ಸಾರಾಂಶ
ಶಿಮ್ಲಾ: ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಅಡ್ಡಮತದಾನ ಮಾಡಿದ ಪರಿಣಾಮ ಪತನದ ಭೀತಿ ಎದುರಿಸುತ್ತಿರುವ ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರದಲ್ಲಿ ಬಿಕ್ಕಟ್ಟು ಇನ್ನೂ ಶಮನವಾಗಿಲ್ಲ.
ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಿಮಾಚಲಕ್ಕೆ ತೆರಳಿ ಬಿಕ್ಕಟ್ಟು ಬಗೆಹರಿಸಿದ್ದಾರೆ ಎಂದು ಹೇಳಲಾದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಅಧ್ಯಕ್ಷೆ ಪ್ರತಿಭಾ ಸಿಂಗ್ ಬಿಜೆಪಿಯನ್ನು ಹೊಗಳಿ ಸಂಚಲನ ಮೂಡಿಸಿದ್ದಾರೆ.
‘ಬಿಜೆಪಿ ನಮಗಿಂತ ಚೆನ್ನಾಗಿ ಕೆಲಸ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಸೂಚನೆ ಮೇಲೆ ಅದು ಸಾಕಷ್ಟು ಕೆಲಸಗಳನ್ನು ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ದುರ್ಬಲವಾಗಿದೆ’ ಎಂದು ಪ್ರತಿಭಾ ಸಿಂಗ್ ಶುಕ್ರವಾರ ಹೇಳಿದ್ದಾರೆ.
ಪ್ರತಿಭಾ ಅವರ ಪುತ್ರ, ರಾಜ್ಯದಲ್ಲಿ ಸಚಿವರಾಗಿರುವ ವಿಕ್ರಮಾದಿತ್ಯ ಸಿಂಗ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಅದನ್ನು ಮರಳಿ ಪಡೆದುಕೊಂಡು, ಆರು ಬಂಡಾಯ ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಿದ ಬೆನ್ನಲ್ಲೇ ಪ್ರತಿಭಾ ಈ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
‘ಕಾಂಗ್ರೆಸ್ನಲ್ಲಿ ಇನ್ನೂ ಸಾಕಷ್ಟು ಕೆಲಸಗಳು ಆಗಬೇಕಿದೆ. ಬಿಜೆಪಿಯವರು ನಮಗಿಂತ ಚೆನ್ನಾಗಿ ಕೆಲಸ ಮಾಡುತ್ತಿರುವುದು ನಿಜ. ಆರಂಭದಿಂದಲೂ ಇದನ್ನು ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರಿಗೆ ಹೇಳುತ್ತಾ ಬಂದಿದ್ದೇನೆ.
ಮುಂಬರುವ ಚುನಾವಣೆಯಲ್ಲಿ ನಾವು ಪೈಪೋಟಿ ನೀಡಬೇಕೆಂದರೆ ಪಕ್ಷವನ್ನು ಬಲಗೊಳಿಸಬೇಕಿದೆ. ಆದರೆ ಪಕ್ಷದಲ್ಲಿ ತಳಮಟ್ಟದಲ್ಲಿ ಸಾಕಷ್ಟು ಸಮಸ್ಯೆಗಳಿವೆ’ ಎಂದೂ ಪ್ರತಿಭಾ ಹೇಳಿದ್ದಾರೆ.