ಸುಳ್ಳು ಆರೋಪ: ಯುಪಿ ಕೋರ್ಟ್ಗೆ ರಾಹುಲ್ ಗಾಂಧಿ ಹೇಳಿಕೆ
-2018ರ ಕರ್ನಾಟಕ ಚುನಾವಣೆ ವೇಳೆ ದಾಖಲಾಗಿದ್ದ ಪ್ರಕರಣಸುಲ್ತಾನ್ಪುರ: 2018ರ ಕರ್ನಾಟಕ ವಿಧಾನಸಭಾ ಚುನಾವಣೆಯ ವೇಳೆ ಕೋಲಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ನೀಡಿದ ಹೇಳಿಕೆ ಸಂಬಂಧ ದಾಖಲಾದ ಪ್ರಕರಣ ಸಂಬಂಧ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಶುಕ್ರವಾರ ಉತ್ತರಪ್ರದೇಶದ ಸುಲ್ತಾನ್ಪುರದ ಜನಪ್ರತಿನಿಧಿ ಕೋರ್ಟ್ಗೆ ಹಾಜರಾಗಿ ಹೇಳಿಕೆ ದಾಖಲಿಸಿದರು.
ರಾಹುಲ್, ಅಮಿತ್ ಶಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಬಿಜೆಪಿ ನಾಯಕ ವಿಜಯ್ ಮಿಶ್ರಾ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಸಂಬಂಧ 2024ರ ಫೆಬ್ರವರಿಯಲ್ಲಿ ರಾಹುಲ್ಗೆ ಜಾಮೀನು ಮಂಜೂರು ಮಾಡಲಾಗಿತ್ತು.ಶುಕ್ರವಾರ ವಿಶೇಷ ನ್ಯಾಯಾಧೀಶ ಶುಭಂ ವರ್ಮಾ ಎದುರು ಹೇಳಿಕೆ ದಾಖಲಿಸಿದ ರಾಹುಲ್, ‘ನನ್ನ ವಿರುದ್ಧದ ಆರೋಪಗಳು ರಾಜಕೀಯ ದುರುದ್ದೇಶದಿಂದ ಕೂಡಿವೆ. ನನ್ನ ಮತ್ತು ನಮ್ಮ ಪಕ್ಷದ ಹೆಸರನ್ನು ಹಾಳು ಮಾಡುವ ಉದ್ದೇಶದಿಂದ ಈ ರೀತಿ ಆರೋಪ ಮಾಡಲಾಗಿದೆ. ನಾನು ಯಾರ ವಿರುದ್ಧವೂ ಅವಹೇಳನಕಾರಿ ಪದಗಳನ್ನು ಬಳಸಿಲ್ಲ. ನನ್ನ ಹೇಳಿಕೆಯನ್ನು ತಿರುಚಿ ಸುಳ್ಳು ದೂರು ದಾಖಲಿಸಲಾಗಿದೆ’ ಎಂದಿದ್ದಾರೆ.
ವಿಚಾರಣೆಗೂ ಮುನ್ನ, ಕೆಲವು ಸ್ಥಳೀಯ ಕಾಂಗ್ರೆಸ್ ನಾಯಕರು ಸುಲ್ತಾನ್ಪುರದಲ್ಲಿ ‘ಸತ್ಯಮೇವ ಜಯತೇ’ ಪೋಸ್ಟರ್ ಅಂಟಿಸಿ ಗಮನ ಸೆಳೆದರು.