ಸಾರಾಂಶ
ಹೊಸನಗರ : ರಾಜ್ಯಗಳಲ್ಲಿ ಹಸುಗಳ ಹತ್ಯೆ, ಕೆಚ್ಚಲು ಕತ್ತರಿಸುವಂಥ ಅಮಾನುಷ ಕೃತ್ಯಗಳು ಮುಂದುವರೆದಿದ್ದು, ಇದೀಗ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಅಂಥದ್ದೇ ಘಟನೆ ನಡೆದಿದೆ. ಮೇಯಲು ಹೋಗಿದ್ದ ಹಸುವಿನ ಕೆಚ್ಚಲನ್ನು ದುಷ್ಕರ್ಮಿಗಳು ಕತ್ತರಿಸಿದ ಘಟನೆ ನಡೆದಿದೆ. ಇತ್ತೀಚೆಗೆ ರಾಮನಗರ, ಬೆಂಗಳೂರಿನ ಚಾಮರಾಜಪೇಟೆ, ಹೊನ್ನಾವರದ ಸಾಲ್ಕೋಡುನಲ್ಲೂ ಇಂಥದ್ದೇ ಘಟನೆ ನಡೆದು ಆ ಬಗ್ಗೆ ಭಾರೀ ಆಕ್ರೋಶ, ತನಿಖೆಗೆ ಆಗ್ರಹ ಕೇಳಿಬಂದ ಹೊರತಾಗಿಯೂ ಹೊಸನಗರದಲ್ಲಿ ಮತ್ತೆ ಅಂಥದ್ದೇ ಘಟನೆ ಮರುಕಳಿಸಿದೆ.
ಘಟನೆ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಈ ಕುರಿತು ತನಿಖೆಗೆ ಆಗ್ರಹಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಹೊಸನಗರ ತಾಲೂಕು ವಿಎಚ್ಪಿ ಸಂಚಾಲಕ ಸುಧೀಂದ್ರ ಪಂಡಿತ್, ‘ಸಹಬಾಳ್ವೆ, ಸಾಂಸ್ಕೃತಿಗೆ ಹೆಸರಾದ ಮಲೆನಾಡಿನಲ್ಲಿ ಮತೀಯ ಶಕ್ತಿಗಳು ಹೆಚ್ಚುತ್ತಿರುವುದು ಆಘಾತಕಾತಿ ಸಂಗತಿ. ಹಸುವಿನ ಕೆಚ್ಚಲು ಕಡಿಯುವಂತ ನೀಚ ಮನಸ್ಥಿತಿ ಉದ್ಭವವಾಗಿರುವುದು ಆತಂಕ ತಂದಿದೆ. ಸರ್ಕಾರ ಈ ಬಗ್ಗೆ ಕಠಿಣ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ದುಷ್ಕೃತ್ಯ:
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ವಿಜಾಪುರ ಗ್ರಾಮದ ತೋಟದಕೊಪ್ಪದಲ್ಲಿ ಹಸುವಿನ ಕೆಚ್ಚಲು ಕೊಯ್ದು ಕಿಡಿಗೇಡಿಗಳು ವಿಕೃತಿ ಮೆರೆದ ಪ್ರಕರಣ ಶನಿವಾರ ನಡೆದಿದೆ. ಶನಿವಾರ ಸಂಜೆ ಸುಮಾರು 4:30ರ ವೇಳೆ ಗ್ರಾಮದ ನವೀನ್ ಎಂಬುವರಿಗೆ ಸೇರಿದ ಹಸುವನ್ನು ಮೇಯಲು ಬಿಟ್ಟಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಹಸುವಿನ ಕೆಚ್ಚಲು ಕೊಯ್ದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಈ ಕುರಿತಾಗಿ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನವೀನ್, ‘ಪ್ರತಿದಿನದಂತೆ ಶನಿವಾರ ಬೆಳಗ್ಗೆ ಕೂಡ ನಮ್ಮ ದನಗಳನ್ನು ಮೇವಿಗೆ ಬ್ಯಾಣಕ್ಕೆ ಬಿಟ್ಟಿದ್ದೆವು. ಶನಿವಾರ ಸಂಜೆ ಊರಿನ ಅನೇಕ ಜನ ಫೋನ್ ಕರೆ ಮಾಡಿ, ನಿಮ್ಮ ದನದ ಕೆಚ್ಚಲಿನಲ್ಲಿ ರಕ್ತ ಸೋರುತ್ತಿದೆ ಎಂದರು. ತಕ್ಷಣ ಸ್ಥಳಕ್ಕೆ ಹೋಗಿ ನೋಡಿದಾಗ 9 ವರ್ಷ ಪ್ರಾಯದ ಕರು ಹಾಕಿದ ಮಲೆನಾಡು ಗಿಡ್ಡ ತಳಿಯ ನಮ್ಮ ದನದ ಕೆಚ್ಚಲಿನಿಂದ ರಕ್ತ ಸೋರುತ್ತಿತ್ತು. ಯಾರೋ ದನದ ಕೆಚ್ಚಲು ಕೊಯ್ದಿದ್ದಾರೆ. ನಂತರ, ಗ್ರಾಮಸ್ಥರ ಸಹಾಯದಿಂದ ದನವನ್ನು ಮನೆಗೆ ಕರೆ ತಂದು, ಪಶುವೈದ್ಯರಾದ ಸಂತೋಷ್ ಅವರಿಂದ ಹೊಲಿಗೆ ಹಾಕಿಸಿ, ಚಿಕಿತ್ಸೆ ಕೊಡಿಸಿದ್ದೇವೆ. ಹಸುವೀಗ ಚೇತರಿಸಿಕೊಳ್ಳುತ್ತಿದೆ. ಆದರೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಕಿಡಿಕಾರಿದ್ದಾರೆ.
ಇತ್ತೀಚಿನ ಪೈಶಾಚಿಕ ಕೃತ್ಯ
ಜ.12ಬೆಂಗಳೂರಿನಲ್ಲಿ ಮೂರು ಹಸುಗಳ ಕೆಚ್ಚಲು ಕತ್ತರಿಸಿ ಕಿಡಿಗೇಡಿಗಳ ಕ್ರೌರ್ಯ
ಜ.16ನಂಜನಗೂಡು ದೇಗುಲ ಬಳಿ ಹರಕೆಗೆ ಬಿಟ್ಟ ಹಸುವಿನ ಬಾಲ ಕತ್ತರಿಸಿ ವಿಕೃತಿ
ಜ. 19ಹೊನ್ನಾವರದಲ್ಲಿ ಗಬ್ಬದ ಹಸುವಿನ ತಲೆ ಕಡಿದು ದೇಹ ತೆಗೆದುಕೊಂಡು ಪರಾರಿ
ಮೇ 13ಬೀರೂರಿನಲ್ಲಿ ಹಸು ಕಳ್ಳತನ ಯತ್ನ ವಿಫಲ ಬಳಿಕ ಕೆಚ್ಚಲು ಕತ್ತರಿಸಿ ದುಷ್ಕೃತ್ಯ
ಜೂ.13ಬಾದಾಮಿಯಲ್ಲಿ ಗರ್ಭಾವಸ್ಥೆಯಲ್ಲಿದ್ದ ಹಸುವಿನ ಕೆಚ್ಚಲು ಕತ್ತರಿಸಿದ್ದ ದುಷ್ಕರ್ಮಿಗಳು
ಜೂ.21ರಾಜಕೀಯ ದ್ವೇಷ ಹಿನ್ನೆಲೆ ಬೆಂಗಳೂರಿನ ವ್ಯಕ್ತಿಯೊಬ್ಬರ ಹಸುವಿನ ಕೆಚ್ಚಲಿಗೆ ಕತ್ತರಿ