ಮೊದಲ ಹೋರಾಟಕ್ಕೆ ಸಜ್ಜು

ತಮಿಳ್ನಾಡಲ್ಲಿ ಇದೀಗ ವಿಜಯ್‌ಗೆ ಸೂಕ್ತ ಪ್ರತಿಸ್ಪರ್ಧಿಗಳಿಲ್ಲ. ಈ ಸ್ಥಾನ ತುಂಬುವ ಇರಾದೆ

ನಿರುದ್ಯೋಗಿಗಳು ಜಿರಳೆ ಎಂಬ ಇತ್ತೀಚಿನ ಸುಪ್ರೀಂ ಜಡ್ಜ್‌ ಹೇಳಿಕೆಯಿಂದ ಭಾರೀ ವಿವಾದ

ಅದರ ಬೆನ್ನಲ್ಲೇ ಆನ್‌ಲೈನಲ್ಲಿ ಕಾಕ್ರೋಚ್‌ ಜನತಾ ಪಕ್ಷ ಸ್ಥಾಪಿಸಿದ್ದ ಅಮೆರಿಕ ವಾಸಿ ದೀಪ್ಕೆ

ಇದಕ್ಕೆ ಜನ ಬೆಂಬಲ. ಈ ಹಿನ್ನೆಲೆಯಲ್ಲಿ ಜೂ.6ಕ್ಕೆ ದಿಲ್ಲಿಗೆ ಆಗಮನ. ಜಂತರ್‌ಮಂತರ್‌ನಲ್ಲಿ ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಸಮರ


==

ನವದೆಹಲಿ: ಆನ್‌ಲೈನ್‌ನಲ್ಲಿ ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) ಸ್ಥಾಪಿಸುವ ಮೂಲಕ ಭಾರಿ ಸಂಚಲನ ಸೃಷ್ಟಿಸಿದ್ದ ಅಭಿಜಿತ್‌ ದೀಪ್ಕೆ, ಇದೀಗ ನೇರವಾಗಿ ಬೀದಿಗಿಳಿದು ಹೋರಾಟದ ಘೋಷಣೆ ಮಾಡಿದ್ದಾರೆ. ಸದ್ಯ ಅಮೆರಿಕ ವಾಸಿಯಾಗಿರುವ ದೀಪ್ಕೆ ಜೂ.6ರಂದು ಭಾರತಕ್ಕೆ ಆಗಮಿಸುವುದಾಗಿ ತಿಳಿಸಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿಯೂ ಘೋಷಿಸಿದ್ದಾರೆ.

ದೀಪ್ಕೆ ಸದ್ಯ ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸಿಜೆಪಿ ಸ್ಥಾಪನೆಯ ಬಳಿಕ ಇದು ಅವರ ಮೊದಲ ಭಾರತ ಭೇಟಿ. ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಅವರು, ‘ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆಯಿಂದ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಲಕ್ಷಾಂತರ ವಿದ್ಯಾರ್ಥಿಗಳ ಪರಿಶ್ರಮ ವ್ಯರ್ಥವಾಯಿತು. ಹೀಗಾಗಿ ಶಿಕ್ಷಣ ಸಚಿವ ಪ್ರಧಾನ್‌ ಅವರ ರಾಜೀನಾಮೆ ಕೇಳಲು ಭಾರತಕ್ಕೆ ಮರಳಲು ನಿರ್ಧರಿಸಿದ್ದೇನೆ. ಶನಿವಾರ ಬೆಳಿಗ್ಗೆ ನೀವೆಲ್ಲರೂ ನನ್ನನ್ನು ಏರ್ಪೋರ್ಟ್‌ನಲ್ಲಿ ಭೇಟಿಯಾಗಿ. ನಾವೆಲ್ಲ ಸಂಸತ್‌ ಮಾರ್ಗದ ಪೊಲೀಸ್‌ ಠಾಣೆಗೆ ತೆರಳಿ, ಜಂತರ್‌ ಮಂತರ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ಅನುಮತಿ ಕೇಳೋಣ’ ಎಂದು ತಿಳಿಸಿದ್ದಾರೆ.

ನಾನು ಗಾಂಧಿ ಅನುಯಾಯಿ:

‘ಈ ದೇಶ ಯಾವುದೇ ಒಂದು ಪಕ್ಷಕ್ಕೆ ಸೇರಿದ್ದಲ್ಲ. ಇದು ನಮ್ಮೆಲ್ಲರಿಗೂ ಸೇರಿದ್ದು. ಇದು ನಮ್ಮ ಭವಿಷ್ಯದ ಪ್ರಶ್ನೆ. ನಮ್ಮದು ಪ್ರಜಾಪ್ರಭುತ್ವದ ದೇಶ ಎಂಬುದನ್ನು ನಾನಿಂದೂ ನಂಬುತ್ತೇನೆ. ನಮಗೆ ಪ್ರತಿಭಟನೆ ನಡೆಸಲು ಅನುಮತಿ ಸಿಗುತ್ತದೆ ಎಂಬ ವಿಶ್ವಾಸವಿದೆ. ನಾನೊಂದು ವಿಷಯವನ್ನು ಸ್ಪಷ್ಟಪಡಿಸುತ್ತೇನೆ. ನಾನು ಗಾಂಧಿ, ಅಂಬೇಡ್ಕರ್‌, ಭಗತ್‌ ಸಿಂಗ್‌ ಹಾಗೂ ನೆಹರೂ ಅವರ ದೊಡ್ಡ ಅನುಯಾಯಿ. ಪ್ರಜಾಪ್ರಭುತ್ವದಲ್ಲಿ ನಮಗೆ ಧ್ವನಿಯೆತ್ತುವ ಹಕ್ಕು ನೀಡಿದ ಸಂವಿಧಾನದ ಮೇಲೆ ನನಗೆ ಎಲ್ಲಕ್ಕಿಂತ ಹೆಚ್ಚು ನಂಬಿಕೆಯಿದೆ’ ಎಂದಿದ್ದಾರೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹೇಳಿಕೆ ಹಾಗೂ ದೇಶದ ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶ ಹೊರಹಾಕಲು ಹುಟ್ಟಿಕೊಂಡ ಸಿಜೆಪಿ, ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಹಲವು ವಿಚಾರಗಳ ವಿರುದ್ಧ ಧ್ವನಿಯೆತ್ತುತ್ತಿದೆ.