ಬೆಂಗ್ಳೂರಿಗೆ ಬರುತ್ತಿದ್ದ 14 ಜನ ಅಕ್ರಮ ಬಾಂಗ್ಲಾದೇಶಿಗರ ಸೆರೆ

| Published : Nov 13 2023, 01:15 AM IST

ಸಾರಾಂಶ

ತ್ರಿಪುರಾ ಮೂಲಕ ಭಾರತಕ್ಕೆ ನುಸುಳಿದ್ದರು. ಕೆಲಸಕ್ಕಾಗಿ ಕರ್ನಾಟಕಕ್ಕೆ ಹೊರಟಿದ್ದೆವು: ವಲಸಿಗರು

ಅಗರ್ತಲಾ: ಅಕ್ರಮವಾಗಿ ಭಾರತ ಪ್ರವೇಶಿಸಿದ್ದ ಆರೋಪದ ಮೇಲೆ ನಾಲ್ವರು ಮಕ್ಕಳು ಸೇರಿದಂತೆ 14 ಬಾಂಗ್ಲಾದೇಶದ ಪ್ರಜೆಗಳನ್ನು ತ್ರಿಪುರಾದ ಗೋಮತಿ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ತಾವು ಉದ್ಯೋಗ ಅರಸಿ ಕರ್ನಾಟಕದ ಬೆಂಗಳೂರಿಗೆ ಹೋಗಲು ಯೋಜಿಸಿದ್ದೆವು ಎಂದು ತಿಳಿಸಿದ್ದಾರೆ.

ಮಾಹಿತಿ ಮೇರೆಗೆ ಬೈಷ್ನಾಪುರದ 2 ಮನೆಗಳ ಮೇಲೆ ದಾಳಿ ನಡೆಸಿದಾಗ 14 ಜನರನ್ನು ಬಂಧಿಸಿ, ಅವರಿಗೆ ಆಶ್ರಯ ನೀಡಿದ್ದ ಮೂವರು ಸ್ಥಳೀಯರನ್ನೂ ಬಂಧಿಸಲಾಗಿದೆ.

ನಾಲ್ವರು ಮಹಿಳೆಯರು ಮತ್ತು ನಾಲ್ವರು ಮಕ್ಕಳು ಸೇರಿದಂತೆ 14 ಬಾಂಗ್ಲಾದೇಶದ ಪ್ರಜೆಗಳನ್ನು ದಕ್ಷಿಣ ತ್ರಿಪುರಾದ ಸಬ್ರೂಮ್‌ನ ಗಡಿಯಲ್ಲಿರುವ ಮನೆಯೊಂದರಿಂದ ಬಂಧಿಸಲಾಗಿದೆ. ಹೆಚ್ಚಿನ ತನಿಖೆ ಮತ್ತು ಕಾನೂನು ಕ್ರಮಕ್ಕಾಗಿ ಬಂಧಿತರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಶಾದ್ಯಂತ ಮಾನವ ಕಳ್ಳಸಾಗಣೆ ಮತ್ತು ಒಳನುಸುಳುವಿಕೆ ವಿರುದ್ಧ ದಾಳಿ ನಡೆಸುತ್ತಿರುವ ಎನ್‌ಐಎ ಕಳೆದ ನಾಲ್ಕು ದಿನಗಳಲ್ಲಿ 44 ಜನರನ್ನು ಬಂಧಿಸಿತ್ತು.