ಸಾರಾಂಶ
ಗಾಲಿ ಕುರ್ಚಿ ಸಿಗದೆ ಮುಂಬೈ ವಿಮಾನ ನಿಲ್ದಾಣದಲ್ಲಿ ವೃದ್ಧ ಸಾವನ್ನಪ್ಪಿದ ಕಾರಣ ಏರ್ ಇಂಡಿಯಾ ಸಂಸ್ಥೆಗೆ ಡಿಜಿಸಿಎ 30 ಲಕ್ಷ ರು. ದಂಡ ವಿಧಿಸಿದೆ.
ನವದೆಹಲಿ: ಮುಂಬೈ ವಿಮಾನ ನಿಲ್ದಾಣದಲ್ಲಿ ವ್ಹೀಲ್ಚೇರ್ ಸೌಲಭ್ಯ ನೀಡದ ಕಾರಣ ವೃದ್ಧನೊಬ್ಬ ನಡೆದು ಬರುತ್ತಿರುವಾಗ ಕುಸಿದು ಬಿದ್ದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಏರ್ ಇಂಡಿಯಾ ಸಂಸ್ಥೆಗೆ ನಾಗರಿಕ ವಿಮಾನಯಾನ ನಿಯಂತ್ರಣಾ ಪ್ರಾಧಿಕಾರ (ಡಿಜಿಸಿಎ) 30 ಲಕ್ಷ ರು. ದಂಡ ವಿಧಿಸಿದೆ. ಫೆ.12ರಂದು ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಏರ್ ಇಂಡಿಯಾ ಸಂಸ್ಥೆಯು ಸಮರ್ಪಕ ಸ್ಪಷ್ಟೀಕರಣ ನೀಡದ ಕಾರಣ ದಂಡ ವಿಧಿಸಲಾಗಿದ್ದು, ಇನ್ನು ಮುಂದೆ ಎಲ್ಲ ಸಂಸ್ಥೆಗಳಿಗೂ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವ್ಹೀಲ್ಚೇರ್ಗಳನ್ನು ಲಭ್ಯವಿರುವಂತೆ ಅಗತ್ಯ ಕ್ರಮ ಕೈಗೊಳ್ಳಲು ನಿರ್ದೇಶಿಸಲಾಗಿದೆ ಎಂದು ಡಿಜಿಸಿಎ ತಿಳಿಸಿದೆ.