ಮಾರುಕಟ್ಟೆಗೆ ಬಂದಿದೆ ಸಿಮೆಂಟ್‌ನಿಂದ ತಯಾರಿಸಿದ ಬೆಳ್ಳುಳ್ಳಿ, ವಿಡಿಯೋ ಬೆನ್ನಲ್ಲೇ ಹೆಚ್ಚಿದ ಆತಂಕ!

| Published : Aug 19 2024, 08:00 AM IST

Fake garlic

ಸಾರಾಂಶ

ಮಹಾರಾಷ್ಟ್ರದಲ್ಲಿ ಪತ್ತೆಯಾದ ನಕಲಿ ಬೆಳ್ಳುಳ್ಳಿ ಸಂಪೂರ್ಣವಾಗಿ ಸಿಮೆಂಟ್‌ನಿಂದ ತಯಾರಿಸಲಾಗಿದ್ದು, ಈ ಬೆಳ್ಳುಳ್ಳಿ ಗೋಣಿ ಚೀಲಗಳಲ್ಲಿ ಬೆರೆಸಿ ಮಾರಾಟ ಮಾಡಲಾಗುತ್ತಿದೆ ಎಂಬ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.

ಮುಂಬೈ ನಕಲಿ ಬೆಳ್ಳುಳ್ಳಿ ವಿಡಿಯೋ ಒಂದು ಭಾರಿ ಆತಂಕಕ್ಕೆ ಕಾರಣವಾಗಿದೆ. ಮಹಾರಾಷ್ಟ್ರದ ಅಕೋಲ ಜಿಲ್ಲೆಯಲ್ಲಿ ಪತ್ತೆಯಾದ ಈ ನಕಲಿ ಬೆಳ್ಳುಳ್ಳಿ ಸಂಪೂರ್ಣವಾಗಿ ಸಿಮೆಂಟ್‌ನಿಂದ ತಯಾರಿಸಲಾಗಿದೆ. ಆದರೆ ನೋಡುವಾಗ ಒಂದಿಷ್ಟು ಅನುಮಾನ ಬರುವುದಿಲ್ಲ. ಆದರೆ ಈ ಬೆಳ್ಳುಳ್ಳಿ ಹೊಸ ಸಂಚಲನ ಸೃಷ್ಟಿಸಿದೆ. ವ್ಯಕ್ತಿಯೊಬ್ಬರು ಈ ನಕಲಿ ಬೆಳ್ಳುಳ್ಳಿಯ ಸಿಪ್ಪೆ ಸುಲಿಯಲು ಪ್ರಯತ್ನಿಸಿದ್ದಾರೆ. ಬಳಿಕ ನೆಲಕ್ಕೆ ಗುದ್ದಿದಾದ ಸಿಮೆಂಟ್ ಒಳಗಿಂದ ಪುಡಿಯಾಗಿ ಬಿದ್ದಿದೆ.

ಯಾವುದೇ ಮೂಲೆಯಿಂದ ನೋಡಿದರೂ, ಹತ್ತಿರದಿಂದ ದಿಟ್ಟಿಸಿ ನೋಡಿದರೂ ಇದು ನಕಲಿ ಅನ್ನೋದು ಪತ್ತೆ ಹಚ್ಚಲು ಸಾಧ್ಯವಿಲ್ಲ.ಆದರೆ ಕೈಯಲ್ಲಿ ಹಿಡಿದಾಗ ನಕಲಿ ಬೆಳ್ಳುಳ್ಳಿ ತೂಕ ಹೆಚ್ಚು. ಕಾರಣ ಇದು ಸಂಪೂರ್ಣ ಸಿಮೆಂಟ್. ಪ್ರಮುಖವಾಗಿ ಭಾರಿ ಪ್ರಮಾಣದಲ್ಲಿ ಬೆಳ್ಳುಳ್ಳಿ ಮಾರಾಟದಲ್ಲಿ ಈ ನಕಲಿ ಬೆಳ್ಳುಳ್ಳಿ ಬಳಕೆ ಮಾಡಲಾಗುತ್ತಿದೆ ಅನ್ನೋ ಮಾತುಗು ಕೇಳಿಬಂದಿದೆ.

