ದಿಲ್ಲೀಲಿ ಕೇಜ್ರಿಗೆ ದೀದೀ, ಉದ್ಧವ್‌ ಸೇನೆ ಬೆಂಬಲ: ಇಂಡಿಯಾ ಕೂಟದ ಭಾಗವಾದ ಆಪ್‌ ಹಾಗೂ ಕಾಂಗ್ರೆಸ್‌ ಪ್ರತಿಸ್ಪರ್ಧಿ

| Published : Jan 09 2025, 01:45 AM IST / Updated: Jan 09 2025, 05:24 AM IST

ದಿಲ್ಲೀಲಿ ಕೇಜ್ರಿಗೆ ದೀದೀ, ಉದ್ಧವ್‌ ಸೇನೆ ಬೆಂಬಲ: ಇಂಡಿಯಾ ಕೂಟದ ಭಾಗವಾದ ಆಪ್‌ ಹಾಗೂ ಕಾಂಗ್ರೆಸ್‌ ಪ್ರತಿಸ್ಪರ್ಧಿ
Share this Article
  • FB
  • TW
  • Linkdin
  • Email

ಸಾರಾಂಶ

ಇಂಡಿಯಾ ಕೂಟದ ಭಾಗವಾದ ಆಪ್‌ ಹಾಗೂ ಕಾಂಗ್ರೆಸ್‌ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಪ್ರತಿಸ್ಪರ್ಧಿಗಳಾಗಿದ್ದರೆ, ಕೂಟದ ಇತರೆ ಪಕ್ಷಗಳು ಒಂದೊಂದಾಗಿ ಆಪ್‌ ಜತೆ ಕೈಜೋಡಿಸತೊಡಗಿವೆ.

ನವದೆಹಲಿ: ಇಂಡಿಯಾ ಕೂಟದ ಭಾಗವಾದ ಆಪ್‌ ಹಾಗೂ ಕಾಂಗ್ರೆಸ್‌ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಪ್ರತಿಸ್ಪರ್ಧಿಗಳಾಗಿದ್ದರೆ, ಕೂಟದ ಇತರೆ ಪಕ್ಷಗಳು ಒಂದೊಂದಾಗಿ ಆಪ್‌ ಜತೆ ಕೈಜೋಡಿಸತೊಡಗಿವೆ. ಇದೀಗ ಟಿಎಂಸಿ ನಾಯಕಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆಪ್‌ಗೆ ತಮ್ಮ ಬೆಂಬಲ ಘೋಷಿಸಿದ್ದಾರೆ. ಅತ್ತ ಉದ್ಧವ್‌ ಠಾಕ್ರೆ ಅವರ ಶಿವಸೇನೆ ಕೇಜ್ರಿವಾಲ್‌ ಪರ ಪ್ರಚಾರ ಮಾಡಲು ನಿರ್ಧರಿಸಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಆಪ್‌ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌, ‘ದೆಹಲಿ ಚುನಾವಣೆಯಲ್ಲಿ ಆಪ್‌ ಪಕ್ಷವನ್ನು ಬೆಂಬಲಿಸಿದ್ದಕ್ಕೆ ಮಮತಾ ದೀದೀಗೆ ಧನ್ಯವಾದ. ನೀವು ಎಂದೆಂದೂ ನಮಗೆ ಬೆಂಬಲವಾಗಿದ್ದು, ಒಳ್ಳೆಯ ಹಾಗೂ ಕೆಟ್ಟ ಸಮಯದಲ್ಲಿ ಆಶೀರ್ವದಿಸಿದ್ದೀರಿ’ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ಮುಂಚೆ ಸಮಾಜವಾದಿ ಪಕ್ಷ ಆಪ್‌ಗೆ ಬೆಂಬಲ ಸೂಚಿಸಿತ್ತು.

ಇಂಡಿಯಾ ಕೂಟದ ನಾಯಕತ್ವವನ್ನು ಕಾಂಗ್ರೆಸ್‌ ತೊರೆಯಬೇಕು ಎಂಬ ಮಮತಾ ಕರೆಗೆ ಇತ್ತೀಚೆಗೆ ಆಪ್‌, ಎಸ್‌ಪಿ ಸೇರಿ ಹಲವು ಪಕ್ಷಗಳು ಬೆಂಬಲ ನೀಡಿದ್ದವು.

