ಚಹಾ ತೋಟದ ಕೆಲಸಗಾರನ ಹತ್ಯೆಢಾಕಾ: ನೆರೆಯ ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆ ವೇಳೆ ಹಿಂದುಗಳ ಹತ್ಯಾ ಸರಣಿ ಮುಂದುವರಿದಿದ್ದು, ಚಹಾ ತೋಟದಲ್ಲಿ ಕೆಲಸ ಮಾಡುತ್ತಿದ್ದ ಹಿಂದೂ ವ್ಯಕ್ತಿಯೊಬ್ಬನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಸೋಮವಾರ ರಾತ್ರಿ ಹಿಂದೂ ವರ್ತಕರೊಬ್ಬರನ್ನು ಅವರ ಅಂಗಡಿಯಲ್ಲಿ ಹತ್ಯೆ ಮಾಡಲಾಗಿತ್ತು. ಅದರ ಬೆನ್ನಲ್ಲೇ ಈ ಘಟನೆ ನಡೆದಿದೆ.ಮೃತ ರತನ್‌ ಶುವೋ ಕರ್‌ (28) ಮೌಲ್ವಿಬಜಾರ್‌ ಎಂಬಲ್ಲಿನ ಟೀ ತೋಟದಲ್ಲಿ ಕೆಲಸಕ್ಕಿದ್ದ. ಅದೇ ಜಾಗದಲ್ಲಿ ಬುಧವಾರ ಬೆಳಗ್ಗೆ ಆತನ ಶವ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದ್ದು, ಘಟನೆಗೆ ಕಾರಣ ತಿಳಿಯಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕರ್‌ ಸಾವಿನ ಬಗ್ಗೆ ಆತನ ಸಹೋದರ ಮಾತನಾಡಿ, ‘ನಾವು ರತನ್‌ಗಾಗಿ ಮಂಗಳವಾರ ರಾತ್ರಿಯಿಂದ ಹುಡುಕುತ್ತಿದ್ದೆವು. ಮರುದಿನ ಬೆಳಗ್ಗೆ ಆತ ಮೃತಪಟ್ಟಿರುವುದು ತಿಳಿಯಿತು. ಕೊಲೆಗೆ ಏನು ಕಾರಣವೆಂದು ತಿಳಿದಿಲ್ಲ’ ಎಂದು ಗೋಳಿಟ್ಟಿದ್ದಾರೆ.