ಸಾರಾಂಶ
ನವದೆಹಲಿ : ಕರ್ನಾಟಕದ ಧಾರವಾಡದಲ್ಲಿರುವ ಐಐಟಿ ಸೇರಿದಂತೆ ಹೊಸದಾಗಿ ಸ್ಥಾಪಿಸಲಾದ 5 ಐಐಟಿಗಳ ಶೈಕ್ಷಣಿಕ ಮತ್ತು ಮೂಲ ಸೌಕರ್ಯಗಳ ಅಭಿವೃದ್ಧಿಗೆ 4 ವರ್ಷಗಳ ಅವಧಿಗೆ 11.8 ಸಾವಿರ ಕೋಟಿ ರು. ಮೀಸಲಿರಿಸುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಬುಧವಾರ ಅನುಮೋದನೆ ನೀಡಿದೆ.
ಕೇಂದ್ರವು ಕರ್ನಾಟಕದ ಧಾರವಾಡ, ಆಂಧ್ರ ಪ್ರದೇಶದ ತಿರುಪತಿ, ಕೇರಳದ ಪಾಲಕ್ಕಡ್ , ಛತ್ತೀಸ್ಗಢದ ಭಿಲಾಯಿ, ಜಮ್ಮು ಕಾಶ್ಮೀರದ ಜುಮ್ಮು ಐಐಟಿ ಅಭಿವೃದ್ಧಿಗೆ ವಿಶೇಷ ಅನುದಾನವನ್ನು ಮೀಸಲಿಡಲು ಮುಂದಾಗಿದೆ.
ಈ ಬಗ್ಗೆ ಕೇಂದ್ರ ಅಧಿಕೃತ ಮಾಹಿತಿ ನೀಡಿದ್ದು, ಒಟ್ಟು 11,828 .7 ಕೋಟಿ ರು ಹಣವನ್ನು 2025 -26 ರ ಅವಧಿಯಿಂದ 2028-29ರ ನಾಲ್ಕು ವರ್ಷಗಳ ಅವಧಿಗೆ ಶೈಕ್ಷಣಿಕ ಮತ್ತು ಮೂಲ ಸೌಕರ್ಯಗಳ ಅಭಿವದ್ಧಿ ವೆಚ್ಚಕ್ಕೆ ನಿಗದಿಪಡಿಸಲು ನಿರ್ಧರಿಸಲಾಗಿದೆ ಎಂದಿದೆ. ಇದರ ಜೊತೆಗೆ ಸಚಿವ ಸಂಪುಟವು ಪ್ರಾಧ್ಯಾಪಕರ ಮಟ್ಟದಲ್ಲಿ 130 ಹೊಸ ಬೋಧಕ ಸಿಬ್ಬಂದಿ ನೇಮಕಕ್ಕೂ ಸಮ್ಮತಿಸಿದೆ. ಇದರ ಜೊತೆಗೆ ಕೇಂದ್ರವು ಮುಂದಿನ ನಾಲ್ಕು ವರ್ಷಗಳಲ್ಲಿ ಈ ಐಐಟಿಗಳಲ್ಲಿ 6500 ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳ ದಾಖಲಾತಿ ಬಗ್ಗೆಯೂ ಗಮನ ವಹಿಸುವುದಾಗಿ ಹೇಳಿದೆ.