ಬೆಳ್ಳುಳ್ಳಿ ಬೆಲೆ ಗಗನಕ್ಕೇರಿದೆ. ಹೀಗಾಗಿ ಕೆಲ ಮಧ್ಯಮವರ್ತಿಗಳು ಸೇರಿದಂತೆ ಕೆಲವರು ದೊಡ್ಡ ಪ್ಯಾಕೆಟ್ ಬೆಳ್ಳುಳ್ಳಿ ಬ್ಯಾಗ್ ಒಳಗಡೆ ಈ ರೀತಿಯ ಸಿಮೆಂಟ್ ಬೆಳ್ಳುಳ್ಳಿ ಹಾಕುತ್ತಿದ್ದಾರೆ. ಇದರಿಂದ ತೂಕ ಹೆಚ್ಚಾಗಲಿದೆ. ಈ ಮೂಲಕ ಖರೀದಿದಾರರಿಗೆ ಮೋಸ ಮಾಡಲಾಗುತ್ತಿದೆ. 50 ಕೆಜಿ, 100 ಕೆಜಿ ಬೆಳ್ಳುಳ್ಳಿ ಗೋಣಿ ಚೀಲದಲ್ಲಿ 10 ರಿಂದ 20 ಕೆಜಿಯಷ್ಟು ಈ ಸಿಮೆಂಟ್ ಬೆಳ್ಳುಳ್ಳಿ ಸೇರಿಸಲಾಗುತ್ತದೆ. ಮೇಲ್ನೋಟಕ್ಕೆ ಇದು ಗೊತ್ತಾಗುವುದಿಲ್ಲ. ಬ್ಯಾಗ್ ಬಿಡಿಸಿ ಬೆಳ್ಳುಳ್ಳಿ ಪರಿಶೀಲಿಸುವ ಗೋಜಿಗೆ ಯಾರು ಹೋಗುವುದಿಲ್ಲ. ಈ ರೀತಿ ಭಾರಿ ಮೋಸ ಮಾಡಲಾಗುತ್ತಿದೆ ಅನ್ನೋ ಮಾತುಗಳು ಕೇಳಿಬಂದಿದೆ.

ದೇಶಾದ್ಯಂತ ಬೆಳ್ಳುಳ್ಳಿ ಬೆಲೆಗಳು ದುಬಾರಿಯಾಗಿದೆ. ಇದರ ನಡುವೆ ಈ ರೀತಿ ಮೋಸ ಮಾಡಲಾಗುತ್ತಿದೆ. ಈ ವಿಡಿಯೋ ಬಳಿಕ ಇದೀಗ ಎಲ್ಲಾ ಆಹಾರ ಪದಾರ್ಥಗಳ ಮೇಲೆ ಅನುಮಾನ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಆಹಾರ ವಸ್ತುಗಳು ಅಸಲಿಯೋ, ನಕಲಿಯೋ ಅನ್ನೋದು ಇದೀಗ ಗ್ರಾಹಕರ ಆತಂಕ ಹಾಗೂ ಗೊಂದಲಕ್ಕೆ ಕಾರಣವಾಗಿದೆ.

ಪ್ಲಾಸ್ಟಿಕ್ ಅಕ್ಕಿ, ಇತರ ಮಾರಕ ಪದಾರ್ಥಗಳ ಮೂಲಕ ತಯಾರಿಸಿದ ಮೊಟ್ಟೆ, ತರಕಾರಿ, ಮೀನು, ಮಾಂಸ ಸೇರಿದಂತೆ ಮಾಂಸಾಹಾರಿ ಪದಾರ್ಥಗಳ ಮೇಲೆ ರಾಸಾಯನಿಕ ಸಿಂಪಡಣೆ, ಅಸಲಿಯಂತೆ ಕಾಣುವ ನಕಲಿ ಆಹಾರ ವಸ್ತುಗಳ ಕುರಿತು ಹಲವು ದಾಳಿಗಳು ನಡೆದಿದೆ. ಆದರೆ ನಕಲಿ ವಸ್ತುಗಳ ಹಾವಳಿಗೆ ಬ್ರೇಕ್ ಬಿದ್ದಿಲ್ಲ. ಸದ್ಯ ಆರೋಗ್ಯದ ಕಾಳಜಿ ಹೆಚ್ಚಾಗುತ್ತಿದ್ದಂತೆ ನಕಲಿ ವಸ್ತುಗಳ ಹಾವಳಿ ಕೂಡ ಹೆಚ್ಚಾಗಿದೆ. ರಾಸಾಯನಿಕ ಪದಾರ್ಥಗಳು, ಅತೀಯಾದ ಪ್ಲಾಸ್ಟಿಕ್ ಅವಲಂಬನೆ, ನಕಲಿ ವಸ್ತುಗಳಿಂದ ಮನುಷ್ಯನ ಆರೋಗ್ಯ ತೀವ್ರವಾಗಿ ಹದಗೆಡುತ್ತಿದೆ ಅನ್ನೋದು ತಜ್ಞ ವೈದ್ಯರ ಸಂಶೋಧನಾ ವರದಿ ಹೇಳುತ್ತಿದೆ.