ಈ ಮೂಲಕ ಜನವರಿಯಲ್ಲೇ ಕೊಲೆಯಾದವರ ಸಂಖ್ಯೆ 7ಕ್ಕೇರಿಕೆಯಾಗಿದೆ. ರಾಜ್‌ಬರಿ ಜಿಲ್ಲೆಯ ರಿಪನ್‌ ಸಹಾ ಪೆಟ್ರೋಲ್‌ ಬಂಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಪೆಟ್ರೋಲ್‌ ಬಂಕ್‌ಗೆ ಬಂದ ವ್ಯಕ್ತಿಯೊಬ್ಬ ಕಾರಿಗೆ ಸುಮಾರು 3710 ರು.ಮೌಲ್ಯದ ಇಂಧನ ತುಂಬಿಸಿದ್ದಾರೆ. ಆದರೆ ಹಣ ನೀಡದೆ ತೆರಳುವುದಕ್ಕೆ ಯತ್ನಿಸಿದ್ದಾರೆ, ಸಹಾ ಕಾರನ್ನು ತಡೆಯಲು ಪ್ರಯತ್ನಿಸಿದಾಗ ಚಾಲಕ ಕಾರನ್ನು ವೇಗವಾಗಿ ರಿಪ್ಪನ್‌ಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ರಿಪನ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

==

ಕರ್ನಾಟಕದಲ್ಲಿ ಶೀಘ್ರವೇ ವೇಮುಲಾ ಕಾಯ್ದೆ ಜಾರಿ: ರಾಹುಲ್‌ ಗಾಂಧಿ ವಿಶ್ವಾಸ

ನವದೆಹಲಿ: ‘ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ನಿಯಂತ್ರಿಸಲು ರೋಹಿತ್‌ ವೇಮುಲಾ ಕಾಯ್ದೆ ಜಾರಿಗೆ ಬರಬೇಕಿದೆ. ಕಾಂಗ್ರೆಸ್‌ ಆಡಳಿತದ ಕರ್ನಾಟಕ, ತೆಲಂಗಾಣದಲ್ಲಿ ಶೀಘ್ರ ಈ ಕಾನೂನು ಜಾರಿಗೆ ಬರಲಿದೆ’ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ಹೈದರಾಬಾದ್‌ ವಿವಿಯಲ್ಲಿ ಜಾತಿ ತಾರತಮ್ಯದ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡ ರೋಹಿತ್‌ ವೇಮುಲಾ ಸಾವಿಗೆ 10 ವರ್ಷ ತುಂಬಿದ ಹಿನ್ನೆಲೆ ರಾಹುಲ್‌ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಅದರಲ್ಲಿ ‘ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ನಡೆದರೆ ಅದನ್ನು ಅಪರಾಧ ಎಂದು ಪರಿಗಣಿಸಿ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಯಾವುದೇ ಆರೋಪಿಯನ್ನು ಜಾತಿ ಆಧಾರದಲ್ಲಿ ಅವರ ಸ್ವಾತಂತ್ರ್ಯ ಹತ್ತಿಕ್ಕಬಾರದು. ದಲಿತ ಯುವಕರು ಇಂದಿಗೂ ತಿರಸ್ಕಾರ, ಪ್ರತ್ಯೇಕತೆ, ಕೀಳರಿಮೆ ಅನುಭವಿಸುತ್ತಿದ್ದಾರೆ, ಹಾಗಾಗಿ ರೋಹಿತ್‌ ವೇಮುಲಾ ಕಾಯ್ದೆ ಜಾರಿ ಅವಶ್ಯಕ’ ಎಂದಿದ್ದಾರೆ.

