ಅಧಿವೇಶನದ 2ನೇ ಹಂತದಲ್ಲಿ ಪರಿಗಣನೆ ಸಾಧ್ಯತೆ
ನೋಟಿಸ್ನಲ್ಲಿನ ಲೋಪ ಸರಿಪಡಿಸಿ ಕ್ರಮ: ಬಿರ್ಲಾ ಸೂಚನೆಪಿಟಿಐ ನವದೆಹಲಿಲೋಕಸಭೆಯಲ್ಲಿ ಸ್ಪೀಕರ್ ಓಂ ಬಿರ್ಲಾ ಪಕ್ಷಪಾತಿ ಧೋರಣೆ ತಳೆದಿರುವುದಾಗಿ ಆರೋಪಿಸಿ ಅವರ ವಿರುದ್ಧ ವಿಪಕ್ಷಗಳು ನೀಡಿರುವ ಅವಿಶ್ವಾಸ ನೋಟಿಸ್ ಅನ್ನು ಮಾ.9ರಿಂದ ಆರಂಭವಾಗುವ ಚಳಿಗಾಲದ ಅಧಿವೇಶನದ 2ನೇ ಹಂತದಲ್ಲಿ ಪರಿಗಣಿಸುವ ಸಾಧ್ಯತೆ ಇದೆ. ಅರ್ಥಾತ್ ಮಾ.9ರ ನಂತರ ನಿರ್ಣಯ ಮಂಡನೆಗೆ ಅವಕಾಶ ಸಿಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಬಜೆಟ್ ಅಧಿವೇಶನದ ಮೊದಲನೆ ಹಂತ ಫೆ.13ರಂದು ಮುಕ್ತಾಯಗೊಳ್ಳಲಿದೆ. ಮಾ.9ಕ್ಕೆ 2ನೇ ಹಂತ ಆರಂಭವಾಗಲಿದೆ.ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯವರ ಮಾತಿಗೆ ಅನುಮತಿ ನಿರಾಕರಣೆ, ವಿನಾಕಾರಣ ವಿಪಕ್ಷದ 8 ಸಂಸದರ ವಜಾ, ಬಿಜೆಪಿ ಸಂಸದರ ಆಕ್ಷೇಪಾರ್ಹ ನುಡಿಯ ವಿರುದ್ಧ ಕ್ರಮ ಕೈಗೊಳ್ಳದೆ ಇರುವುದು ಸೇರಿ ಕೆಲ ಆರೋಪಗಳನ್ನು ಪ್ರತಿಪಕ್ಷಗಳು ಹೊರಿಸಿದ್ದವು. ಮುಂದುವರೆದು, ಸಭಾಧ್ಯಕ್ಷರ ವಿರುದ್ಧ ಕ್ರಮಕ್ಕೆ ಅನುವು ಮಾಡಿಕೊಡುವ ಸಂವಿಧಾನದ 94 ಸಿ ವಿಧಿಯಡಿಯಲ್ಲಿ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಆಗ್ರಹಿಸಿ ನೋಟಿಸ್ ಸಲ್ಲಿಸಿದ್ದವು.
ಇದರ ಬೆನ್ನಲ್ಲೇ, ನಿರ್ಣಯ ಇತ್ಯರ್ಥವಾಗುವ ವರೆಗೆ ಸ್ಪೀಕರ್ ಪೀಠದಲ್ಲಿ ಕೂರದಿರಲು ಬಿರ್ಲಾ ನಿರ್ಧರಿಸಿದ್ದಾರೆ. ಅವಿಶ್ವಾಸ ನಿರ್ಣಯ ಮಂಡನೆ ವೇಳೆ 96ನೇ ವಿಧಿಯಡಿ ಸ್ಪೀಕರ್ಗೆ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಅವಕಾಶವಿದೆ. ಜತೆಗೆ ಮತದಾನದ ಹಕ್ಕು ಕೂಡ ಇದೆ.
===ನೋಟಿಸ್ನ ಲೋಪ ಸರಿ ಮಾಡಿ: ಬಿರ್ಲಾ
118 ವಿಪಕ್ಷ ಸಂಸದರ ಸಹಿಯೊಂದಿಗೆ ಸಲ್ಲಿಕೆಯಾಗಿರುವ ನೋಟಿಸ್ನಲ್ಲಿ ಹಲವಾರು ಲೋಪಗಳು ಪತ್ತೆಯಾಗಿವೆ. ಇದರಿಂದಾಗಿ ಮನವಿ ತಿರಸ್ಕೃತವಾಗುವ ಸಾಧ್ಯತೆಯಿದೆ. ಆದರೆ ತಪ್ಪುಗಳನ್ನೆಲ್ಲಾ ತಿದ್ದುವಂತೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಕೆಳಮನೆಯ ಕಾರ್ಯದರ್ಶಿ ಉತ್ಪಲ್ ಕುಮಾರ್ ಅವರಿಗೆ ಸೂಚಿಸಿದ್ದಾರೆ. ಜತೆಗೆ, ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಹೇಳಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಮೊದಲ ಸಾರಿ ನೀಡಲಾಗಿದ್ದ ನೋಟಿಸ್ನಲ್ಲಿ 4 ಕಡೆಗಳಲ್ಲಿ ದಿನಾಂಕ ತಪ್ಪಾಗಿ ನಮೂದಾಗಿದ್ದ ಕಾರಣ ಅದನ್ನು ಸರಿಪಡಿಸಿದ ಇನ್ನೊಂದು ಪ್ರತಿಯನ್ನು ಸಲ್ಲಿಸಲಾಗಿತ್ತು.