ರಾಷ್ಟ್ರ ರಾಜಧಾನಿ ದೆಹಲಿಯ ಸತ್ಯ ನಿಕೇತನ್‌ ಪ್ರದೇಶದಲ್ಲಿ 50 ವರ್ಷ ಹಳೆಯದಾದ 5 ಅಂತಸ್ತಿನ ಹುಡುಗರ ಪಿಜಿ ಕುಸಿದಿರುವ ಘಟನೆ ನಡೆದಿದೆ. ದುರಂತದಲ್ಲಿ ಮೂವರು ಸಾವನ್ನಪ್ಪಿದ್ದರೆ, ಗಾಯಗೊಂಡ ಐವರ ಸ್ಥಿತಿ

- 5 ಗಾಯಾಳುಗಳ ಸ್ಥಿತಿ ಗಂಭೀರ । 9 ಜನರ ರಕ್ಷಣೆ

- 50 ಮಂದಿ ಸಿಲುಕಿರುವ ಶಂಕೆ । ರಕ್ಷಣೆಗೆ ತಂಡಗಳ ಹರಸಾಹಸ

- ದುರಸ್ತಿಗಾಗಿ ನೆಲಮಹಡಿ ಅಗೆಯವೇ ದುರಂತಕ್ಕೆ ಕಾರಣ?

ಪಿಟಿಐ ನವದೆಹಲಿ

ರಾಷ್ಟ್ರ ರಾಜಧಾನಿ ದೆಹಲಿಯ ಸತ್ಯ ನಿಕೇತನ್‌ ಪ್ರದೇಶದಲ್ಲಿ 50 ವರ್ಷ ಹಳೆಯದಾದ 5 ಅಂತಸ್ತಿನ ಹುಡುಗರ ಪಿಜಿ ಕುಸಿದಿರುವ ಘಟನೆ ನಡೆದಿದೆ. ದುರಂತದಲ್ಲಿ ಮೂವರು ಸಾವನ್ನಪ್ಪಿದ್ದರೆ, ಗಾಯಗೊಂಡ ಐವರ ಸ್ಥಿತಿ ಚಿಂತಾಜನಕವಾಗಿದೆ. 9 ಜನರನ್ನು ರಕ್ಷಿಸಲಾಗಿದ್ದು ಸುಮಾರು 50 ಮಂದಿ ಅವಶೇಷಗಳ ಅಡಿ ಸಿಲುಕಿದ್ದಾರೆ ಎನ್ನಲಾಗಿದೆ.ದೆಹಲಿ ವಿಶ್ವವಿದ್ಯಾನಿಲಯದ ದಕ್ಷಿಣ ಕ್ಯಾಂಪಸ್‌ ಹಾಗೂ ನಾನಾಕಪುರ ಗುರುದ್ವಾರ ಸಮೀಪದ ಪಿಜಿ ಕಟ್ಟಡವೇ ದುರಂತಕ್ಕೀಡಾದ ಕಟ್ಟಡ. ಇದು ಸುಮಾರು 50 ವರ್ಷಗಳ ಹಳೆಯ ಕಟ್ಟಡವಾಗಿದ್ದು, ಮಧ್ಯಾಹ್ನ ನೆಲ ಮಾಳಿಗೆಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿತ್ತು. ಈ ವೇಳೆ ಅಲ್ಲಿ ನೀರು ಸಂಗ್ರಹ ಆಗಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಇದ್ದಕ್ಕಿದ್ದಂತೆ ಕಟ್ಟಡ ಧರಶಾಯಿಯಾಗಿದೆ.