==

ಛತ್ತೀಸ್‌ಗಢ: ಕುಖ್ಯಾತ ನಕ್ಸಲ್‌ ನಾಯಕ ಬೇಡ್ಜಾ ಸೇರಿ ಗುಂಡಿಗೆ ಬಲಿ

ಬಿಜಾಪುರ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಶನಿವಾರ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ನಕ್ಸಲರು ಸಾವನ್ನಪ್ಪಿದ್ದಾರೆ. ಈ ಪೈಕಿ ಕುಖ್ಯಾತ ನಕ್ಸಲ್‌ ನಾಯಕ ದಿಲೀಪೊ್‌ ಬೇಡ್ಜಾ ಕೂಡಾ ಸೇರಿದ್ದಾನೆ. ದಿಲೀಪ್‌ ಬಿಜಾಪುರ ಜಿಲ್ಲೆಯ ಬೆಟ್ಟ ಪ್ರದೇಶದಲ್ಲಿ ಬೆಟ್ಟಗಳಲ್ಲಿ ಸಕ್ರಿಯನಾಗಿದ್ದಾನೆ ಎಂಬ ನಿಖರ ಮಾಹಿತಿ ಹಿನ್ನೆಲೆ ಕಾರ್ಯಾಚರಣೆ ಆರಂಭಿಸಿದ ಭದ್ರತಾ ಪಡೆಗಳು, ಶನಿವಾರ ಮುಂಜಾನೆ ಬೇಡ್ಜಾ ಸೇರಿ ಇಬ್ಬರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿವೆ. 2025ರಲ್ಲಿ ರಾಜ್ಯದಲ್ಲಿ 285 ನಕ್ಸಲರ ಹತ್ಯೆ ನಡೆದಿದೆ. ಮಾ.31ರ ಒಳಗೆ ದೇಶವನ್ನು ನಕ್ಸಲ್‌ಮುಕ್ತಗೊಳಿಸುವ ಗುರಿಯನ್ನು ಕೇಂದ್ರ ಸರ್ಕಾರ ಇಟ್ಟುಕೊಂಡಿದೆ.

==

ಬೆಂಗ್ಳೂರು ರೀತಿಯಲ್ಲಿ ದಿಲ್ಲೀಲೂ ಬೀದಿನಾಯಿಗೆ ಮೈಕ್ರೋಚಿಪ್ ಅಳವಡಿಕೆ

ನವದೆಹಲಿ: ಬೆಂಗಳೂರಲ್ಲಿ ಬೀದಿ ನಾಯಿಗಳ ನಿಯಂತ್ರಣ, ಗುರುತು ಪತ್ತೆಗೆ ಹಿಂದಿನ ಬಿಬಿಎಂಪಿ ಆಡಳಿತ ಮೈಕ್ರೋಚಿಪ್‌ ಅಳವಡಿಸಿದಂತೆ ದೆಹಲಿ ಸರ್ಕಾರವೂ ಈ ಯೋಜನೆ ಜಾರಿಗೆ ಮುಂದಾಗಿದೆ. ಇದಕ್ಕಾಗಿ 35 ಕೋಟಿ ರು. ಮೀಸಲಿಟ್ಟಿದೆ. ಈ ಯೋಜನೆಗೆ ದೆಹಲಿ ಸರ್ಕಾರ 20 ಕೋಟಿ ರು., ಸರ್ಕಾರೇತರ ಸಂಸ್ಥೆಗಳು 10 ಕೋಟಿ ವಿನಿಯೋಗಿಸಲಿದೆ. ಮುಂದಿನ 2-3 ತಿಂಗಳಲ್ಲಿ ಕನಿಷ್ಠ 25 ಸಾವಿರ ಬೀದಿ ನಾಯಿಗಳಿಗೆ ಮೈಕ್ರೋಚಿಪ್‌ ಅಳವಡಿಸುವ ಗುರಿಯನ್ನು ದೆಹಲಿ ಸರ್ಕಾರ ಹಾಕಿಕೊಂಡಿದೆ. ಮೈಕ್ರೋಚಿಪ್ಪಿಂಗ್‌ ಸಣ್ಣ ಸಾಧನವಾಗಿದ್ದು ಇದನ್ನು ಲಸಿಕೆಗಳ ಮೂಲಕ ನಾಯಿಗಳ ಚರ್ಮದ ಅಡಿಯಲ್ಲಿ ಇರಿಸಲಾಗುತ್ತದೆ.