ಸಾರಾಂಶ
ನವದೆಹಲಿ : ತುರ್ತುಪರಿಸ್ಥಿತಿಯನ್ನು ಖಂಡಿಸಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಸದನದಲ್ಲಿ ಹೇಳಿಕೆ ನೀಡಿದ್ದ ಹೇಳಿಕೆ ಬಗ್ಗೆ ಕಾಂಗ್ರೆಸ್ ಪಕ್ಷ ಹಾಗೂ ಇಂಡಿಯಾ ಕೂಟದ ಅಂಗಪಕ್ಷಗಳು ಅಸಮಾಧಾನ ಹೊರಹಾಕಿವೆ. ಈ ಬಗ್ಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ ನೇರಾನೇರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಹುಲ್ ಹಾಗೂ ಇಂಡಿಯಾ ಕೂಟದ ಸಂಸದರು ಬಿರ್ಲಾ ಅವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿ, ಸ್ಪೀಕರ್ ಆಗಿ ಆಯ್ಕೆ ಆಗಿದ್ದಕ್ಕೆ ಅಭಿನಂದನೆ ಸಲ್ಲಿಸಿದರು. ಈ ವೇಳೆ, ‘ನೀವು ತುರ್ತುಪರಿಸ್ಥಿತಿಯ ಬಗ್ಗೆ ಮಾಡಿದ್ದ ಉಲ್ಲೇಖ ಸ್ಪಷ್ಟವಾಗಿ ರಾಜಕೀಯ ಉಲ್ಲೇಖವಾಗಿದೆ. ಇದನ್ನು ತಪ್ಪಿಸಬಹುದಿತ್ತು’ ಎಂದು ಹೇಳಿದರು.ಈ ನಡುವೆ, ಕಾಂಗ್ರೆಸ್ ಪಕ್ಷವು ಗುರುವಾರ ಸಂಸದ ಕೆ.ಸಿ. ವೇಣುಗೋಪಾಲ್ ಅವರ ಮೂಲಕ ಬಿರ್ಲಾ ಅವರಿಗೆ ಪ್ರತ್ಯೇಕ ಔಪಚಾರಿಕ ಆಕ್ಷೇಪಣೆ ಸಲ್ಲಿಸಿದ್ದು , ‘ಅರ್ಧ ಶತಮಾನದ ಹಿಂದಿನ ಘಟನೆಯ ಕುರಿತ ಉಲ್ಲೇಖ ಸಂಸದೀಯ ಸಂಪ್ರದಾಯಗಳ ಅಪಹಾಸ್ಯ ಹಾಗೂ ಆಘಾತಕಾರಿ’ ಎಂದು ಬಣ್ಣಿಸಿದೆ.
ಲೋಕಸಭಾ ಸ್ಪೀಕರ್ ಆಗಿ ಆಯ್ಕೆಯಾದ ಕೂಡಲೇ, ಬಿರ್ಲಾ ಅವರು ಬುಧವಾರ ತುರ್ತು ಪರಿಸ್ಥಿತಿ ಬಗ್ಗೆ ಉಲ್ಲೇಖಿಸಿ, ‘ಅದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಸಂವಿಧಾನದ ಮೇಲಿನ ನಡೆಸಿದ್ದ ದಾಳಿ’ ಎಂಬ ನಿರ್ಣಯ ಓದಿದ್ದರು. ಇದು ಕಾಂಗ್ರೆಸ್ ಸದಸ್ಯರಿಂದ ತೀವ್ರ ಪ್ರತಿಭಟನೆಗೆ ಕಾರಣವಾಗಿತ್ತು.