ಘಟನೆ ಸಂದರ್ಭದಲ್ಲಿ ಕಟ್ಟಡದೊಳಗೆ ಎಷ್ಟು ಮಂದಿಯಿದ್ದರು ಎನ್ನುವ ನಿಖರ ಅಂಕಿ ಅಂಶ ತಿಳಿದು ಬಂದಿಲ್ಲ. ಘಟನೆ ಕಾರಣ ಕಟ್ಟಡ ಮಾಲೀಕನ ಮೇಲೆ ಎಫ್ಐಆರ್ ದಾಖಲಾಗಿದೆ. ದೆಹಲಿ ಪೊಲೀಸ್, ಎನ್‌ಡಿಆರ್‌ಎಫ್, ದೆಹಲಿ ಅಗ್ನಿಶಾಮಕ ಸೇವೆ ಮತ್ತು ಡಿಡಿಎಂಎ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ.

ಭೂಕಂಪದ ಅನುಭವ:

ಕಟ್ಟಡ ಕುಸಿಯುತ್ತಿದ್ದಂತೆ ಭೂಕಂಪನ ಅನುಭವವಾಯಿತು ಎಂದು ಪ್ರತ್ಯಕ್ಷದರ್ಶಿಗಳು ಘಟನೆ ಬಗ್ಗೆ ವಿವರಿಸಿದ್ದಾರೆ. ಅಲ್ಲದೆ, ನಗರದಲ್ಲಿ ಕಟ್ಟಡ ಸುರಕ್ಷತೆ ಬಗ್ಗೆ ತಪಾಸಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಸಿಲುಕಿದವರಿಂದ ಫೋನ್‌:

ಅಂತಸ್ತಿನ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸುಮಾರು 40 ರಿಂದ 50 ವಿದ್ಯಾರ್ಥಿಗಳು ಸಿಲುಕಿರುವ ಸಾಧ್ಯತೆ ಇದ್ದು, ಅವರಲ್ಲಿ ಕೆಲವರು ಫೋನ್ ಮೂಲಕ ಸಹಾಯಕ್ಕಾಗಿ ಕರೆ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಹಾಗೂ ಸ್ಥಳೀಯ ಬಿಜೆಪಿ ಶಾಸಕ ಅನಿಲ್ ಶರ್ಮಾ ತಿಳಿಸಿದ್ದಾರೆ.

ಮೋದಿ ಶೋಕ, ಶಾ ಗೋವಾ ಪ್ರವಾಸ ರದ್ದು:

ಪ್ರಧಾನಿ ನರೇಂದ್ರ ಮೋದಿ ಈ ಘಟನೆ ಆಘಾತಕಾರಿಯಾಗಿದ್ದು, ರಕ್ಷಣಾ ಕಾರ್ಯ ತೀವ್ರಗೊಳಿಸಬೇಕು ಎಂದು ಸೂಚಿಸಿದ್ದಾರೆ. ಇನ್ನು ಕಟ್ಟಡ ಕುಸಿತ ಬೆನ್ನಲ್ಲೇ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಮ್ಮ ಗೋವಾ ಪ್ರವಾಸವನ್ನು ದಿಢೀರ್‌ ರದ್ದುಗೊಳಿಸಿ ದಿಲ್ಲಿಗೆ ಮರಳಿದ್ದಾರೆ. ಸಿಎಂ ರೇಖಾ ಗುಪ್ತಾ ಸ್ಥಳದಲ್ಲೇ ಮೊಕ್ಕಾಂ ಹೂಡಿ ರಕ್ಷಣಾ ಕಾರ್ಯ ನೋಡಿಕೊಳ್ಳುತ್ತಿದ್ದಾರೆ.

==

ಉ.ಪ್ರ.ದಲ್ಲಿ ಮಳೆಗೆ ಕುಸಿದ ಮನೆಗಳು: 6 ಬಲಿ

- ಒಂದೇ ಕುಟುಂಬದ ನಾಲ್ವರು ಸೇರಿ 6 ಸಾವು

ಕಾನ್ಪುರ/ಬದಾಯೂಂ: ಉತ್ತರಪ್ರದೇಶದಲ್ಲಿ ನಡೆದ ಮೂರು ಪ್ರತ್ಯೇಕ ಘಟನೆಗಳಲ್ಲಿ ಭಾರೀ ಮಳೆಗೆ ಮನೆಗಳು ಕುಸಿದು ಬಿದ್ದು ಒಂದೇ ಕುಟುಂಬದ ನಾಲ್ವರು ಸೇರಿದಂತೆ 6 ಮಂದಿ ಸಾವನ್ನಪ್ಪಿದ್ದಾರೆ.

