ಸಾರಾಂಶ
ನವದೆಹಲಿ : ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಘೋಷಿಸಿರುವ ಗ್ಯಾರಂಟಿ ಯೋಜನೆಗಳು ಮಹಿಳೆಯರ ಜೀವನದಲ್ಲಿ ಬದಲಾವಣೆ ತರಲಿವೆ ಎಂದು ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರು ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿದ್ದಾರೆ.
ಲೋಕಸಭೆಗೆ ಸೋಮವಾರ ದೇಶದ ವಿವಿಧೆಡೆ 4ನೇ ಚರಣದ ಮತದಾನ ನಡೆಯುತ್ತಿದ್ದಾಗಲೇ ಗ್ಯಾರಂಟಿ ಯೋಜನೆಗಳನ್ನು ಅವರು ಪ್ರಸ್ತಾಪಿಸಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿರುವ ಕರ್ನಾಟಕ ಹಾಗೂ ತೆಲಂಗಾಣದಲ್ಲೂ ಗ್ಯಾರಂಟಿ ಯೋಜನೆಗಳು ಕೋಟ್ಯಂತರ ಜನರ ಜೀವನದಲ್ಲಿ ಸುಧಾರಣೆ ತಂದಿವೆ ಎಂದು ಅವರು ತಿಳಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟದಿಂದ ಆಧುನಿಕ ಭಾರತ ನಿರ್ಮಾಣದವರೆಗೆ ಮಹಿಳೆಯರು ಬೃಹತ್ ಕೊಡುಗೆ ನೀಡಿದ್ದಾರೆ. ಆದರೆ ಹಣದುಬ್ಬರ ಹೆಚ್ಚಳದಿಂದಾಗಿ ಇಂದು ಮಹಿಳೆಯರು ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಅವರ ಕಠಿಣ ಪರಿಶ್ರಮಕ್ಕೆ ನ್ಯಾಯ ಒದಗಿಸಲು ಗ್ಯಾರಂಟಿ ಎಂಬ ಕ್ರಾಂತಿಕಾರಕ ಯೋಜನೆಯನ್ನು ಕಾಂಗ್ರೆಸ್ ತಂದಿದೆ. ಮಹಾಲಕ್ಷ್ಮಿ ಎಂಬ ಯೋಜನೆಯಡಿ ವಾರ್ಷಿಕ 1 ಲಕ್ಷ ರು.ಗಳನ್ನು ಮಹಿಳೆಯರಿಗೆ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.