ಇದು ಭಾರತದ ಪಾಲಿಗೆ ನಿರ್ಣಾಯಕ ಅವಧಿ
ಭಾರತೀಯ ಮೂಲದವರನ್ನುದ್ದೇಶಿಸಿ ಪ್ರಧಾನಿ ಮಾತು12 ವರ್ಷದಲ್ಲಿ 25 ಕೋಟಿ ಜನ ಬಡತನದಿಂದ ಪಾರು
ಭಾರತೀಯರ ಸಬಲೀಕರಣ, ಜೀವನ ಪರಿವರ್ತನೆ ಗುರಿಪ್ಯಾರಿಸ್: ‘ಭಾರತದ ಪ್ರಯಾಣದಲ್ಲಿ ಪ್ರಸ್ತುತ ಕಾಲವು ನಿರ್ಣಾಯಕ ಅವಧಿಯಾಗಿದ್ದು, ನಮ್ಮ ಆಕಾಂಕ್ಷೆಗಳು ಹೊಸ ಎತ್ತರವನ್ನು ತಲುಪುತ್ತಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ರಾತ್ರಿ ಹೇಳಿದ್ದಾರೆ.
6 ದಿನಗಳ ವಿದೇಶ ಪ್ರವಾಸ ಮುಗಿಸಿ ಭಾರತಕ್ಕೆ ಮರಳುವ ಮುನ್ನ ಪ್ಯಾರಿಸ್ನಲ್ಲಿ ಆಯೋಜನೆಯಾಗಿದ್ದ ಭಾರತ ಮೂಲದವರೊಂದಿಗಿನ ಸಂಭಾಷಣೆ ವೇಳೆ ಅವರು ಮಾತನಾಡಿದರು. ‘ಕಳೆದ 12 ವರ್ಷಗಳಲ್ಲಿ ಭಾರತವು ವಿವಿಧ ಕ್ಷೇತ್ರಗಳಲ್ಲಿ ಪರಿವರ್ತನಾತ್ಮಕ ಬೆಳವಣಿಗೆಯನ್ನು ಕಂಡಿದೆ. ಈ ಅವಧಿಯಲ್ಲಿ 25 ಕೋಟಿ ಜನರನ್ನು ಬಡತನದಿಂದ ಹೊರತರಲಾಗಿದೆ. ಆರ್ಥಿಕ ಬೆಳವಣಿಗೆಯ ಹೊರತಾಗಿ, ನಮ್ಮ ಪ್ರಯಾಣವು ಜನರ ಸಬಲೀಕರಣ ಮತ್ತು ಅವರ ಜೀವನವನ್ನು ಪರಿವರ್ತಿಸುವ ಗುರಿ ಹೊಂದಿದೆ. ಸದ್ಯದ ಕಾಲವು ಭಾರತದ ಪ್ರಯಾಣದಲ್ಲಿ ನಿರ್ಣಾಯಕ ಅವಧಿಯಾಗಿದೆ. ಭಾರತದ ಅಭ್ಯುದಯಕ್ಕೆ ಅದರ ನಾಗರಿಕರೇ ಕಾರಣ’ ಎಂದರು. ಜತೆಗೆ, ‘ಜಾಗತಿಕ ಸಂಬಂಧಕ್ಕೆ ವಿಶ್ವಾಸವೇ ಬುನಾದಿ. ಇಂದು ಭಾರತವು ಇಡೀ ವಿಶ್ವದ ವಿಶ್ವಾಸಾರ್ಹ ಪಾಲುದಾರನಾಗಿ ಹೊರಹೊಮ್ಮುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲಿ ನಾವು ಒಟ್ಟಿಗೆ ಹೆಜ್ಜೆ ಇಡೋಣ. ಒಟ್ಟಿಗೆ ನಡೆದರಷ್ಟೇ ಜಾಗತಿಕ ಬೆಳವಣಿಗೆ ಸುಸ್ಥಿರವಾಗಿರುತ್ತದೆ’ ಎಂದು ಮೋದಿ ಹೇಳಿದರು.