ಸಾರಾಂಶ
ಸೆಂಗೋಲ್ ರಾಜದಂಡದೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ನೂತನ ಸಂಸತ್ ಭವನದ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡಲು ಆಗಮಿಸಿದರು.
ನವದೆಹಲಿ: ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಮಿಸುವ ಸಮಯದಲ್ಲಿ ಸೆಂಗೋಲ್ ಮೆರವಣಿಗೆ ಮಾಡುವ ಮೂಲಕ ಹೊಸ ಪದ್ಧತಿಗೆ ಬುಧವಾರ ನಾಂದಿ ಹಾಡಲಾಯಿತು.
ಹೊಸ ಸಂಸತ್ ಭವನದ ಗಜದ್ವಾರದ ಮೂಲಕ ರಾಷ್ಟ್ರಪತಿ ಅವರನ್ನು ಸ್ವಾಗತಿಸುವ ಸಮಯದಲ್ಲಿ ಸಂಸತ್ತಿನ ಹಿರಿಯ ಮಾರ್ಷಲ್ ರಾಜೀವ್ ಶರ್ಮಾ ಸಾಂಪ್ರದಾಯಿಕ ಉಡುಗೆಯೊಂದಿಗೆ ಸೆಂಗೋಲ್ ಹಿಡಿದು ಮುಂದೆ ಸಾಗಿದರು.
ಇವರ ಹಿಂಭಾಗದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರೊಂದಿಗೆ ರಾಷ್ಟ್ರಪತಿ ಮುರ್ಮು ಸದನಕ್ಕೆ ಆಗಮಿಸಿದರು.
ರಾಷ್ಟ್ರಪತಿ ಅವರ ಭಾಷಣ ಮುಗಿಯುವವರೆಗೂ ಸೆಂಗೋಲನ್ನು ಅವರ ಕುರ್ಚಿಯ ಮುಂಭಾಗದಲ್ಲಿ ಇಡಲಾಗಿತ್ತು. ಬಳಿಕ ಸೆಂಗೋಲ್ ಮೆರವಣಿಗೆಯೊಂದಿಗೆ ರಾಷ್ಟ್ರಪತಿ ಅವರನ್ನು ಬೀಳ್ಕೊಟ್ಟು, ಸೆಂಗೋಲನ್ನು ಸ್ಪೀಕರ್ ಪಕ್ಕದಲ್ಲಿನ ಸ್ಥಳದಲ್ಲಿ ಇಡಲಾಯಿತು.