ಸಾರಾಂಶ
‘ಜಾಗತಿಕ ತಾಪಮಾನವು 2 ಡಿಗ್ರಿಯಷ್ಟು ಏರಿದರೆ, ಹಿಂದು ಕುಶ್ ಹಿಮಾಲಯವು, ಶತಮಾನದ ಅಂತ್ಯದ ವೇಳೆಗೆ ತನ್ನ ಹಿಮದ ಶೇ.75 ರಷ್ಟು ಭಾಗವನ್ನು ಕಳೆದುಕೊಳ್ಳಬಹುದು. ಆಗ 200 ಕೋಟಿ ಜನರಿಗೆ ಜೀವಜಲವನ್ನು ಒದಗಿಸುವ ನೀರ್ಗಲ್ಲುಗಳು ಕರಗಿ ಮಾಯವಾಗುತ್ತವೆ’
ನವದೆಹಲಿ : ‘ಜಾಗತಿಕ ತಾಪಮಾನವು 2 ಡಿಗ್ರಿಯಷ್ಟು ಏರಿದರೆ, ಹಿಂದು ಕುಶ್ ಹಿಮಾಲಯವು, ಶತಮಾನದ ಅಂತ್ಯದ ವೇಳೆಗೆ ತನ್ನ ಹಿಮದ ಶೇ.75 ರಷ್ಟು ಭಾಗವನ್ನು ಕಳೆದುಕೊಳ್ಳಬಹುದು. ಆಗ 200 ಕೋಟಿ ಜನರಿಗೆ ಜೀವಜಲವನ್ನು ಒದಗಿಸುವ ನೀರ್ಗಲ್ಲುಗಳು ಕರಗಿ ಮಾಯವಾಗುತ್ತವೆ’ ಎಂದು ಅಧ್ಯಯನವೊಂದು ಎಚ್ಚರಿಸಿದೆ. ತಾಪಾಮಾನ ಏರಿಕೆ ಅತಿದೊಡ್ಡ ಸಮಸ್ಯೆಯಾಗಿ ಜಗತ್ತನ್ನು ಕಾಡುತ್ತಿರುವ ಈ ಹೊತ್ತಿನಲ್ಲಿ, ಭಾರತದ ಪಾಲಿಗೆ ಇದು ಎಚ್ಚರಿಕೆ ಗಂಟೆಯಾಗಿದೆ.
ಸೈನ್ಸ್ ಜರ್ನಲ್ನಲ್ಲಿ ಈ ಅಧ್ಯಯನ ಪ್ರಕಟವಾಗಿದ್ದು, ತಜಕಿಸ್ತಾನದ ದುಶಾಂಬೆಯಲ್ಲಿ ನಡೆದ ವಿಶ್ವಸಂಸ್ಥೆಯ ನೀರ್ಗಲ್ಲು ಕುರಿತ ಸಭೆಯಲ್ಲಿ ಚರ್ಚಿಸಲಾಗಿದೆ.
ಆದರೆ, ತಾಪಮಾನ ಏರಿಕೆಯನ್ನು 1.5 ಡಿಗ್ರಿಗೆ ನಿಯಂತ್ರಣಕ್ಕೆ ತಂದರೆ ಯುರೋಪ್ನ ಕಾಕಸಸ್ ನೀರ್ಗಲ್ಲು ಮತ್ತು ಭಾರತದ ಹಿಮಾಲಯಗಳ ಶೇ.40-45ರಷ್ಟು ನೀರ್ಗಲ್ಲುಗಳ ಕರಗುವಿಕೆಯನ್ನು ತಡೆಯಬಹುದು ಎಂದ ಸಮಾಧಾನಕರ ಸಂಗತಿಯನ್ನೂ ಅದು ತಿಳಿಸಿದೆ.
ಜಾಗತಿಕ ಪರಿಣಾಮ:
ಇಂದಿನ ಹವಾಮಾನ ನೀತಿಗಳು ಹೀಗೇ ಮುಂದುವರಿದರೆ, ಶತಮಾನದ ಅಂತ್ಯದ ವೇಳೆ ಏರಿಕೆ ಪ್ರಮಾಣ 2.7 ಡಿಗ್ರಿ ತಲುಪಿ, ಜಾಗತಿಕವಾಗಿ ಹಿಮನದಿಗಳ ಕಾಲು ಭಾಗ (ಶೇ.25) ಮಾತ್ರ ಉಳಿಯುತ್ತದೆ. ಇದರಿಂದ, ನೀರಿಗಾಗಿ ಹಿಮನದಿಗಳನ್ನೇ ಆಶ್ರಯಿಸಿರುವ ಯುರೋಪ್, ಪಶ್ಚಿಮ ಅಮೆರಿಕ, ಕೆನಡಾ, ಐಸ್ಲ್ಯಾಂಡ್ನ ಪರ್ವತ ಪ್ರದೇಶಗಳು ತೀವ್ರ ಪರಿಣಾಮ ಎದುರಿಸುತ್ತವೆ.
2020ರ ವೇಳೆಗೇ ಇಲ್ಲಿ ಕೇವಲ ಶೇ.10-15ರಷ್ಟು ಹಿಮ ಉಳಿದಿದ್ದು, ಒಂದೊಮ್ಮೆ ತಾಪಮಾನ 2 ಡಿಗ್ರಿ ತಲುಪಿದರೆ ಅದೆಲ್ಲವೂ ಕರಗಿಹೋಗುತ್ತದೆ ಎಂದು ಅಧ್ಯಯನ ಎಚ್ಚರಿಸಿದೆ.. 2015ರ ಪ್ಯಾರಿಸ್ ಒಪ್ಪಂದದ ಪ್ರಕಾರ, ಜಾಗತಿಕವಾಗಿ 1.5 ಡಿಗ್ರಿಯ.ನಷ್ಟು ತಾಪಮಾನವನ್ನು ಕಾಯ್ದಿರಿಸಿಕೊಳ್ಳುವ ಗುರಿಯನ್ನು ಹಾಕಿಕೊಳ್ಳಲಾಗಿತ್ತು.