ಬಳಿಕ ಆದೇಶದಲ್ಲಿ ಮಾರ್ಪಾಡು
ಮುಂಬೈ: ಮಾತುಕತೆಯ ಮೂಲಕ ಪ್ರಕರಣ ಇತ್ಯರ್ಥಕ್ಕೆ ಸೂಚಿಸಿದರೂ ಒಪ್ಪದೇ ಕಾನೂನು ಹೋರಾಟ ಮುಂದುವರೆಸುವ ಹಠ ತೋರಿದ 90 ವರ್ಷದ ವೃದ್ಧೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ನ್ಯಾಯಾಲಯ, ಪ್ರಕರಣದ ವಿಚಾರಣೆಯನ್ನು 2046ರವರೆಗೆ ಅಂದರೆ 20 ವರ್ಷ ಮುಂದೂಡಿದ ಅಚ್ಚರಿಯ ಘಟನೆಯ ಮಹಾರಾಷ್ಟ್ರದಲ್ಲಿ ನಡೆದಿದೆ. ಆದರೆ ಬಳಿಕ ತನ್ನ ಆದೇಶವನ್ನು ಮಾರ್ಪಾಟು ಮಾಡಿದ ಕೋರ್ಟ್ ಇದೇ ಜುಲೈನಲ್ಲಿ ವಿಚಾರಣೆಗೆ ಒಪ್ಪಿದೆ.ಮುಂಬೈನ ಶ್ಯಾಮ್ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿ ವಿವಾದಕ್ಕೆ ಸಂಬಂಧಿಸಿದಂತೆ 90 ವರ್ಷದ ತಾರಿಣಿ ಬಹೇನ್ ದೇಸಾಯಿ 2017 ರಲ್ಲಿ ಕಿಲ್ಕಿಲ್ರಾಜ್ ಬನ್ಸಾಲಿ ಎಂಬವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. 20 ಕೋಟಿ ರು. ಪರಿಹಾರಕ್ಕೆ ಬೇಡಿಕೆಯಿಟ್ಟಿದ್ದರು.. ಈ ಹಿಂದೆ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಪ್ರತಿವಾದಿ ಕ್ಷಮೆಯಾಚಿಸಿದರೆ, ಪ್ರಕರಣ ಇತ್ಯರ್ಥ ಪಡಿಸಿಕೊಳ್ಳಲು ಸೂಚಿಸಿತ್ತು. ಆದರೆ ವೃದ್ಧೆ ಅದಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ. ಹೀಗಾಗಿ ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಾಲಯ‘ ಜೀವನದ ಸಂಧ್ಯಾಕಾಲದಲ್ಲಿ ದಾವೆದಾರರ ನಡುವಿನ ಅಹಂಕಾರದ ಕದನ ವ್ಯವಸ್ಥೆಯನ್ನು ಸ್ಥಗಿತಗೊಳಿಸುವ ಪ್ರಕರಣಗಳಲ್ಲಿ ಇದು ಒಂದು. ಹೀಗಾಗಿ ನ್ಯಾಯಾಲಯ ಇದನ್ನು ಆದ್ಯತೆಯ ವಿಷಯವಾಗಿ ಪರಿಗಣಿಸಲು ಸಾಧ್ಯವಿಲ್ಲ’ ಎಂದು ತೀರ್ಪು ನೀಡಿ 2046ಕ್ಕೆ ವಿಚಾರಣೆ ಮುಂದೂಡಿತ್ತು. ಆದರೆ ಆ ಬಳಿಕ ಒಂದು ದಿನದಲ್ಲಿ ತೀರ್ಪು ಮಾರ್ಪಾಡು ಮಾಡಿ ಈ ವರ್ಷದ ಜುಲೈ 15ಕ್ಕೆ ನಿಗದಿಪಡಿಸಿದೆ.