ಅಮೇಠಿ ಸೋಲು ಹಿನ್ನೆಲೆ ದೆಹಲಿ ಸರ್ಕಾರಿ ಬಂಗಲೆ ತೊರೆದ ಸ್ಮೃತಿ ಇರಾನಿ

| Published : Jul 12 2024, 01:39 AM IST / Updated: Jul 12 2024, 05:25 AM IST

ಸಾರಾಂಶ

ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿ ದೆಹಲಿಯ ಲ್ಯೂಟೆನ್ಸ್‌ 28 ತುಘಲಕ್ ಕ್ರೆಸೆಂಟ್ ರಸ್ತೆಯಲ್ಲಿರುವ ತಮ್ಮ ಸರ್ಕಾರಿ ಬಂಗಲೆ ಖಾಲಿ ಮಾಡಿದ್ದಾರೆ.

ನವದೆಹಲಿ: ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿ ದೆಹಲಿಯ ಲ್ಯೂಟೆನ್ಸ್‌ 28 ತುಘಲಕ್ ಕ್ರೆಸೆಂಟ್ ರಸ್ತೆಯಲ್ಲಿರುವ ತಮ್ಮ ಸರ್ಕಾರಿ ಬಂಗಲೆ ಖಾಲಿ ಮಾಡಿದ್ದಾರೆ. ನಿಯಮಗಳ ಪ್ರಕಾರ ಹೊಸ ಸರ್ಕಾರ ರಚನೆಯಾದ ತಿಂಗಳಲ್ಲಿ ಮಾಜಿ ಸಚಿವರು, ಮಾಜಿ ಸಂಸದರು ತಮಗೆ ನೀಡಿದ್ದ ಸರ್ಕಾರಿ ಬಂಗಲೆ ತೊರೆಯಬೇಕು.

 ಅದರಂತೆ ಲೋಕಸಭೆ ಚುನಾವಣೆಯಲ್ಲಿ ಅಮೇಠಿ ಕ್ಷೇತ್ರದಿಂದ ಕಾಂಗ್ರೆಸ್‌ನ ಕಿಶೋರಿ ಲಾಲ್ ಶರ್ಮಾ ವಿರುದ್ಧ 1.5 ಲಕ್ಷ ಮತಗಳ ಅಂತರದಿಂದ ಸೋತಿದ್ದ ಸ್ಮೃತಿ ,ಬಂಗಲೆ ತೊರೆದಿದ್ದಾರೆ. 2019ರಲ್ಲಿ ರಾಹುಲ್‌ ಗಾಂಧಿಯನ್ನು ಸೋಲಿಸಿ ಅಮೇಠಿ ಕ್ಷೇತ್ರದಲ್ಲಿ ಗೆಲುವು ಕಂಡಿದ್ದ ಸ್ಮೃತಿ ಇರಾನಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾಗಿದ್ದರು.

ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ: ಬೈಡೆನ್‌ಗಿಂತ ಕಮಲಾ ಪರ ಭಾರತೀಯರ ಹೆಚ್ಚು ಒಲವು

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರಿಗೆ ಅಮೆರಿಕದಲ್ಲಿ ನೆಲೆಸಿರುವ ಭಾರತ ಮೂಲದ ಮತದಾರರ ಬೆಂಬಲವು ಶೇ.19ರಷ್ಟು ಕುಸಿದಿದೆ ಎಂದು ಸಮೀಕ್ಷೆಗಳು ತಿಳಿಸಿವೆ. 2020ರ ಚುನಾವಣೆ ಹಾಗೂ ಈ ಬಾರಿಯ ಚುನಾವಣೆಗೆ ಹೋಲಿಸಿದರೆ ಬೈಡೆನ್‌ಗೆ ಬೆಂಬಲ ಸೂಚಿಸಿದ ಭಾರತ ಮೂಲದ ಮತದಾರರ ಸಂಖ್ಯೆ ಶೇ.19ರಷ್ಟು ಇಳಿದಿದೆ. ಕಳೆದ ಚುನಾವಣೆಯಲ್ಲಿ ಶೇ.65ರಷ್ಟು ಮಂದಿ ಬೈಡೆನ್‌ ಪರ ಮತ ಚಲಾಯಿಸಿದ್ದರು. ಆದರೆ ಈ ಬಾರಿಯ ಚುನಾವಣೆಯಲ್ಲಿ ಶೇ.46 ರಷ್ಟು ಮತದಾರರು ಮಾತ್ರ ಮತ ಚಲಾಯಿಸುವುದಾಗಿ ತಿಳಿಸಿದ್ದಾರೆ. ಆದರೆ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ಶೇ.54 ರಷ್ಟು ಮತದಾರರು ಮತ ಚಲಾಯಿಸುವುದಾಗಿ ತಿಳಿಸಿದ್ದಾರೆ.