ಸಾರಾಂಶ
ಹೈದ್ರಾಬಾದ್: ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿನ ಹೀನಾಯ ಸೋಲು ಮತ್ತು ಲೋಕಸಭಾ ಚುನಾವಣೆಗೂ ಮುನ್ನ ಪಕ್ಷದ ನಾಯಕರ ಸರಣಿ ವಲಸೆಯಿಂದ ಕಂಗೆಟ್ಟಿರುವ ಭಾರತ್ ರಾಷ್ಟ್ರೀಯ ಸಮಿತಿ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರು ಇದೀಗ ತಮ್ಮ ಪಕ್ಷದ ಕಚೇರಿ ವಾಸ್ತು ಬದಲಾವಣೆಗೆ ಮುಂದಾಗಿದ್ದಾರೆ.
ವಾಸ್ತುವನ್ನು ಬಹುವಾಗಿ ನಂಬುವ ರಾವ್, 2014 ಮತ್ತು 2017ರಲ್ಲೂ ಕಟ್ಟಡದಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದರು. ಅದರ ಮುಂದುವರೆದ ಭಾಗವಾಗಿ ಇದೀಗ ಕಟ್ಟಡದ ಮುಖ್ಯ ಪ್ರವೇಶ ಗೇಟ್ ಅನ್ನು ವಾಸ್ತು ಪ್ರಕಾರವಾಗಿ ಬದಲಾವಣೆ ಮಾಡಲಾಗುತ್ತಿದೆ.
ಮುಖ್ಯ ಗೇಟ್ ಅನ್ನು ವಾಯುವ್ಯ ದಿಕ್ಕಿನಲ್ಲಿ ಇಡಲಾಗುತ್ತಿದೆ. ಈಶಾನ್ಯ ಭಾಗದಲ್ಲಿ ಒಂದು ರ್ಯಾಂಪ್ ಕೂಡಾ ನಿರ್ಮಿಸಲಾಗುತ್ತಿದೆ. ಕಟ್ಟಡವು ಮೂರು ರಸ್ತೆಗಳು ಸೇರುವ ಜಾಗದಲ್ಲಿ ಬರುವ ಕಾರಣ ನಕಾರಾತ್ಮಕ ಶಕ್ತಿಗಳನ್ನು ದೂರಮಾಡಲು ಈ ಎಲ್ಲಾ ಬದಲಾವಣೆ ಮಾಡಲಾಗುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ಇನ್ನು ಸಿಎಂ ಕಚೇರಿ ಕೂಡಾ ವಾಸ್ತು ಪ್ರಕಾರ ಇಲ್ಲ ಎಂಬ ಕಾರಣಕ್ಕೇ, ತಾವು ಸಿಎಂ ಆಗಿದ್ದ 10 ವರ್ಷಗಳ ಅವಧಿಯಲ್ಲಿ ಕೇವಲ ಬೆರಳೆಣಿಕೆ ಬಾರಿಯಷ್ಟೇ ರಾವ್ ಆ ಕಟ್ಟಡಕ್ಕೆ ಭೇಟಿ ನೀಡಿದ್ದರು.