ಸಾರಾಂಶ
ನವದೆಹಲಿ: 18ನೇ ಲೋಕಸಭಾ ಚುನಾವಣೆಯಲ್ಲಿ 370 ಸ್ಥಾನಗಳನ್ನು ಗೆಲ್ಲುವ ಗುರಿ ಇಟ್ಟಿರುವ ಆಡಳಿತಾರೂಢ ಬಿಜೆಪಿ, ತಾನು ಪ್ರಕಟಿಸಿರುವ 267 ಅಭ್ಯರ್ಥಿಗಳ ಎರಡೂ ಪಟ್ಟಿಯಲ್ಲಿ ಈವರೆಗೆ ಶೇ.21ರಷ್ಟು ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಿದೆ.
ಅದರಲ್ಲೂ ಎರಡನೇ ಪಟ್ಟಿಯಲ್ಲಿ ಪ್ರಕಟಿಸಿದ 72 ಅಭ್ಯರ್ಥಿಗಳಲ್ಲಿ 30 ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಲಾಗಿದೆ. ಮೊದಲ ಪಟ್ಟಿಯಲ್ಲೂ 33 ಹಾಲಿ ಸಂಸದರಿಗೆ ಕೊಕ್ ನೀಡಲಾಗಿತ್ತು.
ಅಲ್ಲದೆ 4 ಹಾಲಿ ಸಂಸದರು ತಮ್ಮ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಪ್ರಕಟಿಸುವ ಮುನ್ನವೇ ಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿ ಪ್ರಕಟಿಸಿದ್ದರು.
ಇದರ ಪೈಕಿ ದೆಹಲಿಯ ಏಳು ಕ್ಷೇತ್ರಗಳಲ್ಲಿ ಮನೋಜ್ ತಿವಾರಿ ಅವರನ್ನು ಬಿಟ್ಟು ಎಲ್ಲ 6 ಕ್ಷೇತ್ರಗಳ ಸಂಸದರಿಗೆ ಟಿಕೆಟ್ ನೀಡಿಲ್ಲ. ಕರ್ನಾಟಕದಲ್ಲಿ 6 ಸಂಸದರಿಗೆ ಗೇಟ್ಪಾಸ್ ನೀಡಲಾಗಿದೆ.
ಇದರಲ್ಲಿ ಹಲವು ವಿವಾದಿತರೂ ಸೇರಿದಂತೆ ಪಕ್ಷಕ್ಕೆ ಮುಜುಗರ ಉಂಟು ಮಾಡುವಂತಹ ಹೇಳಿಕೆಗಳನ್ನು ನೀಡುತ್ತಿದ್ದ ಪ್ರಜ್ಞಾ ಸಿಂಗ್, ರಮೇಶ್ ಬಿಧೂರಿ, ಪರ್ವೇಶ್ ವರ್ಮಾ, ರಮೇಶ್ ಪೋಖ್ರಿಯಾಲ್ ಪ್ರಮುಖರಾಗಿದ್ದಾರೆ.