ಸಾರಾಂಶ
‘ಕರ್ನಾಟಕದಲ್ಲಿ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ತನ್ನ ಮಿತ್ರಪಕ್ಷವಾದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ರಾಜತಾಂತ್ರಿಕ ಪಾಸ್ಪೋರ್ಟ್ ನೀಡಿ ವಿದೇಶಕ್ಕೆ ಹಾರಲು ಬಿಜೆಪಿಯು ಬಿಟ್ಟಿದೆ. ಆದರೆ ನಮ್ಮಂತಹ ಪ್ರತಿಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡು ಜೈಲಿಗಟ್ಟುತ್ತಿದೆ’ ಎಂದು ತೆಲಂಗಾಣ ಮಾಜಿ ಸಿಎಂ ಕೆಸಿಆರ್ ಅವರ ಪುತ್ರಿ ಹಾಗೂ ಬಿಆರ್ಎಸ್ ನಾಯಕಿ ಕೆ. ಕವಿತಾ ಮಂಗಳವಾರ ಆರೋಪಿಸಿದ್ದಾರೆ.
ನವದೆಹಲಿ: ‘ಕರ್ನಾಟಕದಲ್ಲಿ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ತನ್ನ ಮಿತ್ರಪಕ್ಷವಾದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ರಾಜತಾಂತ್ರಿಕ ಪಾಸ್ಪೋರ್ಟ್ ನೀಡಿ ವಿದೇಶಕ್ಕೆ ಹಾರಲು ಬಿಜೆಪಿಯು ಬಿಟ್ಟಿದೆ. ಆದರೆ ನಮ್ಮಂತಹ ಪ್ರತಿಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡು ಜೈಲಿಗಟ್ಟುತ್ತಿದೆ’ ಎಂದು ತೆಲಂಗಾಣ ಮಾಜಿ ಸಿಎಂ ಕೆಸಿಆರ್ ಅವರ ಪುತ್ರಿ ಹಾಗೂ ಬಿಆರ್ಎಸ್ ನಾಯಕಿ ಕೆ. ಕವಿತಾ ಮಂಗಳವಾರ ಆರೋಪಿಸಿದ್ದಾರೆ.
ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿ ಆಗಿರುವ ಕವಿತಾ ಕೋರ್ಟ್ ಹೊರಗೆ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಪ್ರತಿಪಕ್ಷದವರನ್ನು ಗುರಿಯಾಗಿಸಿಕೊಂಡು ಅವರ ಮೇಲೆ ಕೇಸ್ಗಳನ್ನು ಹಾಕುವುದು ಸಲ್ಲದು. ಅದರ ಬದಲು ದೇಶ ಬಿಟ್ಟು ಹೋದಂತಹ ಪ್ರಜ್ವಲ್ ರೇವಣ್ಣ ಅಂತವರನ್ನು ಬಂಧಿಸಿ’ ಎಂದು ಕಿಡಿಕಾರಿದರು.ಇತ್ತೀಚೆಗೆ ಪ್ರಜ್ವಲ್ ರೇವಣ್ಣ ಅವರು ಲೋಕಸಭೆ ಚುನಾವಣೆಯ 2ನೇ ಹಂತ ಮುಗಿಯುತ್ತಿದ್ದಂತೆಯೇ ಲೈಂಗಿಕ ಹಗರಣದಿಂದ ಪೇಚಿಗೆ ಸಿಲುಕಿದ್ದರು. ಅವರ ಅನೇಕ ರಾಸಲೀಲೆ ವಿಡಿಯೋಗಳು ಬಹಿರಂಗ ಆದ ಕಾರಣ ಎಸ್ಐಟಿ ತನಿಖೆಗೆ ಸರ್ಕಾರ ಆದೇಶಿಸಿತ್ತು. ಆದರೆ ಚುನಾವಣೆ ಮುಗಿದ ತಕ್ಷಣ ಅವರು ಜರ್ಮನಿಗೆ ರಾಜತಾಂತ್ರಿಕ ವೀಸಾ ಬಳಸಿ ತೆರಳಿದ್ದರು. ಆಗ ಅವರು ಪರಾರಿ ಆಗಲು ಕೇಂದ್ರದ ಬಿಜೆಪಿ ಸರ್ಕಾರ ಶ್ರೀರಕ್ಷೆ ನೀಡಿದೆ ಎಂದು ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಆರೋಪಿಸಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರು, ‘ಕಾಂಗ್ರೆಸ್ ಪಕ್ಷವೇ ಅವರನ್ನು ವಿದೇಶಕ್ಕೆ ಕಳಿಸಿಕೊಟ್ಟಿದೆ’ ಎಂದು ಆರೋಪಿಸಿದ್ದರು.ಇನ್ನು ಕವಿತಾ ಅವರು ದಿಲ್ಲಿ ಅಬಕಾರಿ ಹಗರಣದಲ್ಲಿ ಶಾಮೀಲಾಗಿದ್ದಾರೆ. ತಮಗೆ ಬೇಕಾದ ತೆಲಂಗಾಣ ಮದ್ಯ ಉದ್ಯಮಿಗಳಿಂದ 100 ಕೋಟಿ ರು. ಹಣ ಪಡೆದು ದಿಲ್ಲಿ ಆಪ್ ಸರ್ಕಾರದ ಜತೆ ಶಾಮೀಲಾಗಿ ದಿಲ್ಲಿಯಲ್ಲಿ ಬಾರ್ ಲೈಸೆನ್ಸ್ಗಳನ್ನು ಕೊಡಿಸಿದ್ದಾರೆ ಎಂಬ ಆರೋಪ ಹೊತ್ತಿದ್ದಾರೆ ಹಾಗೂ ಮಾ.15ರಂದೇ ಬಂಧಿತರಾಗಿದ್ದಾರೆ. ಆದರೆ ತಮ್ಮ ಮೇಲಿನ ಆರೋಪ ಸುಳ್ಳು. ಇದು ಬಿಜೆಪಿ ಸೃಷ್ಟಿ ಎಂಬುದು ಅವರ ಆರೋಪ.
ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ಕವಿತಾ ಅವರ ತಂದೆ ಕೆಸಿಆರ್ ಅವರ ಪಕ್ಷವಾದ ಬಿಆರ್ಎಸ್ ಹಾಗೂ ಜೆಡಿಎಸ್ ನಡುವೆ ಮೈತ್ರಿ ಸಂಬಂಧ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದವು. ಜೆಡಿಎಸ್ ನಾಯಕ ಕುಮಾರಸ್ವಾಮಿ ಸೇರಿದಂತೆ ಹಲವು ಶಾಸಕರು ಹೈದರಾಬಾದ್ಗೆ ತೆರಳಿ ಕೆಸಿಆರ್ ಜತೆ ಚರ್ಚೆಗಳನ್ನೂ ನಡೆಸಿದ್ದರು.