ಸಾರಾಂಶ
ನವದೆಹಲಿ: ಹೆಚ್ಚುವರಿ ಸಾಲ ಪಡೆಯಲು ಅವಕಾಶ ನೀಡಬೇಕು ಎಂಬ ಕೇರಳ ಸರ್ಕಾರದ ಮನವಿಯನ್ನು ತಿರಸ್ಕರಿಸಿರುವ ಸುಪ್ರೀಂಕೋರ್ಟ್, ರಾಜ್ಯದ ಇಂದಿನ ಈ ಸ್ಥಿತಿಗೆ ಹಣಕಾಸು ನಿರ್ವಹಣೆಯಲ್ಲಿನ ಅಶಿಸ್ತೇ ಕಾರಣ ಎಂದು ಕಿಡಿಕಾರಿದೆ.
ಅಲ್ಲದೆ ಸಾಲ ಪಡೆಯಲು ಕೇಂದ್ರ ಸರ್ಕಾರ ಮಿತಿ ಹೇರಿದ್ದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ಸಾಂವಿಧಾನಕ ಪೀಠಕ್ಕೆ ವರ್ಗಾಯಿಸಿದೆ.ಮೂಲಭೂತವಾಗಿ ನಿಮ್ಮ ಆರ್ಥಿಕ ಅಶಿಸ್ತಿನಿಂದಾಗಿ ನೀವೇ ಈ ಸಮಸ್ಯೆ ಈ ಸೃಷ್ಟಿಸಿಕೊಂಡಿದ್ದೀರಿ ಎಂದಾದಲ್ಲಿ ಅದನ್ನು ಕೇಂದ್ರ ಸರ್ಕಾರದ ನಡೆಯಿಂದಾಗಿ ಉಂಟಾದ ಸರಿಪಡಿಸಲಾಗದ ಗಾಯ ಎಂದು ಪರಿಗಣಿಸಿ ನಿಮಗೆ ಮಧ್ಯಂತರ ಪರಿಹಾರ ನೀಡಲಾಗದು ಎಂದು ನ್ಯಾ. ಸೂರ್ಯಕಾಂತ್ ಮತ್ತು ನ್ಯಾ.ಕೆ.ವಿ.ವಿಶ್ವನಾಥನ್ ಅವರನ್ನು ಒಳಗೊಂಡ ಪೀಠ ಕೇರಳ ಸರ್ಕಾರದ ವಾದದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತು.
ಜೊತೆಗೆ ಇಂಥ ಪ್ರಕರಣಗಳಲ್ಲಿ ನಾವು ಮಧ್ಯಂತರ ನಡೆ ನೀಡುತ್ತಾ ಹೋದಲ್ಲಿ ಅದು ರಾಜ್ಯ ಸರ್ಕಾರಗಳು ಹೊಸ ಆರ್ಥಿಕ ನೀತಿ (ಯೋಜನೆ) ಘೋಷಿಸಲು ಮತ್ತು ಹೊಸ ಹೊಸ ಸಾಲಕ್ಕೆ ಬೇಡಿಕೆ ಸಲ್ಲಿಸಲು ಅವಕಾಶ ಕಲ್ಪಿಸುವ ಸಂಪ್ರದಾಯಕ್ಕೆ ನಾಂದಿ ಹಾಡಿದಂತೆ ನಾಗುತ್ತದೆ ಎಂದು ಹೇಳಿತು.ಅಲ್ಲದೆ ನಮ್ಮ ಸೂಚನೆ ಅನ್ವಯ ಕೇಂದ್ರ ಸರ್ಕಾರ ಈಗಾಗಲೇ ಹೆಚ್ಚುವರಿಯಾಗಿ 13608 ಕೋಟಿ ರು. ಸಾಲ ಪಡೆಯಲು ಅನುಮತಿ ನೀಡಿದೆ. ಹೀಗಾಗಿ ನಿಮಗೆ ಸಾಕಷ್ಟು ನೆರವು ಸಿಕ್ಕಿದೆ. ಹೀಗಾಗಿ ಕೇಂದ್ರದ ನಿರ್ಧಾರಕ್ಕೆ ತಡೆ ನೀಡಲಾಗದು ಎಂದು ಹೇಳಿತು.