ತಮಿಳುನಾಡಲ್ಲಿ ಮಳೆ ಇಳಿಕೆ, ರಕ್ಷಣಾ ಕಾರ್ಯ ಚುರುಕು

| Published : Oct 17 2024, 12:05 AM IST

ಸಾರಾಂಶ

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ತಮಿಳುನಾಡು, ದಕ್ಷಿಣ ಆಂಧ್ರಪ್ರದೇಶದಲ್ಲಿ ಮಳೆ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.

ಚೆನ್ನೈ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ತಮಿಳುನಾಡು, ದಕ್ಷಿಣ ಆಂಧ್ರಪ್ರದೇಶದಲ್ಲಿ ಮಳೆ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಆದರೆ ಬುಧವಾರ ಮಧ್ಯಾಹ್ನದಿಂದ ಮಳೆ ಪ್ರಮಾಣ ಕೊಂಚ ಕಡಿಮೆಯಾಗಿದ್ದು, ರಕ್ಷಣಾ ಕಾರ್ಯಗಳು ಚುರುಕುಗೊಂಡಿದೆ. ಚೆನ್ನೈನಲ್ಲಿ ಮಳೆಯ ಪರಿಣಾಮವಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಸಾರಿಗೆ, ರೈಲು ಸಂಚಾರ ಮತ್ತು ಕೆಲ ವಿಮಾನ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ. ಜನರ ರಕ್ಷಣೆಗೆ ರಾಜ್ಯ ವಿಪತ್ತು ನಿರ್ವಹಣಾ ಪಡೆ, ಕರಾವಳಿ ಭದ್ರತಾ ಪಡೆಗಳು ಕೆಲಸ ಮಾಡುತ್ತಿವೆ. ಪರಿಸ್ಥಿತಿ ಅವಲೋಕನ ನಡೆಸಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅಮ್ಮಾ ಕ್ಯಾಂಟಿನ್‌ನಲ್ಲಿ ಉಚಿತ ಊಟ ನೀಡುವುದಾಗಿ ಎಂದು ಘೋಷಿಸಿದ್ದಾರೆ.

===

ಡ್ರೋನ್‌ ಮೂಲಕ ಪರಿಹಾರ ಸಾಮಗ್ರಿ ವಿತರಣೆ

ಚೆನ್ನೈನಲ್ಲಿ ನೀರು ನುಗ್ಗಿರುವ ಜನವಸತಿ ಪ್ರದೇಶಗಳಿಗೆ ಡ್ರೋನ್‌ಗಳನ್ನು ಬಳಸಿ ಪರಿಹಾರ ವಿತರಿಸುವ ಕಾರ್ಯ ನಡೆಯುತ್ತಿದೆ. ಇವುಗಳ ಮೂಲಕ ಆಹಾರ, ಕುಡಿಯುವ ನೀರು, ಔಷಧಗಳ ಪೂರೈಕೆ ಮಾಡಲಾಗುತ್ತಿದೆ. ಜೊತೆಗೆ ನಷ್ಟದ ಪ್ರಮಾಣವನ್ನು ಅಳೆಯಲು ಇವುಗಳ ಬಳಸಲಾಗುತ್ತಿದೆ. ಇವುಗಳನ್ನು ಗರುಡಾ ಏರೋಸ್ಪೇಸ್ ಎಂಬ ಸಂಸ್ಥೆ ನೀಡುತ್ತಿದೆ.

==

ರಜನೀಕಾಂತ್‌ ಮನೆಯೂ ಜಲಾವೃತ

ಚೆನ್ನೈನಲ್ಲಿನ ಭಾರಿ ಮಳೆಯಿಂದಾಗಿ ಸೂಪರ್‌ಸ್ಟಾರ್‌ ರಜನೀಕಾಂತ್‌ ಅವರ ನಿವಾಸಕ್ಕೂ ನೀರು ನುಗ್ಗಿದೆ. ನಗರದ ಪೋಯೆಸ್‌ ಗಾರ್ಡನ್‌ನಲ್ಲಿ ರಜನೀಕಾಂತ್‌ ಮನೆ ಇದ್ದು, ಈ ಹಿಂದೆಯೂ ಹಲವು ಭಾರಿ ಮಳೆ ಮತ್ತು ಚಂಡಮಾರುತದ ವೇಳೆಯೂ ನೀರು ನುಗ್ಗಿತ್ತು.

ಜಲಾಶಯಗಳೆಲ್ಲಾ ಭರ್ತಿ:

2-3 ದಿನಗಳಿಂದ ತಮಿಳುನಾಡಿನಾದ್ಯಂತ ಸುರಿಯುತ್ತಿರುವ ಭಾರಿ ಮಳೆಗೆ ರಾಜ್ಯದ ಬಹುತೇಕ ಎಲ್ಲಾ ಜಲಾಶಯ, ಬ್ಯಾರೇಜ್‌ಗಳು ಭರ್ತಿಯಾಗಿವೆ. ಚೋಳಾವರಂನಲ್ಲಿ ಮಂಗಳವಾರದಿಂದ ಬುಧವಾರದ ಒಂದು ದಿನದ ಅವಧಿಯಲ್ಲಿ 30 ಸೆಂ.ಮೀ. ಮಳೆಯಾಗಿದೆ.