ಸಾರಾಂಶ
ಜ್ಞಾನವಾಪಿ ಮಸೀದಿಯ ಅರ್ಜಿ ಸ್ವೀಕಾರಾರ್ಹತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಲು ಸುಪ್ರೀಂ ಕೋರ್ಟ್ ಸಮ್ಮತಿ ಸೂಚಿಸಿದೆ.
ನವದೆಹಲಿ: ವಾರಾಣಸಿಯ ಜ್ಞಾನವಾಪಿ ಮಸೀದಿಯ ಜಾಗದಲ್ಲಿ ದೇಗುಲ ಮರುಸ್ಥಾಪನೆ ಕೋರಿ ಸಲ್ಲಿಸಿದ್ದ ಅರ್ಜಿಗಳು ವಿಚಾರಣೆಗೆ ಅರ್ಹ ಎಂಬ ಅಲಹಾಬಾದ್ ಹೈಕೋರ್ಟ್ನ ಆದೇಶ ಪ್ರಶ್ನಿಸಿರುವ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಸಮ್ಮತಿ ವ್ಯಕ್ತಪಡಿಸಿದೆ.
ದೇಗುಲ ಮರುಸ್ಥಾಪನೆ ಕೋರಿದ್ದ ಅರ್ಜಿಗಳನ್ನು ವಜಾ ಮಾಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಕಳೆದ ಡಿ.19ರಂದು ಹೈಕೋರ್ಟ್ ವಜಾ ಮಾಡಿತ್ತು. ಅದಾದ ನಂತರ ಅಲ್ಲಿ ಪುರಾತತ್ವ ಇಲಾಖೆಯಿಂದ ಸಮೀಕ್ಷೆ ನಡೆಸಿ ಇತ್ತೀಚೆಗೆ ವರದಿಯನ್ನೂ ಸಲ್ಲಿಸಲಾಗಿತ್ತು.ಈ ನಡುವೆ ಹೈಕೋರ್ಟ್ನ ಆದೇಶವನ್ನು ಜ್ಞಾನವಾಪಿ ಮಸೀದಿ ಆಡಳಿತ ಮಂಡಳಿಯಾದ ಅಂಜುಮನ್ ಇತ್ತೇಝಾಮಿಯಾ ಮಸ್ಜಿದ್ ಪ್ರಶ್ನಿಸಿ ಸುಪ್ರೀಂ ಮೊರೆ ಹೋಗಿತ್ತು. ಈ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ಕೋರ್ಟ್ ಇದೀಗ ಒಪ್ಪಿದೆ.