ಸಾರಾಂಶ
ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ಬಂದ ಬಳಿಕ ಭಾರತೀಯ ರೈಲ್ವೆ ರಿಯಾಯ್ತಿ ದರದಲ್ಲಿ ನೀಡುತ್ತಿದ್ದ ಟಿಕೆಟ್ಗಳನ್ನು ನಿಲ್ಲಿಸಿತ್ತು. ಬಳಿಕ ಅದನ್ನು ಆರಂಭ ಮಾಡಿಲ್ಲ. ಈ ರಿಯಾಯ್ತಿ ದರವನ್ನು ಇನ್ನು ಮಾಡುವ ಸಾಧ್ಯತೆ ಇಲ್ಲ ಎಂದು ತಾರ್ಕಿಕವಾಗಿ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಅಹಮದಾಬಾದ್: ಕೋವಿಡ್ ಪೂರ್ವದಲ್ಲಿ ಭಾರತೀಯ ರೈಲ್ವೆಯಲ್ಲಿ ಹಿರಿಯ ನಾಗರಿಕರು ಮತ್ತು ಪತ್ರಕರ್ತರಿಗೆ ನೀಡಲಾಗಿದ್ದ ಟಿಕೆಟ್ ರಿಯಾಯಿತಿಯನ್ನು ಮತ್ತೆ ಆರಂಭಿಸುವ ಸಾಧ್ಯತೆಯನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಪರೋಕ್ಷವಾಗಿ ತಳ್ಳಿಹಾಕಿದ್ದಾರೆ.
ಇಲ್ಲಿ ಬುಲೆಟ್ ರೈಲು ಕಾರಿಡಾರ್ ಕಾಮಗಾರಿ ಪರಿಶೀಲನೆಗೆ ಆಗಮಿಸಿದ್ದ ವೇಳೆ, ‘ರಿಯಾಯಿತಿಯನ್ನು ಮತ್ತೆ ಯಾವಾಗ ಪ್ರಾರಂಭಿಸಲಾಗುತ್ತದೆ?’ ಎಂಬ ಪ್ರಶ್ನೆಗೆ ಸ್ಪಷ್ಟವಾಗಿ ಉತ್ತರ ನೀಡದ ವೈಷ್ಣವ್ ‘ನಾವು ಈಗಾಗಲೇ ರೈಲ್ವೆಯಲ್ಲಿ ಎಲ್ಲ ಪ್ರಯಾಣಿಕರಿಗೆ ಶೇ.55ರಷ್ಟು ರಿಯಾಯಿತಿಯನ್ನು ನೀಡುತ್ತಿದ್ದೇವೆ’ ಎಂದು ಒಂದೇ ವಾಕ್ಯದಲ್ಲಿ ಉತ್ತರಿಸಿದರು. ಅರ್ಥಾತ್ ಮಾರುಕಟ್ಟೆ ದರಕ್ಕಿಂತ ಎಲ್ಲ ಟಿಕೆಟ್ ದರ ಕಮ್ಮಿ ಇದೆ ಎನ್ನುವ ಸೂಚನೆ ನೀಡುದರು.ಕೋವಿಡ್ ಹಾವಳಿ ಶುರುವಾಗುವ ಮುನ್ನ ರೈಲ್ವೆಯು ಹಿರಿಯ ನಾಗರಿಕರು ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಪತ್ರಕರ್ತರಿಗೆ ರೈಲು ಪ್ರಯಾಣ ದರದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಿತ್ತು. 2020ರಲ್ಲಿ ಕೋವಿಡ್ ಲಾಕ್ಡೌನ್ ಅವಧಿಯಲ್ಲಿ ಅದನ್ನು ಹಿಂತೆಗೆದುಕೊಂಡಿತ್ತು.