ಛತ್ತೀಸ್‌ಗಢದ ಬಿಜೆಪಿ ಹಾಗೂ ಕಾಂಗ್ರೆಸ್‌ನ ಟಿಕೆಟ್‌ ವಂಚಿತ ಅಭ್ಯರ್ಥಿಗಳು ಹಾಗೂ ಪಕ್ಷಾಂತರಿಗಳು ತಮ್ಮ ಪಕ್ಷಗಳಿಗೆ ರಾಜೀನಾಮೆ ನೀಡಿದ್ದು, ಎಲ್ಲರೂ ಒಟ್ಟಾಗಿ ‘ನೊಂದ ಆತ್ಮ ಪಕ್ಷ’ ಕಟ್ಟಿಕೊಂಡಿದ್ದಾರೆ. ಜೊತೆಗೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿ ತಮ್ಮ ಹಳೆದ ಪಕ್ಷಗಳಿಗೆ ಸೆಡ್ಡು ಹೊಡೆಯಲು ಸಜ್ಜಾಗಿದ್ದಾರೆ.

ರಾಯ್ಪುರ: ಛತ್ತೀಸ್‌ಗಢದ ಬಿಜೆಪಿ ಹಾಗೂ ಕಾಂಗ್ರೆಸ್‌ನ ಟಿಕೆಟ್‌ ವಂಚಿತ ಅಭ್ಯರ್ಥಿಗಳು ಹಾಗೂ ಪಕ್ಷಾಂತರಿಗಳು ತಮ್ಮ ಪಕ್ಷಗಳಿಗೆ ರಾಜೀನಾಮೆ ನೀಡಿದ್ದು, ಎಲ್ಲರೂ ಒಟ್ಟಾಗಿ ‘ನೊಂದ ಆತ್ಮ ಪಕ್ಷ’ ಕಟ್ಟಿಕೊಂಡಿದ್ದಾರೆ. ಜೊತೆಗೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿ ತಮ್ಮ ಹಳೆದ ಪಕ್ಷಗಳಿಗೆ ಸೆಡ್ಡು ಹೊಡೆಯಲು ಸಜ್ಜಾಗಿದ್ದಾರೆ.

‘ಪಕ್ಷಕ್ಕಾಗಿ ಎಷ್ಟೇ ಶ್ರಮಿಸಿದರೂ, ಹೊಸಬರಿಗೆ ಆದ್ಯತೆ ನೀಡುವ ಸಲುವಾಗಿ ತಮ್ಮನ್ನು ಕಡೆಗಣಿಸಲಾಗಿದೆ’ ಎಂದು ಆರೋಪಿಸಿರುವ ಇವರು, ಹಿರಿಯ ಸ್ಥಳೀಯ ರಾಜಕಾರಣಿ ಸುರೇಶ್‌ ಸಿಹೋರ್‌ ಅವರನ್ನು ‘ನೊಂದ ಆತ್ಮ ಪಕ್ಷ’ದ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ. ಈ ಪಕ್ಷವು, ಫೆ.11ರಂದು ನಡೆಯಲಿರುವ ಚುನಾವಣೆಗೆ ಬೆಮೆತರಾ ಜಿಲ್ಲೆಯ ದೇವ್ಕರ್‌ ನಗರ ಪಂಚಾಯಿತಿಯ ಎಲ್ಲಾ 15 ವಾರ್ಡ್‌ಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅದಕ್ಕಾಗಿ ಸಭೆಗಳನ್ನು ನಡೆಸುತ್ತಿದ್ದು, ಜನಬೆಂಬಲ ಗಳಿಸಲು ಅಭಿಯಾನವನ್ನೂ ಮಾಡುತ್ತಿದೆ. ಆದರೆ ಪಕ್ಷಕ್ಕಿನ್ನೂ ಅಧಿಕೃತ ಚಿಹ್ನೆ ಲಭಿಸಿಲ್ಲ.

ಕಾಂಗ್ರೆಸ್‌ನಿಂದ 2014- 2019 ಅವಧಿಯಲ್ಲಿ ಕಾರ್ಪೊರೇಟರ್‌ ಆಗಿದ್ದ, ಈಗ ನೊಂದ ಆತ್ಮ ಪಕ್ಷ ಸೇರಿರುವ ವಿಮಲೇಶ್‌ ದ್ವಿವೇದಿ ಮಾತನಾಡಿ, ‘ದೇವ್ಕರ್‌ ನಗರ ಪಂಚಾಯಿತಿಯ ಕಾರ್ಪೊರೇಟರ್‌ ಹಾಗೂ ಅಧ್ಯಕ್ಷ ಹುದ್ದೆಗೆ ಪಕ್ಷ ಸ್ಪರ್ಧಿಸುತ್ತಿದೆ. ನಾನು ವಾರ್ಡ್‌ 6ರಿಂದ ಕಣಕ್ಕಿಳಿದಿದ್ದೇನೆ. ಇದು ನಗರ ಪ್ರದೇಶದಲ್ಲಿ ಸಂಚಲನ ಸೃಷ್ಟಿಸಲಿದೆ’ ಎಂದರು.