ಪ್ಯಾರಿ ದೀದಿ ಸ್ಕೀಂ ಬಳಿಕ ₹ 25 ಲಕ್ಷ ಆರೋಗ್ಯ ವಿಮೆ: ದಿಲ್ಲಿ ಕಾಂಗ್ರೆಸ್‌ ಭರವಸೆ

ನವದೆಹಲಿ: ದೆಹಲಿಯಲ್ಲಿ ವಿಧಾನಸಭೆ ಚುನಾವಣೆ ಪಕ್ಷ ಗೆದ್ದರೆ ಕರ್ನಾಟಕದ ‘ಗೃಹಲಕ್ಷ್ಮೀ’ ಮಾದರಿಯಲ್ಲಿಯೇ ಪ್ಯಾರಿ ದೀದಿ ಸ್ಕೀಂ ಘೋಷಿಸಿದ್ದ ಕಾಂಗ್ರೆಸ್‌, ಇದೀಗ ₹ 25 ಲಕ್ಷ ಉಚಿತ ಆರೋಗ್ಯ ವಿಮೆಯ ಭರವಸೆ ನೀಡಿದೆ. ಪಕ್ಷದ ಹಿರಿಯ ನಾಯಕ, ರಾಜಸ್ಥಾನ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ ಚುನಾವಣಾ ಪ್ರಚಾರದ ವೇಳೆ ಈ ಘೋಷಣೆ ಮಾಡಿದ್ದಾರೆ. ‘ದೆಹಲಿಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ 25 ಲಕ್ಷ ರು.ವರೆಗೆ ಉಚಿತ ಆರೋಗ್ಯ ವಿಮೆ ನೀಡುವ ‘ಜೀವನ ರಕ್ಷಾ ಯೋಜನೆ’ ಜಾರಿಗೆ ತರಲಾಗುತ್ತದೆ’ ಎಂದಿದ್ದಾರೆ. 70 ವಿಧಾನಸಭಾ ಕ್ಷೇತ್ರಗಳಿರುವ ದೆಹಲಿಯಲ್ಲಿ ಫೆ. 5ಕ್ಕೆ ಚುನಾವಣೆ ನಡೆಯಲಿದ್ದು, ಫೆ.8ಕ್ಕೆ ಫಲಿತಾಂಶ ಹೊರಬೀಳಲಿದೆ.

ನನ್ನ ಕೆನ್ನೆ ಪ್ರಸ್ತಾಪಿಸಿದ್ದ ಬಿಧೂರಿ ತಮ್ಮ ಕೆನ್ನೆ ಬಗ್ಗೆ ಮಾತನಾಡಿಲ್ಲ: ಪ್ರಿಯಾಂಕಾ

ನವದೆಹಲಿ: ‘ದೆಹಲಿ ಚುನಾವಣೆಯಲ್ಲಿ ಗೆದ್ದರೆ, ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಕೆನ್ನೆಯಂತೆ ರಸ್ತೆ ನಿರ್ಮಿಸುತ್ತೇನೆ’ ಎಂದು ಹೇಳಿದ್ದ ಬಿಜೆಪಿ ರಮೇಶ್‌ ಬಿಧೂರಿ ಹೇಳಿಕೆಗೆ ತಿರುಗೇಟು ನೀಡಿರುವ ಪ್ರಿಯಾಂಕಾ, ನನ್ನ ಕೆನ್ನೆ ಬಗ್ಗೆ ಮಾತನಾಡುವ ರಮೇಶ್‌ ತಮ್ಮ ಕೆನ್ನೆ ಬಗ್ಗೆ ಮಾತನಾಡುವುದಿಲ್ಲ’ ಎಂದು ಹೇಳಿದ್ದಾರೆ. ದೆಹಲಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಇಲ್ಲಿ ಪ್ರಮುಖ ವಿಷಯಗಳ ಕುರಿತು ಚರ್ಚೆ ಮಾಡುವ ಈ ರೀತಿಯ ಅಸಂಬದ್ಧ ಹೇಳಿಕೆ ಸರಿಯಲ್ಲ ಎಂದು ಕಾಂಗ್ರೆಸ್‌ ಸಂಸದೆ ಕಿಡಿಕಾರಿದ್ದಾರೆ.