ಸಾರಾಂಶ
ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ವಶಕ್ಕೆ ಪಡೆದ ತನಿಖಾ ಸಂಸ್ಥೆ ಅವರನ್ನು ವಿಚಾರಣೆ ಮಾಡುತ್ತಿದೆ.
ನವದೆಹಲಿ: ನಿಷೇಧಿತ ಪಿಎಫ್ಐ ಸಂಘಟನೆಯಿಂದ ಹಣ ಪಡೆದು ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದ್ದ ಕರ್ನಾಟಕದ ಪುತ್ತೂರು ಮೂಲದ ಅಬ್ದುಲ್ ಖಾದರ್ ಸೇರಿದಂತೆ ಮೂವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಶನಿವಾರ ಬಂಧಿಸಿದೆ. ಬಂಧಿತ ಮೂವರು ಈಗಾಗಲೇ ಎನ್ಐಎ ವಶದಲ್ಲಿದ್ದು, ಇದೀಗ ಅವರನ್ನು ಇ.ಡಿ. ತನ್ನ ವಶಕ್ಕೆ ಪಡೆದಿದೆ.
ಬಂಧಿತ ಅಬ್ದುಲ್ ಖಾದರ್ ಪುತ್ತೂರು, ಅನ್ಷದ್ ಬದ್ರುದ್ದೀನ್ ಹಾಗೂ ಫಿರೋಜ್.ಕೆ ಪಿಎಫ್ಐ ಕಾರ್ಯಕರ್ತರಾಗಿದ್ದರು. ಇವರ ಪಿಎಫ್ಐನಿಂದ ಹಣ ಪಡೆದು, ಭಾರತದಲ್ಲಿನ ಯುವಕರನ್ನು ಭಯೋತ್ಪಾದನಾ ಚಟುವಟಿಕೆಗಳಿಗೆ ಸೆಳೆಯುತ್ತಿದ್ದರು. ವಿದೇಶಗಳಿಂದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಂಡು ಅದರ ಮೂಲಕ ಸ್ಥಳೀಯರಿಗೆ ತರಬೇತಿ ನೀಡುತ್ತಿದ್ದರು ಎಂದು ಇ.ಡಿ. ಆರೋಪಿಸಿದೆ.ಇದರಲ್ಲಿ ಅಬ್ದುಲ್ ಖಾದರ್ ಪುತ್ತೂರು ಎಂಬುವನು ಪಿಎಫ್ಐನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ. ಈತ ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ, ಹಿಂದುಗಳ ಮೇಲೆ ದಾಳಿ ನಡೆಸುವ ಕುರಿತು ತರಬೇತಿ ನೀಡುತ್ತಿದ್ದ. ಜೊತೆಗೆ ಮಸೀದಿ ಮತ್ತು ಮನೆಗಳಲ್ಲಿ ಆಯುಧಗಳನ್ನು ಸಂಗ್ರಹ ಮಾಡುವಂತೆ ಸೂಚನೆಗಳನ್ನು ನೀಡಿದ್ದ.