ಕಾನ್ಪುರ ಜಿಲ್ಲೆಯಲ್ಲಿ ಮಳೆ ಕುಸಿದು ಅವಶೇಷಗಳಡಿ ತಂದೆ ಹಾಗೂ ನಾಲ್ವರು ಹೆಣ್ಣು ಮಕ್ಕಳು ಸಿಲುಕಿದ್ದರು. ಸತತ ಎರಡು ಗಂಟೆಗಳ ಕಾರ್ಯಾಚರಣೆ ಬಳಿಕ ಅವರನ್ನು ಅಲ್ಲಿಂದ ಹೊರ ಕರೆದುಕೊಂಡು ಬಂದು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ದುರಾದೃಷ್ಟವಶಾತ್‌ ತಂದೆ ಹಾಗೂ ಮೂವರು ಹೆಣ್ಣು ಮಕ್ಕಳು ಸಾವನ್ನಪ್ಪಿದ್ದಾರೆ. ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ.

ಇನ್ನೊಂದೆಡೆ ಬದಾಯೂಂ ಜಿಲ್ಲೆಯಲ್ಲಿ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಮನೆಯ ಗೋಡೆ ಕುಸಿದು ರೈತನೊಬ್ಬ ಅವಶೇಷಗಳಡಿ ಹೂತುಹೋಗಿ ಸಾವನ್ನಪ್ಪಿದ್ದಾರೆ. ಅವರ ಪತ್ನಿ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.ಮತ್ತೊಂದೆಡೆ ಬಲಿಯಾ ಜಿಲ್ಲೆಯ ನಾಫರ್‌ಪುರದಲ್ಲಿ ಮಣ್ಣಿನ ಗೋಡೆ ಕುಸಿದು 6 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ.

==

ಬಿಹಾರದಲ್ಲಿ ಗಂಗಾ ಪ್ರವಾಹ: 11 ಜಿಲ್ಲೆಗಳ 22 ಲಕ್ಷ ಮಂದಿ ಬಾಧಿತ

ಪಿಟಿಐ ಪಟನಾಧಾರಾಕಾರ ಮಳೆಯಿಂದಾಗಿ ಬಿಹಾರದಲ್ಲಿ ಗಂಗಾ ನದಿ ನೀರಿನ ಪ್ರಮಾಣ ಭಾನುವಾರವೂ ಮುಂದುವರಿದಿದ್ದು, 11 ಜಿಲ್ಲೆಗಳಲ್ಲಿ 22 ಲಕ್ಷ ಜನರು ಪ್ರವಾಹಕ್ಕೆ ಬಾಧಿತರಾಗಿದ್ದಾರೆ. ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ತಗ್ಗು ಪ್ರದೇಶಗಳೆಲ್ಲ ಜಲಾವೃತವಾಗಿದ್ದು , ಎಚ್ಚರ ವಹಿಸುವಂತೆ ಸರ್ಕಾರ ಜನರಲ್ಲಿ ಮನವಿ ಮಾಡಿದೆ.

ನೀರಿನ ಮಟ್ಟ ಏರಿಕೆಯಿಂದ ಪಟನಾ, ಭೋಜ್‌ಪುರ, ಸರನ್, ವೈಶಾಲಿ, ಭಾಗಲ್ಪುರ್, ಬೇಗುಸರಾಯ್, ಬಕ್ಸರ್, ಸಮಷ್ಟಿಪುರ, ಮುಂಗೇರ್‌, ಕಟಿಹಾರ್‌ ಮತ್ತು ಅರಾರಿಯಾ ಜಿಲ್ಲೆಗಳಲ್ಲಿ ಪರಿಣಾಮ ಬೀರಿದೆ. ಈ 11 ಜಿಲ್ಲೆಗಳ 330 ಗ್ರಾಮ ಪಂಚಾಯತಿಗಳ ಸುಮಾರು 22 ಲಕ್ಷ ಜನರು ತೊಂದರೆಗೊಳಗಾಗಿದ್ದಾರೆ. ಇನ್ನು ಜನರ ರಕ್ಷಣೆಗೆ ಜಿಲ್ಲಾಡಳಿತ ಸರ್ವ ಸನ್ನದ್ಧವಾಗಿದ್ದು 27 ಎಸ್‌ಡಿಆರ್‌ಎಫ್‌ನ ತಂಡಗಳು ಮತ್ತು 10 ಎನ್‌ಡಿಆರ್‌ಎಫ್‌ನ ತಂಡಗಳನ್ನು ವಿವಿಧ ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ.

