ಸಾರಾಂಶ
ನವದೆಹಲಿ ; ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ವೇಳೆ ಮಧ್ಯಪ್ರವೇಶಿಸಲು ವಿರೋಧ ಪಕ್ಷದ ನಾಯಕರಿಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಇಂಡಿಯಾ ಬ್ಲಾಕ್ ಪಕ್ಷಗಳು ಬುಧವಾರ ರಾಜ್ಯಸಭೆಯಿಂದ ಸಭಾತ್ಯಾಗ ಮಾಡಿದವು.
ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಗೆ ಮೋದಿ ಅವರ ಉತ್ತರದ ಸಮಯದಲ್ಲಿ ಮಧ್ಯಪ್ರವೇಶಿಸಲು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಬಯಸಿದ್ದರು. ಆದರೆ ಸಭಾಪತಿ ಜಗದೀಪ್ ಧನಕರ್ ಅವರು ಖರ್ಗೆ ಮಾತಿಗೆ ಓಗೊಡಲಿಲ್ಲ. ಇದಕ್ಕೆ ಆಕ್ಷೇಪಿಸಿದ ಇಂಡಿಯಾ ಬ್ಲಾಕ್ ಸಂಸದರು ಘೋಷಣೆ ಕೂಗಿ, ಖರ್ಗೆಗೆ ಮಾತನಾಡಲು ಅವಕಾಶ ನೀಡುವಂತೆ ಕೇಳಿದರು. ಘೋಷಣೆ-ಘೋಷಗಳ ನಡುವೆಯೇ ಮೋದಿ ಭಾಷಣ ಮುಂದುವರೆಸಿದರು.
ಇದನ್ನು ಖಂಡಿಸಿದ ಇಂಡಿಯಾ ಬ್ಲಾಕ್ ಸಂಸದರು ಸದನದಿಂದ ಹೊರನಡೆದರು.
ಸಭಾಪತಿ, ಮೋದಿ ಕಿಡಿ:
‘ವಿಪಕ್ಷಗಳು ಮಾಡಿದ ಸಭಾತ್ಯಾಗ ಸಂವಿಧಾನಕ್ಕೆ ಮಾಡಿದ ಅಪಮಾನ’ ಧನಕರ್ ಖಂಡಿಸಿದರು. ಮೋದಿ ಕೂಡ ಖಂಡಿಸಿ, ‘ವಿಪಕ್ಷಗಳು ಎನ್ಡಿಎ ಗೆದ್ದಿದ್ದನ್ನು ಸಹಿಸಿಕೊಳ್ಳದೇ ಸಭಾತ್ಯಾಗ ಮಾಡಿವೆ’ ಎಂದು ಕುಟಕಿದರು.
ಇದಕ್ಕೆ ತಿರುಗೇಟು ನೀಡಿರುವ ಖರ್ಗೆ, ‘ಮೋದಿ ಭಾಷಣದಲ್ಲಿ ಕೆಲವು ತಪ್ಪು ಮಾಹಿತಿ ನೀಡಿದರು. ಅದಕ್ಕೆ ಸ್ಷಷ್ಟನೆ ನೀಡಲು ನಾನು ಮಧ್ಯಪ್ರವೇಶ ಬಯಸಿದ್ದೆ. ಆದರೆ ಅವಕಾಶ ಸಿಗಲಿಲ್ಲ’ ಎಂದರು.