ಕೃಷ್ಣಮೃಗ ಬೇಟೆಯಾಡಿದ್ದಕ್ಕೆ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಖುದ್ದು ಕ್ಷಮೆ ಕೇಳಿದರೆ ಮನ್ನಿಸುವುದಾಗಿ ಬಿಷ್ಣೋಯಿ ಸಮಾಜ ಆಫರ್‌ ನೀಡಿದೆ.

ಮುಂಬೈ: ಕೃಷ್ಣಮೃಗ ಬೇಟೆಯಾಡಿದ ನಟ ಸಲ್ಮಾನ್ ಖಾನ್‌ ಈ ಕುರಿತು ಬಹಿರಂಗ ಕ್ಷಮೆಯಾಚಿಸಿ ಪ್ರಾಣಿಸಂಕುಲವನ್ನು ರಕ್ಷಿಸುವ ಪಣತೊಟ್ಟರೆ ಅವರನ್ನು ಕ್ಷಮಿಸುತ್ತೇವೆ ಎಂದು ಬಿಷ್ಣೋಯಿ ಸಮಾಜ ಆಫರ್‌ ನೀಡಿದೆ.

ಇತ್ತೀಚೆಗೆ ಸಲ್ಮಾನ್‌ ಅವರ ಮಾಜಿ ಗೆಳತಿ ಸೋಮಿ ಅಲಿ ಸಂದರ್ಶನವೊಂದರಲ್ಲಿ ಸಲ್ಮಾನ್‌ ಅವರ ಪರವಾಗಿ ಬಿಷ್ಣೋಯಿ ಸಮಾಜದ ಕ್ಷಮೆ ಕೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಅಖಿಲ ಭಾರತ ಬಿಷ್ಣೋಯಿ ಸಮಾಜದ ಅಧ್ಯಕ್ಷ ದೇವೇಂದ್ರ ಬುಡಿಯಾ, ‘ಸ್ವತಃ ಸಲ್ಮಾನ್‌ ಅವರೇ ತಪ್ಪೊಪ್ಪಿಕೊಂಡರೆ ನಮ್ಮ ಧಾರ್ಮಿಕ ನಿಯಮ ಹೇಳುವಂತೆ ಅವರನ್ನು ಕ್ಷಮಿಸುತ್ತೇವೆ’ ಎಂದಿದ್ದಾರೆ.

1998ರಲ್ಲಿ ಸಲ್ಮಾನ್‌ ಚಿತ್ರೀಕರಣದ ವೇಳೆ ಕೃಷ್ಣಮೃಗವನ್ನು ಬೇಟೆಯಾಡಿದ ಬಳಿಕ ಬಿಷ್ಣೋಯಿ ಸಮಾಜ ಅವರ ಮೇಲೆ ಸದಾ ಕೊಲೆ ಯತ್ನ ನಡೆಸುತ್ತಿದ್ದು, 2018ರಲ್ಲಿ ಸಲ್ಮಾನ್‌ ಖಾನ್‌ಗೆ ಪ್ರಕರಣದಲ್ಲಿ ಶಿಕ್ಷೆಯೂ ಆಗಿತ್ತು.