ಕೆನಡಾದ ವ್ಯಾಂಕೋವರ್‌ನಲ್ಲಿರುವ ಗುರುದ್ವಾರದಲ್ಲಿ ಖಲಿಸ್ತಾನಿಗಳಿಂದ ಗುರುದ್ವಾರ ವಿರೂಪ

| N/A | Published : Apr 21 2025, 12:57 AM IST / Updated: Apr 21 2025, 06:17 AM IST

ಸಾರಾಂಶ

ಕೆನಡಾದ ವ್ಯಾಂಕೋವರ್‌ನಲ್ಲಿರುವ ಗುರುದ್ವಾರವನ್ನು ಭಾರತ ಹಾಗೂ ಮೋದಿ ವಿರೋಧಿ ಗೀಚುಬರಹಗಳಿಂದ ವಿರೂಪಗೊಳಿಸಲಾಗಿದೆ. ಇದರ ಹಿಂದೆ ಖಲಿಸ್ತಾನಿ ಪರ ಸಿಖ್‌ ಪ್ರತ್ಯೇಕತಾವಾದಿಗಳ ಗುಂಪಿನ ಕೈವಾಡವಿದೆ ಎಂದು ಖಾಲ್ಸಾ ದಿವಾನ್‌ ಸೊಸೈಟಿ ಆರೋಪಿಸಿದೆ.

ಒಟ್ಟಾವಾ: ಕೆನಡಾದ ವ್ಯಾಂಕೋವರ್‌ನಲ್ಲಿರುವ ಗುರುದ್ವಾರವನ್ನು ಭಾರತ ಹಾಗೂ ಮೋದಿ ವಿರೋಧಿ ಗೀಚುಬರಹಗಳಿಂದ ವಿರೂಪಗೊಳಿಸಲಾಗಿದೆ. ಇದರ ಹಿಂದೆ ಖಲಿಸ್ತಾನಿ ಪರ ಸಿಖ್‌ ಪ್ರತ್ಯೇಕತಾವಾದಿಗಳ ಗುಂಪಿನ ಕೈವಾಡವಿದೆ ಎಂದು ಖಾಲ್ಸಾ ದಿವಾನ್‌ ಸೊಸೈಟಿ ಆರೋಪಿಸಿದೆ. 

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಸೊಸೈಟಿ, ‘ಕೆನಡಾದ ಸಿಖ್‌ ಸಮುದಾಯದೊಳಗೆ ಭಯ ಸೃಷ್ಟಿಸಿ ಅವರನ್ನು ಪ್ರತ್ಯೇಕಿಸುವ ಸಲುವಾಗಿ ಉಗ್ರ ಶಕ್ತಿಗಳಿಂದ ನಡೆಯುತ್ತಿರುವ ಅಭಿಯಾನದ ಭಾಗವಾಗಿ ಗುರುದ್ವಾರ ವಿರೂಪ ಘಟನೆ ನಡೆದಿದೆ. ಇದು, ಸಿಖ್‌ ಧರ್ಮ ಮತ್ತು ಕೆನಡಾ ಸಮಾಜದ ಅಡಿಪಾಯವಾಗಿರುವ ಒಳಗೊಳ್ಳುವಿಕೆ, ಗೌರವ, ಪರಸ್ಪರ ಬೆಂಬಲದ ತತ್ವಗಳನ್ನು ದುರ್ಬಲಗೊಳಿಸುತ್ತದೆ. 

ಇದರ ವಿರುದ್ಧ ಕೆನಡಾ ಜನತೆ ನಿಲ್ಲಬೇಕು’ ಎಂದು ಹೇಳಿದೆ. ಅತ್ತ, ವ್ಯಾಂಕೋವರ್‌ ಪೊಲೀಸ್‌ ಇಲಾಖೆಯ ವಕ್ತಾರ ಮಾತನಾಡಿ, ‘ಗೋಡೆಯ ಮೇಲೆ ಶನಿವಾರ ಬರೆಯಲಾದ ಮುರ್ದಾಬಾದ್‌ ಪದವನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲಾಗುವುದು’ ಎಂದು ಹೇಳಿದರು.