ಮೋದಿ 3ನೇ ಸಲ ಪ್ರಧಾನಿ ಆಗೋದು ಕಷ್ಟ: ಖರ್ಗೆ

| Published : May 12 2024, 01:20 AM IST / Updated: May 12 2024, 06:53 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿಯ ಈ ಬಾರಿ ದೇಶದಲ್ಲಿ ಮತ್ತೆ ಸರ್ಕಾರವನ್ನು ರಚಿಸುವುದು ಬಹಳ ಕಷ್ಟವೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಭವಿಷ್ಯ ನುಡಿದಿದ್ದಾರೆ.

ಪಟನಾ/ಸಮಷ್ಟಿಪುರ: ಪ್ರಧಾನಿ ನರೇಂದ್ರ ಮೋದಿಯ ಈ ಬಾರಿ ದೇಶದಲ್ಲಿ ಮತ್ತೆ ಸರ್ಕಾರವನ್ನು ರಚಿಸುವುದು ಬಹಳ ಕಷ್ಟವೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಭವಿಷ್ಯ ನುಡಿದಿದ್ದಾರೆ. ಇದೇ ವೇಳೆ ,‘ಕಾಂಗ್ರೆಸ್‌ಗೆ ಅದಾನಿ , ಅಂಬಾನಿಯಿಂದ ಟ್ರಕ್‌ಗಳಲ್ಲಿ ಹಣ ಸಂದಾಯ’ ಎನ್ನುವ ಮೋದಿ ಮಾತಿಗೂ ಖರ್ಗೆ ಪ್ರತಿಕ್ರಿಯಿಸಿದ್ದು, ‘ಪ್ರಧಾನಿ ಈ ಬಗ್ಗೆ ಯಾಕೆ ಉನ್ನತ ಮಟ್ಟದ ತನಿಖೆ ನಡೆಸಿಲ್ಲ’ ಎಂದು ಪ್ರಶ್ನಿಸಿದ್ದಾರೆ.

ಪಟನಾದಲ್ಲಿ ಮಾತನಾಡಿದ ಖರ್ಗೆ , ‘ಮೋದಿಯವರು ತೆಲಂಗಾಣದಲ್ಲಿದ್ದಾಗ ನಾನು ಪಕ್ಕದ ಆಂಧ್ರ ಪ್ರದೇಶದಲ್ಲಿದ್ದೆ. ಮೋದಿಯವರ ಭಾಷಣದಲ್ಲಿ ಈ ಹಿಂದೆ ಇರುತ್ತಿದ್ದ ಅಭಿಮಾನ ಮತ್ತು ಗರ್ವ ಕಾಣೆಯಾಗಿದೆ. ಮೂರು ಹಂತದ ಎಲೆಕ್ಷನ್‌ ಬಳಿಕ ಮೋದಿ ಮೂರನೇ ಬಾರಿಗೆ ಅಧಿಕಾರಕ್ಕೇರುವುದು ಕಷ್ಟ ಎಂದು ನಾನು ಖಚಿತವಾಗಿ ಹೇಳಬಲ್ಲೆ. ಅದಕ್ಕೇ ಅವರು ಈಗ ಶರದ್ ಪವಾರ್ ಹಾಗೂ ಉದ್ಧವ್‌ ಠಾಕ್ರೆ ಅವರಿಗೆ ಎನ್‌ಡಿಎ ಸೇರಿಕೊಳ್ಳಿ ಎನ್ನುತ್ತಿದ್ದಾರೆ’ ಎಂದರು.

ಅಲ್ಲದೆ, ‘ಮೋದಿಯವರಿಗೆ ತಮ್ಮ ಸರ್ಕಾರದ 10 ವರ್ಷಗಳ ಸಾಧನೆ ಬಗ್ಗೆ ಮಾತನಾಡಿ ಎಂದರೆ, ಅವರು ಹಿಂದೂ- ಮುಸ್ಲಿಂ ಪ್ರತ್ಯೇಕಿಸುವ ಹೇಳಿಕೆ ನೀಡುತ್ತಿದ್ದಾರೆ’ ಎಂದು ಟೀಕಿಸಿದರು.ಬಿಹಾರದ ಸಮಷ್ಟಿಪುರದಲ್ಲಿ ಸಭೆಯಲ್ಲಿ ಮಾತನಾಡಿದ ಖರ್ಗೆ. ‘ಕಾಂಗ್ರೆಸ್ ಪಕ್ಷಕ್ಕೆ ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿಯಿಂದ ಅಪಾರ ಪ್ರಮಾಣದ ಹಣ ಸಂದಾಯ ಆಗುತ್ತದೆ ಎಂದಿರುವ ಮೋದಿ. ತಮ್ಮದೇ ಸರ್ಕಾರವಿದ್ದರೂ ಯಾಕೆ ಅದರ ಬಗ್ಗೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ, ತನಿಖೆ ನಡೆಸಿಲ್ಲ’ ಎಂದು ಪ್ರಶ್ನಿಸಿದರು.