ಕನ್ನಡಪ್ರಭ ವಾರ್ತೆ ಮಂಡ್ಯ

ನಿರುದ್ಯೋಗ ಮತ್ತು ಅವ್ಯವಸ್ಥೆ ವಿರುದ್ಧದ ವಿಡಂಬನಾತ್ಮಕ ಚಳವಳಿಯಾಗಿ ಆರಂಭವಾದ ಕಾಕ್ರೋಜ್ ಜನತಾ ಪಾರ್ಟಿ ವಿರುದ್ಧ ಬಿಜೆಪಿ ಕಾರ್ಯಕರ್ತರು ವಿಭಿನ್ನ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾ ಬಿಜೆಪಿ ವಿಕಾಸ ಭವನದಲ್ಲಿ ಕಾರ್ಯಕರ್ತರು ಜಿರಳೆಗಳನ್ನು ಹೊಸಕಿ ಹಾಕುವ ಅಣಕು ಪ್ರದರ್ಶನದೊಂದಿಗೆ ಕಾಕ್ರೋಚ್ ಜನತಾ ಪಾರ್ಟಿಯನ್ನು ವಿರೋಧಿಸಿದರು.

ಬಿಜೆಪಿ ಮುಖಂಡ ಶಿವಕುಮಾರ್ ಆರಾಧ್ಯ ಮಾತನಾಡಿ, ದೇಶವನ್ನು ಹಾಳು ಮಾಡುವ ಉದ್ದೇಶದಿಂದ ಯಾವುದೋ ಮೂಲೆಯಲ್ಲಿ ಕುಳಿತು ಜಿರಳೆ ಹೆಸರಿನಲ್ಲಿ ಪಕ್ಷ ಸ್ಥಾಪಿಸಿ ಅಶಾಂತಿ ಉಂಟು ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಮನೆಯಲ್ಲಿರುವ ಜಿರಳೆಯನ್ನು ಹೊಸಕಿ ಹಾಕುತ್ತೇವೆ. ಅಂತಹ ಜಿರಳೆ ಹೆಸರಿನಲ್ಲಿ ರಾಜಕೀಯ ಮಾಡಲು ಹೊರಟಿರುವುದು ಹಾಸ್ಯಾಸ್ಪದ ಟೀಕಿಸಿದರು.


ಇದೊಂದು ನಕಲಿ ಕಾಕ್ರೋಜ್. ಇದನ್ನು ಯಾರು ಬೆಂಬಲಿಸಬೇಡಿ. ಕೆಟ್ಟ ಜೀವಿ ಜಿರಳೆಯನ್ನು ನಿರ್ಮೂಲನೆ ಮಾಡಬೇಕು. ದೇಶದ ಜನರು ಇದಕ್ಕೆ ಕಿವಿಕೊಡಬಾರದು. ಯಾವುದೋ ದೇಶದಲ್ಲಿ ಕುಳಿತು ನುಸುಳುಕೋರರು ಸಾಮಾಜಿಕ ಜಾಲತಾಣದಲ್ಲಿ ಕಾಕ್ರೋಜ್ ಸೃಷ್ಟಿಸಿದ್ದಾರೆ. ಅದಕ್ಕೆ ಬೆಂಬಲ ನೀಡುವ ಮಾತನ್ನು ಹೇಳಿರುವ ಕಾಂಗ್ರೆಸ್ ನಡೆ ದೇಶದಲ್ಲಿ ತುಂಬಾ ಅಪಾಯಕಾರಿ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಹೊಸಹಳ್ಳಿ ಶಿವು, ಮಾದರಾಜೇ ಅರಸ್, ಪಣಕನಹಳ್ಳಿ ತಾತಪ್ಪ, ಶಿವಣ್ಣ ಭಾಗವಹಿಸಿದ್ದರು.

ಡಾ.ಇಂದ್ರೇಶ್ ಆರೋಗ್ಯ ವಿಚಾರಿಸಿದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು

ಪಾಂಡವಪುರ:ಸೊಂಟದ ಕೀಲುನೋವಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿ ಪಡೆಯುತ್ತಿರುವ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಅವರ ಮನೆಗೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಜಿಪಂ ಮಾಜಿ ಸದಸ್ಯ ಸಿ.ಅಶೋಕ್ ಭೇಟಿಕೊಟ್ಟು ಆರೋಗ್ಯ ವಿಚಾರಿಸಿದರು.ನಂತರ ಸಿ.ಎಸ್.ಪುಟ್ಟರಾಜು ಅವರು ಡಾ.ಎನ್.ಎಸ್.ಇಂದ್ರೇಶ್ ಅವರ ಆರೋಗ್ಯ ವಿಚಾರಿಸಿ ಕೆಲಕಾಲ ಚರ್ಚಿಸಿದರು. ಶೀಘ್ರ ಗುಣಮುಖರಾಗುವಂತೆ ಹಾರೈಸಿದರು.

ಜಿಲ್ಲೆಯಲ್ಲಿ ಎನ್‌ಡಿಎ ಮೈತ್ರಿ ವಿಚಾರವಾಗಿ ಕೆಲವು ತಿಂಗಳ ಹಿಂದೆ ಅಪಸ್ವರಗಳು ಎದ್ದಿದ್ದವು. ಬಿಜೆಪಿ ಕೆಲನಾಯಕರು ಅಸಮಾಧಾನ ಹೊರಹಾಕಿದ್ದರು. ಇದರ ನಡುವೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಅನಾರೋಗ್ಯಕ್ಕೆ ಒಳಗಾಗಿರುವ ಡಾ.ಇಂದ್ರೇಶ್ ಅವರ ಮನೆಗೆ ಭೇಟಿಕೊಟ್ಟು ಅವರ ಆರೋಗ್ಯ ವಿಚಾರಿಸಿ ಎನ್‌ಡಿಎ ಮೈತ್ರಿ ಗಟ್ಟಿಯಾಗಿದೆ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ.