ಸಾರಾಂಶ
ಕೋಲ್ಕತಾ: ರಾಮನವಮಿ ಆಚರಣೆ ವೇಳೆ ಸ್ಫೋಟ ಸಂಭವಿಸಿ ಘರ್ಷಣೆ ನಡೆದಿದ್ದು ಓರ್ವ ಮಹಿಳೆ ಸೇರಿ ಹಲವರು ಗಾಯಗೊಂಡು ಘಟನೆ ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಮಂಗಳವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಟಿಎಂಸಿ ಸರ್ಕಾರ ರಾಜ್ಯದಲ್ಲಿ ರಾಮನವಮಿಗೆ ಅಡ್ಡಿ ಮಾಡುತ್ತಿದೆ ಎಂದು ಕಿಡಿಕಾರಿದ್ದರು. ಅದರ ಬೆನ್ನಲ್ಲೇ ಈ ದುರ್ಘಟನೆ ನಡೆದಿದೆ.ಮುರ್ಶಿದಾಬಾದ್ ಜಿಲ್ಲೆಯ ಶಕ್ತಿಪುರದಲ್ಲಿ ಬುಧವಾರ ರಾಮನವಮಿ ಆಚರಣೆ ಅಂಗವಾಗಿ ರ್ಯಾಲಿ ಜರುಗುತ್ತಿತ್ತು. ಈ ವೇಳೆ ಸ್ಫೋಟ ಸಂಭವಿಸಿದೆ. ಈ ಸ್ಫೋಟದಿಂದಾಗಿ ಮಹಿಳೆ ಗಾಯಗೊಂಡಿದ್ದಾರೆ.
ಬಳಿಕ ನಡೆದ ಘರ್ಷಣೆಯಿಂದಾಗಿ ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪಶ್ಚಿಮ ಬಂಗಾಳದಲ್ಲಿ ಕಳೆದ ವರ್ಷ ಮಾರ್ಚ್ನಲ್ಲಿ ತೀವ್ರವಾದ ಘರ್ಷಣೆ ಸಂಭವಿಸಿತ್ತು. ಈ ವೇಳೆ ಹೌರಾದಲ್ಲಿ ಹಲವು ವಾಹನಗಳು ಬೆಂಕಿಗಾಹುತಿಯಾಗಿ ಹಿಂಸಾಚಾರವೇ ನಡೆದಿತ್ತು. ಇದರಿಂದಾಗಿ 50ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದರು. ಈ ಘಟನೆ ನಡೆದು ವರ್ಷದ ಬಳಿಕ ಇದೀಗ ಮತ್ತೊಂದು ಹಿಂಸಾಚಾರಕ್ಕೆ ಪಶ್ಚಿಮ ಬಂಗಾಳ ಸಾಕ್ಷಿಯಾಗಿದೆ.