ಕೇಜ್ರಿವಾಲ್ ವಿರುದ್ಧ ಪರ್ವೇಶ್‌, ಅತಿಷಿ ವಿರುದ್ದ ಬಿಧೂರಿ ಕಣಕ್ಕೆ : ಬಿಜೆಪಿ ಘೋಷಣೆ

| Published : Jan 05 2025, 01:34 AM IST / Updated: Jan 05 2025, 06:00 AM IST

ಸಾರಾಂಶ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿಧಾನಸಭೆ ಚುನಾವಣೆಯ ಕಾವು ರಂಗೇರಿದೆ. ದಿಲ್ಲಿ ಗದ್ದುಗೆ ಹಿಡಿಯಲು ಬಿಜೆಪಿ ಭರ್ಜರಿ ಸಿದ್ಧತೆ ನಡೆಸುತ್ತಿದ್ದು, ಮೊದಲ ಪಟ್ಟಿ ಪ್ರಕಟಿಸಿದೆ.

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿಧಾನಸಭೆ ಚುನಾವಣೆಯ ಕಾವು ರಂಗೇರಿದೆ. ದಿಲ್ಲಿ ಗದ್ದುಗೆ ಹಿಡಿಯಲು ಬಿಜೆಪಿ ಭರ್ಜರಿ ಸಿದ್ಧತೆ ನಡೆಸುತ್ತಿದ್ದು, ಮೊದಲ ಪಟ್ಟಿ ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಮಾಜಿ ಸಿಎಂ ಅರವಿಂದ್‌ ಕೇಜ್ರಿವಾಲ್ ವಿರುದ್ಧ ಪರ್ವೇಶ್‌ ವರ್ಮಾ, ಹಾಲಿ ಸಿಎಂ ಆತಿಷಿ ವಿರುದ್ಧ ರಮೇಶ್‌ ಬಿಧೂರಿ ಅವರನ್ನು ಕಣಕ್ಕಿಳಿಸಿದೆ. ವರ್ಮಾ ಮತ್ತು ಬಿಧೂರಿ ಇಬ್ಬರೂ ಮಾಜಿ ಸಂಸದರು ಎಂಬುದು ವಿಶೇಷ.

70 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಮೊದಲ ಪಟ್ಟಿಯಲ್ಲಿ 29 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ, ಅದರಲ್ಲಿ ಆಪ್‌ ನಾಯಕ ಅರವಿಂದ್ ಕೇಜ್ರಿವಾಲ್ ವಿರುದ್ಧ ದೆಹಲಿ ಮಾಜಿ ಸಿಎಂ ಸಾಹಿಬ್‌ ಸಿಂಗ್‌ ವರ್ಮಾ ಅವರ ಪುತ್ರ, ಮಾಜಿ ಸಂಸದ ಪರ್ವೇಶ್‌ ವರ್ಮಾ ಅವರಿಗೆ ಟಿಕೆಟ್‌ ನೀಡಲಾಗಿದೆ. ಇನ್ನು ಸಿಎಂ ಆತಿಷಿ ವಿರುದ್ಧ ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುವ ರಮೇಶ್‌ ಬಿಧೂರಿಗೆ ಟಿಕೆಟ್‌ ನೀಡಲಾಗಿದೆ.

ಜೊತೆಗೆ ತನ್ನ ರಾಷ್ಟ್ರೀಯ ಪದಾಧಿಕಾರಿಗಳಾದ ದುಷ್ಯಂತ್‌ ಕುಮಾರ್‌ ಗೌತಮ್ ಅವರನ್ನು ಕರೋಲ್‌ಬಾಗ್‌, ಜನಕಪುರಿಯಿಂದ ಆಶಿಶ್‌ ಸೂದ್‌, ಗಾಂಧಿ ನಗರದಿಂದ ಅರವಿಂದರ್‌ ಸಿಂಗ್ ಲವ್ಲಿ ಮತ್ತು ಬಿಜ್ವಾಸ್‌ನಿಂದ ಮಾಜಿ ಎಎಪಿ ನಾಯಕ ಕೈಲಾಶ್‌ ಗೆಹ್ಲೋಟ್‌ ಅವರ ಹೆಸರು ಘೋಷಿಸಿದೆ. ಇನ್ನು ದೆಹಲಿ ಬಿಜೆಪಿ ಮಾಜಿ ಅಧ್ಯಕ್ಷ ಸತೀಶ್‌ ಉಪಾಧ್ಯಾಯ ಮಾಳವೀಯ ನಗರದಿಂದ ಸ್ಪರ್ಧಿಸಲಿದ್ದಾರೆ.