ಸಾರಾಂಶ
ಆರ್ಎಸ್ಎಸ್ ಮುಖಂಡ ಮೋಹನ್ ಭಾಗವತ್ ಅವರು ಭಾರತವನ್ನು 'ಮೂಲತಃ ಹಿಂದೂ ರಾಷ್ಟ್ರ' ಎಂದು ಬಣ್ಣಿಸಿದ್ದಾರೆ. ಜೊತೆಗೆ, ಹಿಂದೂ ಸಮಾಜವು ಒಗ್ಗಟ್ಟಿನಿಂದ ಇರಬೇಕು ಮತ್ತು ಇತರ ಸಮುದಾಯಗಳನ್ನು ಸಹ ಒಳಗೊಳ್ಳಬೇಕು ಎಂದು ಕರೆ ನೀಡಿದ್ದಾರೆ.
ಕೋಟಾ: ‘ಭಾರತ ಮೂಲತಃ ಹಿಂದೂ ರಾಷ್ಟ್ರ’ ಎಂದು ಹೇಳಿರುವ ಆರ್ಎಸ್ಎಸ್ ಮುಖಂಡ ಮೋಹನ್ ಭಾಗವತ್, ‘ಹಿಂದೂ ಸಮಾಜವು ಭಾಷೆ, ಜಾತಿ, ಪ್ರಾದೇಶಿಕ ವಿವಾದಗಳ ಭಿನ್ನತೆಯನ್ನು ಮರೆತು ತನ್ನ ಸುರಕ್ಷತೆಗಾಗಿ ಒಗ್ಗೂಡಬೇಕು ಹಾಗೂ ಇತರರನ್ನೂ (ಇತರ ಸಮಾಜಗಳನ್ನೂ) ತನ್ನ ಜತೆಗೆ ಕರೆದುಕೊಂಡು ಹೋಗಬೇಕು’ ಎಂದು ಕರೆ ನೀಡಿದ್ದಾರೆ.
ರಾಜಸ್ಥಾನದ ಬರನ್ನಲ್ಲಿ ನಡೆದ ‘ಸ್ವಯಂಸೇವಕ ಏಕತ್ರೀಕರಣ’ ಸಮಾರಂಭದಲ್ಲಿ ಮಾತನಾಡಿದ ಭಾಗವತ್, ‘ಭಾರತ ಮೂಲತಃ ಹಿಂದೂ ರಾಷ್ಟ್ರ. ಅನಾದಿ ಕಾಲದಿಂದ ಇಲ್ಲಿ ವಾಸವಿದ್ದೇವೆ . ಆದರೆ ನಂತರ ಹಿಂದೂ ಪದ ಬಂತು. ಹಿಂದೂಗಳು ಎಲ್ಲರನ್ನೂ ತಮ್ಮವರೆಂದು ತಿಳಿದು ಸಹಬಾಳ್ವೆ ನಡೆಸುತ್ತಿದ್ದಾರೆ’ ಎಂದರು. ಜೊತೆಗೆ, ‘ಶಿಸ್ತುಬದ್ಧ ನಡವಳಿಕೆ, ರಾಷ್ಟ್ರದ ಪ್ರತಿ ಕರ್ತವ್ಯ ಮತ್ತು ಗುರಿಗಳ ಪ್ರತಿ ಸಮರ್ಪಣೆ ಅಗತ್ಯ’ ಎಂದರು.
ಈ ವೇಳೆ, ‘ಸಂಘದ ಕಾರ್ಯವಿಧಾನ ಯಾಂತ್ರಿಕವಲ್ಲ. ಅದು ಕಲ್ಪನೆ ಆಧರಿತ’ ಎಂದ ಭಾಗವತ್, ‘ಇಲ್ಲಿ ಮೌಲ್ಯಗಳು ನಾಯಕರಿಂದ ಸ್ವಯಂಸೇವಕರಿಗೆ, ಅವರ ಪರಿವಾರಕ್ಕೆ ಹಾಗೂ ಸಮಾಜಕ್ಕೆ ರವಾನಿಸಲ್ಪಡುತ್ತದೆ‘ ಎಂದರು. ‘ಅಂತೆಯೇ ಸಮಾಜದೊಂದಿಗೆ ಕಾರ್ಯಕರ್ತರು ಸಂಪರ್ಕದಲ್ಲಿರಬೇಕು. ನಮ್ಮ ಗಮನ ಸಾಮಾಜಿಕ ಸಾಮರಸ್ಯ, ನ್ಯಾಯ, ಆರೋಗ್ಯ, ಶಿಕ್ಷಣ ಹಾಗೂ ಸ್ವಾವಲಂಬನೆಯ ಮೇಲಿರಬೇಕು’ ಎಂದು ಕಿವಿಮಾತು ಹೇಳಿದರು.
ಭಾರತದ ಜಾಗತಿಕ ಖ್ಯಾತಿ ಮತ್ತು ಸ್ಥಾನ ಅದರ ಶಕ್ತಿಯಿಂದ ದೊರೆತಿದ್ದು. ರಾಷ್ಟ್ರ ಬಲಶಾಲಿಯಾದಾಗ ಮಾತ್ರರ ವಲಸಿಗರ ಸುರಕ್ಷತೆಯನ್ನು ಖಚಿತಪಡಿಸಲು ಸಾಧ್ಯ ಎಂದು ಭಾಗವತ್ ಹೇಳಿದರು.