==

ಸಿಕ್ಕಿಂನಲ್ಲಿ ಭೂಕುಸಿತ: 2 ನದಿಗಳ ಹರಿವಿಗೆ ಅಡ್ಡಿ

ಗ್ಯಾಂಗ್ಟಕ್: ಸಿಕ್ಕಿಂನ ಮಂಗನ್ ಜಿಲ್ಲೆಯಲ್ಲಿ ಭಾನುವಾರ ಮುಂಜಾನೆ ಭಾರಿ ಭೂಕುಸಿತ ಸಂಭವಿಸಿದ್ದು, ಇದರಿಂದಾಗಿ 2 ನದಿಗಳ ಹರಿವಿಗೆ ಭಾಗಶಃ ಅಡ್ಡಿಯಾಗಿದ್ದು, ನೀರು ಸಂಗ್ರಹಗೊಂಡಿದೆ.ಥೆಂಗ್ ಸುರಂಗದ ಎದುರು ನಾಗಾ ಅರಣ್ಯ ಪ್ರದೇಶದ ನಾಗಾ-ದೋಶಾ (ನಾಗಾ-ತೋಸಾ) ರಸ್ತೆಯ ಹೊಸ ರಸ್ತೆ ಕಟಿಂಗ್ ಬಳಿ ಬೃಹತ್ ಭೂಕುಸಿತ ಸಂಭವಿಸಿದೆ. ಬೆಟ್ಟದ ಇಳಿಜಾರಿನ ಗಣನೀಯ ಭಾಗವು ಚುಂಗ್ಥಾಂಗ್ ಉಪವಿಭಾಗದ ತೀಸ್ತಾ ಮತ್ತು ಚ್ಯಕೂಂಗ್ ನದಿಗಳ ಸಂಗಮದ ಬಳಿ ಕುಸಿದ ಕಾರಣ, ಎರಡೂ ನದಿಗಳ ಹರಿವನ್ನು ಭಾಗಶಃ ನಿರ್ಬಂಧಿಸಿದೆ.ಆದರೆ ಇಲ್ಲಿಯವರೆಗೆ ಯಾವುದೇ ಸಾವು ನೋವುಗಳು ಅಥವಾ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ, ಆದರೆ ಆಸ್ತಿಗೆ ಹಾನಿಯ ಪ್ರಮಾಣವನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಕಲಾಂಗ್ ಮತ್ತು ಫಿಡಾಂಗ್ ಬಳಿ ನದಿ ಮಟ್ಟವು ಪ್ರಸ್ತುತ ಸಾಮಾನ್ಯವಾಗಿದೆ, ಆದರೂ ನೀರು ಕೆಸರುಮಯವಾಗಿಯೇ ಇದೆ. ನೀರಿನ ಮಟ್ಟವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಮತ್ತು ಯಾವುದೇ ಗಮನಾರ್ಹ ಬದಲಾವಣೆಗಳನ್ನು ತಕ್ಷಣ ವರದಿ ಮಾಡಲು ಸ್ಥಳೀಯ ಆಡಳಿತಕ್ಕೆ ನಿರ್ದೇಶನ ನೀಡಲಾಗಿದೆ. ಜನರಿಗೆ ನದಿ ಹತ್ತಿರ ಹೋಗದಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.